ಚಾಮುಂಡೇಶ್ವರಿ ದರ್ಶನ ಪಡೆದ ಸುದೀಪ್​; ಕಿಚ್ಚನ ನೋಡಲು ಮುಗಿಬಿದ್ದ ಅಭಿಮಾನಿಗಳು

Updated on: May 27, 2024 | 8:01 PM

‘ಮ್ಯಾಕ್ಸ್​’ ಸಿನಿಮಾದ ಶೂಟಿಂಗ್​ ಮುಗಿಸಿರುವ ನಟ ಕಿಚ್ಚ ಸುದೀಪ್ ಅವರು ಕರ್ನಾಟಕಕ್ಕೆ ಮರಳಿದ್ದಾರೆ. ಈಗ ಅವರು ಮೈಸೂರಿಗೆ ಭೇಟಿ ನೀಡಿದ್ದು, ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬಂದು ದರ್ಶನ ಪಡೆದಿದ್ದಾರೆ. ಸುದೀಪ್​ ಅವರ ಅಭಿಮಾನಿಗಳು ದೇವಸ್ಥಾನದ ಆವರಣದಲ್ಲಿ ಜಮಾಯಿಸಿದ್ದಾರೆ. ಸುದೀಪ್​ಗೆ ಜೈಕಾರ ಕೂಗಿ ಜನರು ಅಭಿಮಾನ ಮೆರೆದಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ..

ನಟ ಕಿಚ್ಚ ಸುದೀಪ್​ (Kichcha Sudeep) ಅವರು ಮೈಸೂರಿಗೆ ತೆರಳಿ ಚಾಮುಂಡೇಶ್ವರಿ ತಾಯಿಯ ದರ್ಶನ ಮಾಡಿದ್ದಾರೆ. ಪತ್ನಿ ಪ್ರಿಯಾ ಕೂಡ ಅವರಿಗೆ ಸಾಥ್​ ನೀಡಿದ್ದಾರೆ. ಸುದೀಪ್ ಬಂದಿರುವ ವಿಷಯ ತಿಳಿದು, ದೇವಸ್ಥಾನದ (Chamundeshwari Temple) ಆವರಣದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು. ತಮ್ಮ ನೆಚ್ಚಿನ ನಟನನ್ನು ಹತ್ತಿರದಿಂದ ನೋಡಿ ಫ್ಯಾನ್ಸ್​ ಖುಷಿಪಟ್ಟಿದ್ದಾರೆ. ‘ಬಾಸ್​ ಬಾಸ್​ ಕಿಚ್ಚ ಬಾಸ್​..’ ಎಂದು ಜೈಕಾರ ಕೂಗುವ ಮೂಲಕ ಜನರು ಅಭಿಮಾನ ಪ್ರದರ್ಶಿಸಿದ್ದಾರೆ. ಕಿಚ್ಚ ಸುದೀಪ್ ಅವರು ಅಭಿಮಾನಿಗಳ ಕಡೆಗೆ ಕೈ ಬೀಸಿ ಮುಂದೆ ಸಾಗಿದ್ದಾರೆ. ಕೆಲವೇ ದಿನಗಳ ಹಿಂದೆ ‘ಮ್ಯಾಕ್ಸ್​’ ಸಿನಿಮಾ (Max Movie) ಚಿತ್ರೀಕರಣವನ್ನು ಸುದೀಪ್​ ಮುಗಿಸಿದ್ದಾರೆ. ಈ ಸಿನಿಮಾ ಮೇಲೆ ಪ್ರೇಕ್ಷಕರಿಗೆ ಸಖತ್​ ಭರವಸೆ ಇದೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಈ ಚಿತ್ರದ ಶೂಟಿಂಗ್​ ಮಾಡಲಾಗಿದೆ. ಹಲವು ತಿಂಗಳ ಕಾಲ ಚಿತ್ರೀಕರಣ ನಡೆದಿದ್ದು, ಇತ್ತೀಚೆಗೆ ಮುಕ್ತಾಯ ಆಗಿದೆ. ಆ ಸುದ್ದಿ ತಿಳಿಸಲು ಸುದೀಪ್​ ಅವರು ಒಂದು ವಿಡಿಯೋ ಹಂಚಿಕೊಂಡಿದ್ದರು. 2022ರಲ್ಲಿ ತೆರೆಕಂಡ ‘ವಿಕ್ರಾಂತ್​ ರೋಣ’ ಬಳಿಕ ಸುದೀಪ್​ ಅವರ ಬೇರೆ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ. ದೀರ್ಘ ಗ್ಯಾಪ್​ ಆಗಿರುವ ಕಾರಣದಿಂದ ‘ಮ್ಯಾಕ್ಸ್​’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಕಾತರ ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More