ಗಡಿಪಾರಾಗಿದ್ದ ರೌಡಿಯನ್ನು ಮಗಳ ಮದುವೆ ಮಂಟಪದಿಂದಲೇ ಸಿನಿಮೀಯ ಶೈಲಿಯಲ್ಲಿ ಎಳೆದೊಯ್ದ ಪೊಲೀಸರು: ವಿಡಿಯೋ ವೈರಲ್

Edited By:

Updated on: May 20, 2026 | 1:42 PM

ಕೋಲಾರ ಜಿಲ್ಲೆಯ ಕೆಜಿಎಫ್‌ನ ಸುಸೈಪಾಳ್ಯಂ ಚರ್ಚ್‌ನಲ್ಲಿ ಮಗಳ ಮದುವೆಯಲ್ಲಿ ಭಾಗಿಯಾಗಿದ್ದ ಗಡಿಪಾರಾಗಿದ್ದ ರೌಡಿಶೀಟರ್ ಸ್ಟಾನ್ಲಿಯನ್ನು ಆಂಡರ್ಸನ್‌ಪೇಟೆ ಪೊಲೀಸರು ಮಂಟಪದಿಂದಲೇ ಸಿನಿಮೀಯ ಶೈಲಿಯಲ್ಲಿ ಬಂಧಿಸಿ ಎಳೆದೊಯ್ದಿದ್ದಾರೆ. ಡೆಕೋರೇಷನ್ ಮಾಲೀಕನಿಗೆ ಬೆದರಿಕೆ ಹಾಕಿ ಹಪ್ತಾ ವಸೂಲಿ ಮಾಡಿದ ಆರೋಪ ಈತನ ಮೇಲಿದೆ. ಸದ್ಯ, ಪೊಲೀಸರು ಮದುವೆ ಮಂಟಪದಿಂದಲೇ ಆತನನ್ನು ಎಳೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

ಕೋಲಾರ, ಮೇ 20: ಕೋಲಾರ ಜಿಲ್ಲೆಯ ಕೆಜಿಎಫ್‌ (KGF) ನಗರದಲ್ಲಿ ಸಿನಿಮೀಯ ಶೈಲಿಯ ಪೊಲೀಸ್ ಕಾರ್ಯಾಚರಣೆಯೊಂದು ನಡೆದಿದೆ. ಮಗಳ ಮದುವೆ ಖರ್ಚಿಗಾಗಿ ಉದ್ಯಮಿಯೊಬ್ಬರಿಗೆ ಹೆದರಿಸಿ, ಬೆದರಿಕೆ ಹಾಕಿ ಹಪ್ತಾ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ, ಈಗಾಗಲೇ ಗಡಿಪಾರಾಗಿದ್ದ ರೌಡಿಶೀಟರ್‌ನನ್ನು ಪೊಲೀಸರು ಮದುವೆ ಮಂಟಪದಿಂದಲೇ ವಶಕ್ಕೆ ಪಡೆದಿದ್ದಾರೆ. ಕೆಜಿಎಫ್ ನಗರದ ಸುಸೈಪಾಳ್ಯಂ ಏರಿಯಾದ ನಿವಾಸಿ, ಕುಖ್ಯಾತ ರೌಡಿಶೀಟರ್ ಸ್ಟಾನ್ಲಿ ಬಂಧಿತ ಆರೋಪಿಯಾಗಿದ್ದಾನೆ. ಚರ್ಚ್‌ನಲ್ಲಿ ಮಗಳ ಮದುವೆ ಸಂಭ್ರಮದಲ್ಲಿದ್ದ ರೌಡಿಯನ್ನು ಪೊಲೀಸರು ಏಕಾಏಕಿ ಕಾರ್ಯಾಚರಣೆ ನಡೆಸಿ ಹೊತ್ತೊಯ್ದಿರುವ ದೃಶ್ಯ ಈಗ ವೈರಲ್ ಆಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಮಗಳ ಮದುವೆಗೆ ಪೆಂಡಾಲ್ ಹಾಗೂ ಡೆಕೋರೇಷನ್ ಕೆಲಸ ಮಾಡಿಕೊಡುತ್ತಿದ್ದ ಅಂಗಡಿ ಮಾಲೀಕ ಮೊಹಮ್ಮದ್ ಸಕ್ಲೇನ್ ಎಂಬುವರಿಗೆ ರೌಡಿಶೀಟರ್ ಸ್ಟಾನ್ಲಿ ಭೀತಿ ಹುಟ್ಟಿಸಿದ್ದ. ತನಗೆ ಹೆದರಿಸಿ, ಬೆದರಿಕೆ ಹಾಕಿ ತನ್ನ ಮಗಳ ಮದುವೆಗೆ ಹಣ ನೀಡುವಂತೆ ಪೀಡಿಸುತ್ತಿದ್ದಾನೆ ಎಂದು ಸಂತ್ರಸ್ತ ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದರು. ಈಗಾಗಲೇ ನಗರದಿಂದ ಗಡಿಪಾರಾಗಿದ್ದರೂ ಕಾನೂನು ಉಲ್ಲಂಘಿಸಿ ನಗರದೊಳಗೆ ಪ್ರವೇಶಿಸಿದ್ದಲ್ಲದೆ, ಸಾರ್ವಜನಿಕರಿಗೆ ಹಪ್ತಾ ವಸೂಲಿಗಾಗಿ ಕಿರುಕುಳ ನೀಡುತ್ತಿದ್ದ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣವೇ ಅಲರ್ಟ್ ಆಗಿದ್ದಾರೆ.

ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶಿವಾಂಶು ರಜಪೂತ್ ಅವರ ಖಡಕ್ ಸೂಚನೆ ಮೇರೆಗೆ ಕಾರ್ಯಾಚರಣೆಗೆ ಇಳಿದ ಆಂಡರ್ಸನ್‌ಪೇಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡ, ಸುಸೈಪಾಳ್ಯಂ ಚರ್ಚ್‌ನಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ಜಾಗಕ್ಕೆ ಲಗ್ಗೆ ಇಟ್ಟಿದ್ದಾರೆ. ಮದುವೆ ಮಂಟಪದಲ್ಲೇ ಇದ್ದ ಆರೋಪಿ ಸ್ಟಾನ್ಲಿಯನ್ನು ಸುತ್ತುವರಿದು ಸಿನಿಮೀಯ ಶೈಲಿಯಲ್ಲಿ ಎಳೆದೊಯ್ದಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ಕರೆದೊಯ್ಯುತ್ತಿರುವ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: May 20, 2026 12:40 PM
Follow Us
Rajendra Simha BL

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್​​ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.

Read More