ಕರ್ನಾಟಕ ಸರ್ಕಾರದ ನೂತನ ಪ್ರಯೋಗ: ಸಚಿವರಿಂದ 15ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯರ ಸಂದರ್ಶನ!

Updated on: Feb 21, 2024 | 2:52 PM

ನಾನು ಅರ್ಥ ಶಾಸ್ತ್ರಜ್ಞನಲ್ಲದಿದ್ದರೂ 1994-95 ರಲ್ಲಿ ನನ್ನನ್ನು ಹಣಕಾಸು ಸಚಿವನಾಗಿ ನೇಮಕ ಮಾಡಿದ್ದಾಗ ಮೊದಲ ಬಜೆಟ್ ಮಂಡಿಸಿದ್ದೆ. ಹಾಗಾಗಿ ಆಗ ಆತಂಕವಿತ್ತು ಈಗ ಅದಿಲ್ಲ. ಮೊದಲ ಮತ್ತು ಈಗಿನ ಬಜೆಟ್ ಗಾತ್ರದ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಮೊದಲನೆಯದ್ದು ಸುಮಾರು 18,000 ಕೋಟಿ ರೂ. ಗಾತ್ರದ ಬಜೆಟ್ ಆಗಿದ್ದರೆ 15ನೇ ಬಜೆಟ್ ಗಾತ್ರ ರೂ. 3,71,383 ಕೋಟಿ ಎಂದು ಸಿದ್ದರಾಮಯ್ಯ ಹೇಳುತ್ತಾರೆ.

ಬೆಂಗಳೂರು: ಇದೊಂದು ಹೊಸ ಪ್ರಯೋಗ ಅನಿಸುತ್ತೆ. 15ನೇ ಬಾರಿಗೆ ರಾಜ್ಯದ ಬಜೆಟ್ (Karnataka Budget 2024) ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು (CM Siddaramaiah) ಅವರ ಪಕ್ಷದವರೇ (ಸಚಿವರು) ಆಗಿರುವ ಡಿಕೆ ಶಿವಕುಮಾರ್, ಲಕ್ಷ್ಮಿ ಹೆಬ್ಬಾಳ್ಕರ್, ಜಮೀರ್ ಅಹ್ಮದ್, ಈಶ್ವರ್ ಖಂಡ್ರೆ, ಪ್ರಿಯಾಂಕ್ ಖರ್ಗೆ ಮೊದಲಾದವರು ಬಜೆಟ್ ಮತ್ತು ಇತರ ಅಂಶಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಾ ವಿಶೇಷ ಸಂದರ್ಶನ ನಡೆಸಿದ್ದಾರೆ. ಸಂದರ್ಶನ ಆರಂಭಿಸುವ ಶಿವಕುಮಾರ್, ಜನಪರ ಬಜೆಟ್ ಗಳನ್ನು ಮಂಡಿಸುವ ಮೂಲಕ ಬಡ ಜನರಿಗೆ ನೆರವಾಗುತ್ತಾ ಮೊನ್ನೆ ನಿಮ್ಮ ರಾಜಕೀಯ ಬದುಕಿನ 15 ನೇ ಬಜೆಟ್ ಮಂಡಿಸಿದ್ದೀರಿ, ನೀವು ಮಂಡಿಸಿದ ಮೊದಲ ಬಜೆಟ್ ಮತ್ತು 15ನೇ ಬಜೆಟ್ ನಡುವಿನ ವ್ಯತ್ಯಾಸವೇನು ಮತ್ತು ನೊಂದ ಜನರಿಗೆ ಸ್ಪಂದಿಸುವ ನಿಮ್ಮ ಸಂಕಲ್ಪದ ಹಿಂದಿನ ಸ್ಫೂರ್ತಿಯೇನು ಎಂದು ಕೇಳುತ್ತಾರೆ.

ಅದಕ್ಕೆ ಉತ್ತರಿಸುವ ಸಿದ್ದರಾಮಯ್ಯ ಗಾಂಧೀಜಿಯವರು ಹೇಳಿದಂತೆ ಬಜೆಟ್ ಮೂಲಕ ಜನರ ಕಣ್ಣೀರು ಒರಸುವ ಪ್ರಯತ್ನ ಮಾಡುತ್ತಾ ಬಂದಿದ್ದೇನೆ, ನಾನು ಅರ್ಥ ಶಾಸ್ತ್ರಜ್ಞನಲ್ಲದಿದ್ದರೂ 1994-95 ರಲ್ಲಿ ನನ್ನನ್ನು ಹಣಕಾಸು ಸಚಿವನಾಗಿ ನೇಮಕ ಮಾಡಿದ್ದಾಗ ಮೊದಲ ಬಜೆಟ್ ಮಂಡಿಸಿದ್ದೆ. ಹಾಗಾಗಿ ಆಗ ಆತಂಕವಿತ್ತು ಈಗ ಅದಿಲ್ಲ. ಮೊದಲ ಮತ್ತು ಈಗಿನ ಬಜೆಟ್ ಗಾತ್ರದ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಮೊದಲನೆಯದ್ದು ಸುಮಾರು 18,000 ಕೋಟಿ ರೂ. ಗಾತ್ರದ ಬಜೆಟ್ ಆಗಿದ್ದರೆ 15ನೇ ಬಜೆಟ್ ಗಾತ್ರ ರೂ. 3,71,383 ಕೋಟಿ. ಪ್ರತಿವರ್ಷ ಬಜೆಟ್ ಗಾತ್ರ ಬೆಳೆಯುತ್ತದೆ, ಪ್ರತಿ ಬಜೆಟ್ ಮಂಡಿಸುವಾಗ, ಜನರ, ಬಡವರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ ಮತ್ತು ಅಸಮಾನತೆ ಹೋಗಲಾಡಿಸಲು ಪ್ರಯತ್ನಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More