ಲಕ್ಷ್ಮೇಶ್ವರ ತಾಲೂಕು ಘೋಷಣೆಯಾಗಿ 9 ವರ್ಷ ಕಳೆದರೂ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡದ ತಾಲೂಕು ಕಚೇರಿ
ಲಕ್ಷ್ಮೇಶ್ವರ ತಾಲೂಕು ಘೋಷಣೆಯಾಗಿ ಒಂಬತ್ತು ವರ್ಷಗಳೇ ಕಳೆದರೂ, ಅಗತ್ಯ ಮೂಲಸೌಕರ್ಯಗಳು ಮತ್ತು ಸರ್ಕಾರಿ ಕಚೇರಿಗಳ ಕೊರತೆಯಿಂದ ಜನರು ಪರದಾಡುತ್ತಿದ್ದಾರೆ. ತಹಶೀಲ್ದಾರ್ ಕಚೇರಿಯೂ ಹದಗೆಟ್ಟ ಸ್ಥಿತಿಯಲ್ಲಿದ್ದು, ಅಧಿಕಾರಿಗಳ ಲಭ್ಯತೆಯೂ ಕಡಿಮೆಯಾಗಿದೆ. ಮಿನಿ ವಿಧಾನಸೌಧ ನಿರ್ಮಾಣದ ಬೇಡಿಕೆ ಈಡೇರದಿದ್ದಲ್ಲಿ ಮತ್ತೆ ಹೋರಾಟ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ಗದಗ, ಸೆಪ್ಟೆಂಬರ್ 04: ಲಕ್ಷ್ಮೇಶ್ವರ ತಾಲೂಕು ಘೋಷಣೆಯಾಗಿ ಒಂಬತ್ತು ವರ್ಷಗಳೇ ಸಂದಿದ್ದರೂ, ಅಗತ್ಯ ಆಡಳಿತಾತ್ಮಕ ಮೂಲಸೌಕರ್ಯಗಳ ಕೊರತೆ ಜನರನ್ನು ಕಾಡುತ್ತಿದೆ. ಇಲ್ಲಿ ಇಂದಿಗೂ ಪೂರ್ಣ ಪ್ರಮಾಣದ ತಾಲೂಕು ಕಚೇರಿಗಳು ಕಾರ್ಯಾರಂಭ ಮಾಡಿಲ್ಲ. ಸದ್ಯ ಇರುವ ತಹಶೀಲ್ದಾರ್ ಕಚೇರಿ ಕೂಡ ಅವ್ಯವಸ್ಥೆಯಿಂದ ಕೂಡಿದ್ದು, ಮಳೆಗಾಲದಲ್ಲಿ ಸೋರುತ್ತಿದೆ. ಇದರಿಂದ ಅಧಿಕಾರಿಗಳು ತಮ್ಮ ದಾಖಲೆಗಳು ಮತ್ತು ಕಂಪ್ಯೂಟರ್ಗಳನ್ನು ಸಂರಕ್ಷಿಸಲು ಪರದಾಡುತ್ತಿದ್ದಾರೆ. ಕಿಟಕಿಗಳ ಗ್ಲಾಸ್ಗಳು ಒಡೆದು ಹೋಗಿದ್ದು, ಕಚೇರಿಯ ನಿರ್ವಹಣೆ ಸಂಪೂರ್ಣವಾಗಿ ಹದಗೆಟ್ಟಿದೆ. ಇನ್ನು, ಹೆಚ್ಚಿನ ಕಚೇರಿಗಳಿಗೆ ಅಧಿಕಾರಿಗಳನ್ನು ಶಿರಹಟ್ಟಿಯಿಂದ ನಿಯೋಜಿಸಲಾಗಿದೆ. ಇದರಿಂದ ಅಧಿಕಾರಿಗಳು ಲಭ್ಯವಿಲ್ಲದೆ ಜನರು ತಮ್ಮ ಕೆಲಸಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಚೇರಿಗಳ ಸ್ಥಾಪನೆಗೆ ಮತ್ತೆ ಹೋರಾಟ ಮಾಡಬೇಕಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಕೂಡಲೇ ಮಿನಿ ವಿಧಾನಸೌಧ ನಿರ್ಮಿಸಿ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
