ಆಲಿಕಲ್ಲು ಸಹಿತ ಗಾಳಿ ಮಳೆಗೆ ಬೆಚ್ಚಿದ ಬೆಂಗಳೂರು: ವರುಣನ ಅಬ್ಬರಕ್ಕೆ ಸಾಲು ಸಾಲು ಅನಾಹುತ
ಬೆಂಗಳೂರಿನಲ್ಲಿ ಭಾರಿ ಆಲಿಕಲ್ಲು ಸಹಿತ ಮಳೆಯಿಂದಾಗಿ ಹಲವು ರಸ್ತೆಗಳು ಜಲಾವೃತಗೊಂಡಿವೆ. ಶಾಂತಿನಗರ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಹನಗಳು ಮುಳುಗಿವೆ. ತೀವ್ರ ಗಾಳಿ ಸಹಿತ ಮಳೆಯಿಂದ ಮರದ ರೆಂಬೆಗಳು ಉರುಳಿ ಬಿದ್ದಿದ್ದು, ಜನರ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ. ಬಿಸಿಲಿನ ಬೇಗೆಯ ನಂತರ ಮಳೆ ಬಂದರೂ, ಅದರ ತೀವ್ರತೆಯು ನಗರದಲ್ಲಿ ಅವಾಂತರ ಸೃಷ್ಟಿಸಿದೆ.
ಬೆಂಗಳೂರು, ಏಪ್ರಿಲ್ 29: ಭಾರಿ ಆಲಿಕಲ್ಲು ಸಹಿತ ಮಳೆ ಸುರಿದಿದ್ದು, ನಗರದಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಶಾಂತಿನಗರ ಸುತ್ತಮುತ್ತಲ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ನಿಂತಿದ್ದ ವಾಹನಗಳು, ಕಾರುಗಳು ಸಂಪೂರ್ಣವಾಗಿ ಮುಳುಗಿವೆ. ಮಳೆಯ ತೀವ್ರತೆಗೆ ಗಾಳಿಯ ಆರ್ಭಟವೂ ಸೇರಿಕೊಂಡಿದ್ದು, ಒಣಗಿದ ಮರದ ರೆಂಬೆಗಳು ಮತ್ತು ಕೊಂಬೆಗಳು ಗಾಳಿಯಲ್ಲೇ ಹಾರಿ ಬಂದಿವೆ. ಆಲಿಕಲ್ಲು ಸಹಿತ ಭಾರಿ ಮಳೆಯಿಂದಾಗಿ ಕಮಿಷನರ್ ಕಚೇರಿ ಬಳಿ ಸೇರಿದಂತೆ ನಗರದ ಹಲವೆಡೆ ಮರದ ಕೊಂಬೆಗಳು ಮುರಿದು ಬಿದ್ದಿವೆ. ವಿದ್ಯುತ್ ಕಂಬಗಳಿಗೂ ಹಾನಿಯಾಗಿರುವ ಸಾಧ್ಯತೆ ಇದೆ. ಕಳೆದ ಎರಡು ಮೂರು ತಿಂಗಳಿಂದ 30ರಿಂದ 35 ಡಿಗ್ರಿ ಸೆಲ್ಸಿಯಸ್ವರೆಗೆ ದಾಖಲಾಗುತ್ತಿದ್ದ ತೀವ್ರ ಬಿಸಿಲಿನ ಬೇಗೆಯ ನಂತರ ಈ ಮಳೆಯು ತಂಪೆರೆದಿದ್ದರೂ, ಇದರ ಅನಿರೀಕ್ಷಿತ ಮತ್ತು ತೀವ್ರ ಸ್ವರೂಪವು ಜನಸಾಮಾನ್ಯರಿಗೆ ಸಾಕಷ್ಟು ತೊಂದರೆ ಉಂಟುಮಾಡಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
