ಕೆಪಿಎಸ್‌ಸಿ ಹಗರಣದ ಕಿಂಗ್‌ಪಿನ್ IAS ಅಧಿಕಾರಿ ಎಸ್ಕೇಪ್ ಆಗಿದ್ದು ಹೇಗೆ?: ದೆಹಲಿ, ನೋಯ್ಡಾ, ಕೊಲಂಬೊ ಟ್ರಿಪ್‌ನ ಸ್ಫೋಟಕ ಸತ್ಯ

Edited By:

Updated on: Sep 03, 2026 | 2:38 PM

ಕೆಪಿಎಸ್‌ಸಿ ಹಗರಣದ ಕಿಂಗ್‌ಪಿನ್, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆಯಾಗಿ 11 ದಿನಗಳ ನಂತರ ಪತ್ತೆಯಾದ ರೋಚಕ ಕಥೆ. ಇಡಿ ದಾಳಿ ನಿರೀಕ್ಷೆಯಲ್ಲಿದ್ದ ಜ್ಞಾನೇಂದ್ರ, ದೆಹಲಿ, ನೋಯ್ಡಾ, ಕೊಲಂಬೋ, ಚೆನ್ನೈಗೆ ಪ್ರಯಾಣಿಸಿ, ಪ್ರಭಾವಿಗಳ ಸೂಚನೆ ಮೇರೆಗೆ ಬೆಂಗಳೂರಿಗೆ ಮರಳಿದರು. ಸಿಐಡಿ ವಿಚಾರಣೆ ನಂತರ ಬಂಧನಕ್ಕೊಳಗಾಗಿ, ತನಿಖೆಗೆ ಒಳಪಟ್ಟಿದ್ದು, ಹಲವು ಪ್ರಭಾವಿಗಳ ಪಾತ್ರ ಬಯಲಾಗಿದೆ.

ಬೆಂಗಳೂರು, ಸೆ.3: ಪಿಎಸ್‌ಸಿ ಹಗರಣದ ಪ್ರಮುಖ ಆರೋಪಿ ಹಾಗೂ ಮಾಸ್ಟರ್ ಮೈಂಡ್ ಆಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಬೆಂಗಳೂರಿನಲ್ಲಿ 11 ದಿನಗಳ ಕಾಲ ನಾಪತ್ತೆಯಾಗಿ ನಂತರ ಪತ್ತೆಯಾಗಿ, ಸಿಐಡಿ ಹಾಗೂ ಇಡಿ ತನಿಖೆಗೆ ಒಳಪಟ್ಟು ಅಂತಿಮವಾಗಿ ಬಂಧಿತರಾಗಿದ್ದಾರೆ. ಆಗಸ್ಟ್ 17ರಂದು ಇಡಿ ಅಧಿಕಾರಿಗಳು ಕೆಪಿಎಸ್‌ಸಿ ಚೇರ್ಮನ್ ಶಿವಶಂಕರಪ್ಪ ಸೇರಿದಂತೆ ಹಲವರ ಮನೆ ಮೇಲೆ ದಾಳಿ ನಡೆಸಿದಾಗ, ತಮ್ಮನ್ನೂ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ತಿಳಿದ ಜ್ಞಾನೇಂದ್ರ ಕುಮಾರ್ ಆಗಸ್ಟ್ 18ರಂದು ದೆಹಲಿಗೆ ಪ್ರಯಾಣ ಬೆಳೆಸಿದರು. ದೆಹಲಿಯಿಂದ ನೋಯ್ಡಾಗೆ ತೆರಳಿ, ಅಲ್ಲಿ ತನ್ನ ಗೆಳತಿಯನ್ನು ಭೇಟಿಯಾದರು. ನಂತರ ಬೆಂಗಳೂರಿನಿಂದ ಬಂದ ಸೂಚನೆಯ ಮೇರೆಗೆ, ಹಿರಿಯ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಜ್ಞಾನೇಂದ್ರ ಕುಮಾರ್‌ಗೆ ತನಿಖೆ ಎದುರಿಸುವ ಕುರಿತು ಸಲಹೆ ನೀಡಿದರು. ನಂತರ ಜ್ಞಾನೇಂದ್ರ ತಮ್ಮ ಮೂವರು ಬ್ಯಾಚ್‌ಮೇಟ್‌ಗಳೊಂದಿಗೆ ಶ್ರೀಲಂಕಾದ ಕೊಲಂಬೊಗೆ ತೆರಳಿದರು. ಲುಕ್ ಔಟ್ ನೋಟಿಸ್ ಹೊರಡಿಸುವ ಸಾಧ್ಯತೆ ಇರುವ ಸುಳಿವು ಸಿಗುತ್ತಿದ್ದಂತೆ ಚೆನ್ನೈಗೆ ವಾಪಸ್ಸಾದರು. ಇಡಿ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಸ್ವತಃ ತಾವೇ ವಿಚಾರಣೆಗೆ ಹಾಜರಾಗಲು ಬೆಂಗಳೂರಿಗೆ ಮರಳಿದ ಜ್ಞಾನೇಂದ್ರ ದೇವನಹಳ್ಳಿಯ ರೆಸಾರ್ಟ್‌ನಲ್ಲಿ ತಂಗಿದರು. ಪ್ರಭಾವಿಗಳ ರಕ್ಷಣಾ ಪ್ರಯತ್ನಗಳ ಹೊರತಾಗಿಯೂ, ಸಿಐಡಿ ಕಚೇರಿಗೆ ಹಾಜರಾದ ಜ್ಞಾನೇಂದ್ರ ಕುಮಾರ್ ಅವರನ್ನು ಅಂತಿಮವಾಗಿ ಬಂಧಿಸಲಾಯಿತು. ಇದೀಗ 10 ದಿನಗಳ ಕಾಲ ಸಿಐಡಿ ಕಸ್ಟಡಿಯಲ್ಲಿರುವ ಅವರನ್ನು ಇಡಿ ಸಹ ತನ್ನ ವಶಕ್ಕೆ ಪಡೆಯಲು ಸಿದ್ಧತೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಹಲವು ಪ್ರಭಾವಿಗಳು ಭಾಗಿಯಾಗಿರುವುದು ಮತ್ತು ವಿದ್ಯಾರ್ಥಿಗಳ ಬಾಯಿಬಿಟ್ಟಿರುವ ಹೇಳಿಕೆಗಳು ತನಿಖೆಗೆ ಹೊಸ ತಿರುವು ನೀಡಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us