ಧೈರ್ಯವಿದ್ದರೆ ನಾಳೆಯೇ ಚುನಾವಣೆ ಘೋಷಿಸಿ; ಪ್ರಧಾನಿ ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಮೋದಿಯವರ ಇಂದಿನ ಹೇಳಿಕೆ ಆಘಾತಕಾರಿ ಮತ್ತು ದುಃಖಕರ ಎಂದು ಹೇಳಿದ್ದಾರೆ. ನಿಮಗೆ ಧೈರ್ಯವಿದ್ದರೆ ನಾಳೆಯೇ ಚುನಾವಣೆ ಘೋಷಿಸಿ ಎಂದು ಮಮತಾ ಬ್ಯಾನರ್ಜಿ ಮೋದಿ ಹಾಗೂ ಬಿಜೆಪಿಗೆ ಸವಾಲು ಹಾಕಿದ್ದಾರೆ.
ಕೊಲ್ಕತ್ತಾ, ಮೇ 29: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಮೋದಿ ಇಂದು ಹೇಳಿದ್ದನ್ನು ಕೇಳಿ ನಮಗೆ ಆಘಾತವಾಗಿದೆ ಮಾತ್ರವಲ್ಲದೆ ತುಂಬಾ ದುಃಖವಾಗಿದೆ. ವಿರೋಧ ಪಕ್ಷಗಳು ಕೂಡ ಮೋದಿಯ ಕರೆಗೆ ಓಗೊಟ್ಟು ಬೇರೆ ದೇಶದಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುತ್ತಿರುವಾಗ ಅವರ ಸಮ್ಮುಖದಲ್ಲಿ ಸಚಿವರು ಆಪರೇಷನ್ ಸಿಂಧೂರ್ ನಂತಹ ಆಪರೇಷನ್ ಬಂಗಾಳವನ್ನು ಮಾಡುವುದಾಗಿ ಹೇಳಿದರು. ನಾನು ಬಿಜೆಪಿ ಮತ್ತು ಮೋದಿಗೆ ಸವಾಲು ಹಾಕುತ್ತೇನೆ. ಅವರಿಗೆ ಧೈರ್ಯವಿದ್ದರೆ, ನಾಳೆ ಚುನಾವಣೆಗೆ ಹೋಗಿ. ನಾವು ಸಿದ್ಧರಿದ್ದೇವೆ, ಪಶ್ಚಿಮ ಬಂಗಾಳ ನಿಮ್ಮ ಸವಾಲನ್ನು ಸ್ವೀಕರಿಸಲು ಸಿದ್ಧವಾಗಿದೆ. ಆದರೆ ದಯವಿಟ್ಟು ನೆನಪಿಡಿ, ಸಮಯ ಒಂದೇ ರೀತಿ ಇರುವುದಿಲ್ಲ. ನೀವು ಸಮಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನಮ್ಮ ಪಕ್ಷದ ಪ್ರತಿನಿಧಿ ಅಭಿಷೇಕ್ ಬ್ಯಾನರ್ಜಿ ಕೂಡ ಭಾರತದ ಸಂಸದರ ತಂಡದಲ್ಲಿದ್ದಾರೆ. ಅವರು ಪ್ರತಿದಿನ ಭಯೋತ್ಪಾದನೆಯ ವಿರುದ್ಧ ಮಾತನಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ನೀವು ಪ್ರಧಾನಿಯಾಗಿ ಅಲ್ಲ, ಬಿಜೆಪಿ ನಾಯಕರಾಗಿ ಬಂಗಾಳದಲ್ಲಿ ನಮ್ಮ ಸರ್ಕಾರವನ್ನು ಟೀಕಿಸುತ್ತಿದ್ದೀರಿ. ನಮ್ಮ ಸರ್ಕಾರ ಭಯೋತ್ಪಾದನೆಯ ವಿರುದ್ಧ ನಿಮಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಿದೆ. ಆದರೂ ನೀವು ನಮ್ಮ ಸರ್ಕಾರವನ್ನು ವಿನಾಕಾರಣ ದೂಷಿಸುತ್ತಿದ್ದೀರಿ” ಎಂದು ಮಮತಾ ಬ್ಯಾನರ್ಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 2026ರಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ