ಡಿಕೆಶಿ ಸಂಪುಟದಲ್ಲಿ ನನಗೇನೂ ಬೇಡ, ಸಚಿವ ಸ್ಥಾನದ ರೇಸ್ನಲ್ಲೂ ಇಲ್ಲ: ರಾಜಣ್ಣ ಖಡಕ್ ಮಾತು
ಶಾಸಕ ಕೆಎನ್ ರಾಜಣ್ಣ ಅವರು ಸಿಎಂ ಡಿಕೆ ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಮುದಾಯವಾರು ಡಿಸಿಎಂ ಸ್ಥಾನಗಳ ಬೇಡಿಕೆಯನ್ನು ಬೆಂಬಲಿಸಿದ ಅವರು, ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ವಿಳಂಬ ಮಾಡಬಾರದು, ಇದು ರಾಜ್ಯಕ್ಕೆ ಅನ್ಯಾಯ ಎಂದು ಒತ್ತಿ ಹೇಳಿದ್ದಾರೆ.
ಬೆಂಗಳೂರು, ಜೂನ್ 9: ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ ಮತ್ತು ಆ ರೇಸ್ನಲ್ಲೂ ಇಲ್ಲ ಎಂದು ಶಾಸಕ ಕೆಎನ್ ರಾಜಣ್ಣ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಮುದಾಯವಾರು ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನಗಳನ್ನು ನೀಡುವ ಬೇಡಿಕೆಯನ್ನು ಬೆಂಬಲಿಸಿದ್ದಾರೆ. ಇದು ಬಹಳ ಹಿಂದಿನಿಂದಲೂ ಇರುವ ವಾದ ಎಂದು ಹೇಳಿದ್ದಾರೆ. ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಡಿಸಿಎಂ ಸ್ಥಾನಗಳನ್ನು ನೀಡಬೇಕೆಂಬ ವಾದಕ್ಕೆ ಬದ್ಧವಾಗಿರುವುದಾಗಿ ರಾಜಣ್ಣ ತಿಳಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವಲ್ಲಿನ ವಿಳಂಬದ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಆಗಸ್ಟ್ ಅಂತ್ಯದೊಳಗೆ ಮುಗಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಐದು ವರ್ಷಗಳಿಂದ ನಡೆದಿರುವುದಿಲ್ಲ. ಈ ಚುನಾವಣೆಗಳ ವಿಳಂಬದಿಂದಾಗಿ ಕೇಂದ್ರ ಸರ್ಕಾರವು 73ನೇ ಮತ್ತು 74ನೇ ತಿದ್ದುಪಡಿ ಅಡಿಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕಾದ ಅನುದಾನವನ್ನು ನಿಲ್ಲಿಸಿದೆ, ಇದು ರಾಜ್ಯಕ್ಕೆ ಅನ್ಯಾಯ ಎಂದು ರಾಜಣ್ಣ ಅಭಿಪ್ರಾಯಪಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರು ಆಡಳಿತ ನಡೆಸಬೇಕೇ ಹೊರತು ಅಧಿಕಾರಿಗಳಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

