ಮಳೆ ಅಭಾವದಿಂದ ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರಗಾಲದ ಭೀಕರತೆ ಹೆಚ್ಚಿದೆ. ಮಳೆಯಿಲ್ಲದೆ ತುಂಗಭದ್ರಾ ನದಿ ಬತ್ತಿಹೋಗಿದ್ದು, ರಾಯಚೂರು, ಗದಗ, ಬೀದರ್ ಜಿಲ್ಲೆಗಳ ರೈತರು ಬೆಳೆಗಳನ್ನು ಕಿತ್ತೆಸೆಯುವಂತಾಗಿದೆ. ಮಂತ್ರಾಲಯದಲ್ಲಿ ಪುಣ್ಯಸ್ನಾನಕ್ಕೂ ನೀರಿಲ್ಲದೆ ಭಕ್ತರು ಪರದಾಡುತ್ತಿದ್ದಾರೆ. ಪ್ರಕೃತಿಯ ಈ ವೈಪರೀತ್ಯದಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.
ರಾಯಚೂರು, ಆಗಸ್ಟ್ 04: ಕರ್ನಾಟಕದ ಹಲವು ಜಿಲ್ಲೆಗಳು ಭೀಕರ ಬರಗಾಲದ ಕರಿನೆರಳಿನಲ್ಲಿವೆ. ಕೆಲವೆಡೆ ಮಳೆ ಕರುಣೆ ತೋರಿದರೂ, ಬಹುತೇಕ ಕಡೆ ಮಳೆ ಕೈಕೊಟ್ಟಿದೆ. ಇದರ ಪರಿಣಾಮವಾಗಿ ರೈತರು ತಾವು ಬಿತ್ತಿದ ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಮಳೆಯಿಲ್ಲದೆ ಹತಾಶರಾಗಿ ಹಲವೆಡೆ ಹೆಸರು, ಉದ್ದು ಸೇರಿದಂತೆ ಇತರೆ ಬೆಳೆಗಳನ್ನು ಕಿತ್ತೆಸೆಯುತ್ತಿದ್ದಾರೆ. ರಾಯಚೂರು ಜಿಲ್ಲೆಯ ಜೀವನಾಡಿ ತುಂಗಭದ್ರಾ ನದಿ ಸಂಪೂರ್ಣವಾಗಿ ಬತ್ತಿಹೋಗಿದ್ದು, ಎಲ್ಲಿ ನೋಡಿದರೂ ಬಂಡೆಗಳೇ ಕಾಣುತ್ತಿವೆ. ಇದರಿಂದ ರಾಯಚೂರು-ಆಂಧ್ರ ಗಡಿ ಭಾಗದಲ್ಲಿ ಲಕ್ಷಾಂತರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ನದಿಯಿಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಮಂತ್ರಾಲಯದಲ್ಲಿ ಪುಣ್ಯಸ್ನಾನಕ್ಕೂ ನೀರಿಲ್ಲದೆ ಭಕ್ತರು ಪರದಾಡುತ್ತಿದ್ದಾರೆ. ಗದಗ ಜಿಲ್ಲೆಯಲ್ಲೂ ಮಳೆಯಿಲ್ಲದೆ ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತಿದ್ದ ಹೆಸರು ಬೆಳೆಗಳನ್ನು ನಾಶಪಡಿಸಲಾಗುತ್ತಿದೆ. ಬೀದರ್ ಜಿಲ್ಲೆಯಲ್ಲೂ ಉದ್ದು, ಸೋಯಾಬೀನ್, ತೊಗರಿ ಬೆಳೆಗಳು ಕುಂಠಿತಗೊಂಡಿವೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
