ವಿಜಯನಗರ: ಇಸ್ಲಾಂಪೇಟೆಯಲ್ಲಿ ಗಣಪತಿ ಮೆರವಣಿಗೆ ತಡೆ ವಿಚಾರ; ಶಾಸಕ ಕೃಷ್ಣಾನಾಯಕ್​ರಿಂದ ಮೆರವಣಿಗೆಗೆ ಮರುಚಾಲನೆ

Edited By:

Updated on: Sep 20, 2026 | 11:54 AM

ಹೂವಿನ ಹಡಗಲಿಯ ಇಸ್ಲಾಂಪೇಟೆಯಲ್ಲಿ ಗಣಪತಿ ಮೆರವಣಿಗೆ ಮಾರ್ಗಕ್ಕೆ ಸಂಬಂಧಿಸಿದಂತೆ ಎದ್ದಿದ್ದ ಗೊಂದಲವನ್ನು ವಿಜಯನಗರ ಡಿಸಿ ಕವಿತಾ ಎಸ್. ಮನ್ನಿಕೇರಿ ಹಾಗೂ ಎಸ್​​ಪಿ ಜಾನವಿ ನೇತೃತ್ವದಲ್ಲಿ ಪರಿಹರಿಸಲಾಗಿದೆ. ಎರಡೂ ಕೋಮಿನವರೊಂದಿಗೆ ಮಾತುಕತೆ ನಡೆಸಿ, ಸ್ಪಷ್ಟ ಮಾರ್ಗಸೂಚಿ ಒದಗಿಸಲಾಗಿದ್ದು, ಗಣೇಶ ಪ್ರತಿಷ್ಠಾಪನೆ ಹಾಗೂ ಮೆರವಣಿಗೆಗೆ ಸಮ್ಮತಿ ದೊರೆತಿದೆ. ಶಾಸಕರ ಮಧ್ಯಸ್ಥಿಕೆಯೂ ಪ್ರಮುಖ ಪಾತ್ರ ವಹಿಸಿದೆ.

ವಿಜಯನಗರ, ಸೆಪ್ಟೆಂಬರ್ 20: ಹೂವಿನ ಹಡಗಲಿಯ ಇಸ್ಲಾಂಪೇಟೆಯಲ್ಲಿ ಗಣಪತಿ ಮೆರವಣಿಗೆ ಮಾರ್ಗಕ್ಕೆ ಸಂಬಂಧಿಸಿದಂತೆ ಎರಡು ಸಮುದಾಯಗಳ ನಡುವೆ ಉಂಟಾಗಿದ್ದ ಗೊಂದಲವನ್ನು ಜಿಲ್ಲಾಡಳಿತ ಯಶಸ್ವಿಯಾಗಿ ಪರಿಹರಿಸಿದೆ. ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾನವಿ ನೇತೃತ್ವದಲ್ಲಿ ನಡೆಸಿದ ಮಾತುಕತೆಯ ಮೂಲಕ ಈ ಸಮಸ್ಯೆಗೆ ಅಂತ್ಯ ಹಾಡಲಾಗಿದೆ.

ಮೆರವಣಿಗೆ ರೂಟ್‌ ಬಗ್ಗೆ ಗೊಂದಲ ಉಂಟಾಗಿದ್ದು, ಸ್ಥಳದಲ್ಲಿದ್ದ ಎಸ್ಪಿ ಅವರು ಶಾಂತಿಯುತವಾಗಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದರು. ಬಳಿಕ, ಎರಡೂ ಕೋಮಿನವರನ್ನು ಪ್ರತ್ಯೇಕವಾಗಿ ಕರೆಸಿ, ಚರ್ಚೆ ನಡೆಸಿ, ಅವರನ್ನು ಒಪ್ಪಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಕೊರವರ ಓಣಿಯಲ್ಲಿ ಸಣ್ಣ ಗಣಪತಿಯನ್ನು ಪ್ರತಿಷ್ಠಾಪಿಸಿ, ನಂತರ ಹಿಂದೂ ಮಹಾಗಣಪತಿಯ ಜೊತೆಗೆ ಇಸ್ಲಾಂಪೇಟೆಯಲ್ಲಿ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ. ನಾಳೆ ಸಭೆ ನಡೆಸಿ ಸಂಜೆ ಗಣಪತಿ ಪ್ರತಿಷ್ಠಾಪನೆ ಮಾಡುವುದಾಗಿ ಆಯೋಜಕರು ತಿಳಿಸಿದ್ದಾರೆ.

ಜಿಲ್ಲಾಡಳಿತವು ಮೆರವಣಿಗೆಯ ಸ್ಪಷ್ಟ ಮಾರ್ಗವನ್ನು ನಿರ್ಧರಿಸಿ, ಎರಡೂ ಸಮುದಾಯಗಳಿಗೆ ಮನವರಿಕೆ ಮಾಡಿದೆ. ಇದಕ್ಕೆ ಅವರೂ ಸಮ್ಮತಿಸಿದ್ದಾರೆ. ಶಾಸಕರು ಸಹ ಈ ವಿಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ. ಶಾಂತಿಯುತ ವಾತಾವರಣದಲ್ಲಿ ಗಣೇಶೋತ್ಸವ ಆಚರಿಸಲು ಒಮ್ಮತ ಮೂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published on: Sep 20, 2026 11:51 AM
Loading...
Unable to load recommendations.
Follow Us