ಗೃಹಲಕ್ಷ್ಮಿಯರಿಗೆ ಬಿಗ್ ಅಪ್ಡೇಟ್: ಮನೆ-ಮನೆಗೆ ಭೇಟಿ ನೀಡಿ ಮರುಪರಿಶೀಲನೆ; ಇದಕ್ಕಾಗಿ 20 ಕೋಟಿ ರೂ. ವೆಚ್ಚ
ಗೃಹಲಕ್ಷ್ಮೀ ಯೋಜನೆಯ ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಲು ಕರ್ನಾಟಕ ಸರ್ಕಾರ ಮಹತ್ವದ ಪರಿಶೀಲನಾ ಅಭಿಯಾನ ಆರಂಭಿಸಿದೆ. 20 ಕೋಟಿ ರೂ. ವೆಚ್ಚದಲ್ಲಿ ಸ್ಥಳೀಯ ಸಮಿತಿ ಸದಸ್ಯರು ಮನೆ-ಮನೆಗೆ ಭೇಟಿ ನೀಡಿ ಭಾವಚಿತ್ರ ಮತ್ತು ಬಯೋಮೆಟ್ರಿಕ್ ಮೂಲಕ ಪರಿಶೀಲನೆ ನಡೆಸಲಿದ್ದಾರೆ. ಯೋಜನೆಯ ದುರ್ಬಳಕೆ ತಡೆಗಟ್ಟಿ, ಅರ್ಹರಿಗೆ ಮಾತ್ರ ಸಹಾಯಧನ ತಲುಪಿಸುವುದು ಈ ಪ್ರಕ್ರಿಯೆಯ ಮುಖ್ಯ ಉದ್ದೇಶವಾಗಿದೆ.
ಬೆಂಗಳೂರು, ಆ.31: ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಲ್ಲಿರುವ ಅನರ್ಹರನ್ನು ಪತ್ತೆ ಹಚ್ಚಲು ಕರ್ನಾಟಕ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಯೋಜನೆಯ ದುರ್ಬಳಕೆ ತಡೆಯುವ ಹಾಗೂ ಅರ್ಹರಿಗೆ ಮಾತ್ರ ಸಹಾಯಧನ ತಲುಪಿಸುವ ಉದ್ದೇಶದಿಂದ ವ್ಯಾಪಕ ಮರುಪರಿಶೀಲನೆ ಆರಂಭಿಸಲಾಗಿದೆ. ವಲಸೆ ಹೋದವರು, ಮೃತಪಟ್ಟವರ ಹೆಸರಲ್ಲಿ ಹಣ ಪಡೆಯುತ್ತಿರುವ ಆರೋಪಗಳು, ಜೊತೆಗೆ ಐಟಿ ಪಾವತಿದಾರರು ಮತ್ತು ಜಿಎಸ್ಟಿ ಪಾವತಿದಾರರೂ ಯೋಜನೆ ಲಾಭ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಅನರ್ಹರನ್ನು ಗುರುತಿಸಲು ಸರ್ಕಾರ 20 ಕೋಟಿ ರೂ. ವೆಚ್ಚ ಮಾಡಲಿದೆ. ಸ್ಥಳೀಯ ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಮನೆ-ಮನೆಗೆ ಭೇಟಿ ನೀಡಿ ಫಲಾನುಭವಿಗಳ ಪರಿಶೀಲನೆ ನಡೆಸಲಿದ್ದಾರೆ. ಈ ವೇಳೆ ಅವರ ಮೊಬೈಲ್ನಲ್ಲಿ ಭಾವಚಿತ್ರವನ್ನು ಸೆರೆ ಹಿಡಿದು, ಬಯೋಮೆಟ್ರಿಕ್ ಪಂಚಿಂಗ್ನ್ನು ಪಡೆಯಲಾಗುವುದು. ಈ ಒಂದು ಬಾರಿಯ ಪ್ರಕ್ರಿಯೆಯು ಅರ್ಹ ಮತ್ತು ಅನರ್ಹ ಫಲಾನುಭವಿಗಳನ್ನು ಸ್ಪಷ್ಟವಾಗಿ ಗುರುತಿಸಲು ಸಹಾಯ ಮಾಡಲಿದೆ. ಕರ್ನಾಟಕದ ಮತದಾರರಿಗೆ ಮಾತ್ರ ಯೋಜನೆ ತಲುಪಬೇಕು ಎಂಬುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಈ ಮೂಲಕ ಸರ್ಕಾರಕ್ಕೆ ಆಗುವ ಕೋಟ್ಯಂತರ ರೂಪಾಯಿ ನಷ್ಟವನ್ನು ತಡೆಗಟ್ಟಿ, ಯೋಜನೆಯ ಹಣ ಸದುಪಯೋಗವಾಗುವಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
