ಬೆಂಗಳೂರು: ಮೆಟ್ರೋ ರೈಲು ಮತ್ತು ಮೊನ್ನೆ ಜಿಟಿ ಮಾಲ್ ನಲ್ಲಿ ರೈತ ಸಮುದಾಯದ ಪ್ರತಿನಿಧಿಗಳಿಗೆ ಆಗಿರುವ ಅವಮಾನಕ್ಕೆ ಪ್ರತಿಯಾಗಿ ಗುರುಮಠಕಲ ಜೆಡಿಎಸ್ ಶಾಸಕ ಶರಣಗೌಡ ಕಂದ್ಕೂರ್ ಪಂಚೆ ಧರಿಸಿ ವಿಧಾನನಸಭಾ ಅಧಿವೇಶನಕ್ಕೆ ಆಗಮಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಸದನದೊಳಗೆ ಹೋಗುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಮೆಟ್ರೋ ಮತ್ತು ಮಾಲ್ ನಲ್ಲಿ ನಡೆದಿರುವ ಸಂಗತಿಗಳು ಮನಸ್ಸಿಗೆ ನೋವನ್ನುಂಟು ಮಾಡಿವೆ. ರೈತನನ್ನು ದೇಶದ ಬೆನ್ನುಲುಬು, ಅನ್ನದಾತ ಅಂತೆಲ್ಲ ಹೇಳಿ ಅವರು ಪಂಚೆ ಉಡುವ ಕಾರಣಕ್ಕೆ ಅವಮಾನಿಸಲಾಗುತ್ತಿದೆ. ಮಾಲ್ ನಲ್ಲಿ ಅವಮಾನಕ್ಕೊಳಗಾದ ರೈತ ತನ್ನ ಹಾಗೆ ಉತ್ತರ ಕರ್ನಾಟಕದವರು. ಮುಖ್ಯಮಂತ್ರಿ ಮತ್ತು ನಗರ ಉಸ್ತುವಾರಿ ಸಚಿವರಿಗೆ ಪತ್ರ ಬರೆದು ಮಾಲ್ ಮಾಲೀಕನ ವಿರುದ್ರ್ಧ ಎಫ್ಐಅರ್ ದಾಖಲಿಸಿ ಕ್ರಮ ಜರುಗಿಸಬೇಕೆಂದು ಅಗ್ರಹಿಸಿದ್ದೇನೆ ಎಂದು ಶರಣಗೌಡ ಹೇಳಿದರು. ಸೆಕ್ಯೂರಿಟಿಯವನು ಸಹ ರೈತನ ಮಗನೇ, ಆದರೆ ಅವನು ಮೇಲಿನವರು ಹೇಳಿದಂತೆ ಕೇಳುತ್ತಾನೆ. ಹಾಗಾಗಿ ಅವನನ್ನು ಬಲಿಪಶು ಮಾಡುವ ಬದಲು ಸೆಕ್ಯೂರಿಟಿ ಏಜೆನ್ಸಿಯನ್ನು ರದ್ದು ಮಾಡಬೇಕೆಂದು ಶಾಸಕ ಹೇಳಿದರು.
ಶಾಸಕ ಶರಣಗೌಡ ಕಂದ್ಕೂರ ಸದನದಲ್ಲಿ ಹಾವೇರಿಯ ರೈತ ಫಕೀರಪ್ಪನವರಿಗೆ ಆದ ಆವಮಾನವನ್ನು ಪ್ರಸ್ತಾಪಿಸುವ ಮೊದಲೇ ಸಭಾಧ್ಯಕ್ಷ ಯುಟಿ ಖಾದರ್ ಅವರು ಜಿಟಿ ಮಾಲ್ ನಲ್ಲಿ ನಡೆದ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಪಂಚೆ ಉಡೋದು ಅವಮಾನವಲ್ಲ, ಅದು ನಮ್ಮ ಸಂಸ್ಕೃತಿಯ ದ್ಯೋತಕ, ಮಗನೊಂದಿಗೆ ಮಾಲ್ ಗೆ ಹೋದ ರೈತನಿಗೆ ಮಾಲ್ ನವರು ತೀವ್ರ ಅಪಮಾನವೆಸಗಿದ್ದಾರೆ ಎಂದು ಹೇಳಿದ ಸಭಾಧ್ಯಕ್ಷರು, ರೈತನಿಗೆ ಆದ ಅವಮಾನವನ್ನು ತೀವ್ರವಾಗಿ ಖಂಡಿಸಬೇಕು ಮತ್ತು ಮಾಲ್ ಮಾಲೀಕ ಎಷ್ಟೇ ದೊಡ್ಡ ವ್ಯಕ್ತಿಯಾಗಿತಲಿ ಅವನ ವಿರುದ್ಧ ಸರ್ಕಾ್ರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಜಿಟಿ ಮಾಲ್ನಲ್ಲಿ ಅನ್ನದಾತನಿಗೆ ಪ್ರವೇಶ ನಿರಾಕರಣೆ, ಕ್ಷಮೆಯಾಚಿಸಿದ ಮಾಲ್ ಮ್ಯಾನೇಜರ್
Published On - 11:33 am, Thu, 18 July 24