ದಿವಂಗತ ಡಾ ರಾಜ್ಕುಮಾರ್ ಮತ್ತು ತೆಲುಗಿನ ಚಿತ್ರರಂಗದ ದಿಗ್ಗಜ ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ಎನ್ ಟಿ ರಾಮರಾವ್ ಕುಟುಂಬಗಳ ನಡುವೆ ಅವಿನಾಭಾವ ಸಂಬಂಧವಿದೆ. ಡಾ ರಾಜ್ ಮತ್ತು ಎನ್ ಟಿ ಆರ್ ಆತ್ಮೀಯ ಸ್ನೇಹಿತರು, ಪರಸ್ಪರ ಅಭಿಮಾನಿಗಳು ಮತ್ತು ಸಮಕಾಲೀನರು. ಹಾಗೆಯೇ, ಶಿವ ರಾಜಕುಮಾರ್ ಮತ್ತು ಎನ್ ಟಿ ಆರ್ ಅವರ ಮಗ ನಂದಮೂರಿ ಬಾಲಕೃಷ್ಣ ಸಮಕಾಲೀನರು ಮತ್ತು ಸ್ನೇಹಿತರು. ಎನ್ ಟಿ ಅರ್ ಅವರ ಮತ್ತೊಬ್ಬ ಮಗ ಮತ್ತು ನಟ ನಂದಮೂರಿ ಹರಿಕೃಷ್ಣ ಅವರ ಮಗ ಜ್ಯೂನಿಯರ್ ಎನ್ ಟಿ ಆರ್ ಮತ್ತು ದಿವಂಗತ ಪುನೀತ್ ರಾಜಕುಮಾರ್ ಅವರು ಆಪ್ತಮಿತ್ರರು ಮತ್ತು ಸಮಕಾಲೀನರೇ. ಸೋಜಿಗದ ಸಂಗತಿಯೇನೆಂದರೆ, ಪುನೀತ್ ಅವರು ಕೇವಲ ಎನ್ ಟಿ ಆರ್ ಕುಟುಂಬ ಮಾತ್ರವಲ್ಲ ಇಡೀ ತೆಲುಗು ಸಿನಿಮಾ ಇಂಡಸ್ಟ್ರೀ ಜೊತೆ ಅತ್ಯುತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು. ಅದು ಹೇಗೆ, ಯಾಕೆ ಅಂತ ಯಾರಿಗೂ ಗೊತ್ತಿಲ್ಲ.
ಪುನೀತ್ ಅವರಿಗೆ ಅಂತಿಮ ನಮನ ಸಲ್ಲಿಸಲು, ಬಾಲಕೃಷ್ಣ ಮತ್ತು ಜ್ಯೂ. ಎನ್ ಟಿ ಆರ್ ಶನಿವಾರ ಬೆಂಗಳೂರಿಗೆ ಆಗಮಿಸಿದರು. ಪುನೀತ್ ಅವರ ಪಾರ್ಥೀವ ಶರೀರ ಸಮೀಪಕ್ಕೆ ಬಂದ ಜ್ಯೂ. ಎನ್ ಟಿ ಆರ್ ತದೇಕ ದೃಷ್ಟಿಯಿಂದ ಪುನೀತ್ ದೇಹವನ್ನೇ ನೋಡುತ್ತಾ ನಿಂತುಬಿಟ್ಟರು. ಒಂದೆರಡು ನಿಮಿಷಗಳ ಕಾಲ ಅವರು ದೃಷ್ಟಿ ಕದಲಿಸಲೇ ಇಲ್ಲ. ಉಕ್ಕಿ ಬರುತ್ತಿದ್ದ ಭಾವನೆಗಳನ್ನು ತಡೆಯಲು ಅವರು ಹರಸಾಹಸ ಪಡುತ್ತಿದ್ದಿದ್ದು ಸ್ಪಷ್ಟವಾಗಿ ಗೊತ್ತಾಗುತಿತ್ತು.
ನಂತರ ಜ್ಯೂ. ಎನ್ ಟಿ ಆರ್, ಶಿವಣ್ಣರನ್ನು ತಬ್ಬಿಕೊಂಡು ಸಂತೈಸಿದರು. ಅ ಅಪ್ಪುಗೆಯು ಸಂತೈಸುವಿಕೆಯ ನೂರೆಂಟು ಮಾತುಗಳನ್ನು ಹೇಳುವಂತಿತ್ತು. ಒಂದರ್ಧ ನಿಮಿಷದವರೆಗೆ ಅವರಿಬ್ಬರು ತಬ್ಬಿಕೊಂಡಿದ್ದರು. ಬಳಿಕ ತೆಲುಗು ನಟ ಶಿವಣ್ಣನಿಗೆ ಏನೋ ಹೇಳಿದರು. ಅವರ ಮಾತು ಕೇಳಿಸಿಕೊಂಡ ನಂತರ ದುಃಖದ ಮಡುವಿನಲ್ಲಿರುವ ಶಿವಣ್ಣ ಅವರು ಜ್ಯೂ. ಎನ್ ಟಿ ಆರ್ ಅವರ ಎದೆಗೆ ಒರಗಿದರು.
38-ವರ್ಷ ವಯಸ್ಸಿನ ಜ್ಯೂ. ಎನ್ ಟಿ ಆರ್ ಟಾಲ್ಲಿವುಡ್ನಲ್ಲೀಗ ದೊಡ್ಡ ಹೆಸರು. ಡಾ ರಾಜ್ ಅವರ ಮಕ್ಕಳಂತೆಯೇ ಎನ್ ಟಿ ಆರ್ ಮಕ್ಕಳು-ಮೊಮ್ಮಕ್ಕಳು ಸಹ ಸರಳ-ಸಜ್ಜಿನಿಕೆಯ ಸ್ವಭಾವದವರು.
ಇದನ್ನೂ ಓದಿ: ‘ನನಗೆ ಪುನೀತ್ ಮಾಮ ನೆನಪಾಗುತ್ತಿದ್ದಾರೆ’; ಅಪ್ಪುಗಾಗಿ ಕಣ್ಣೀರು ಹಾಕಿದ ಪುಟ್ಟ ಅಭಿಮಾನಿ, ವಿಡಿಯೋ ವೈರಲ್