ಲೋಕಾಯುಕ್ತ ದಾಳಿಗೆ ಹೆದರಿ ರಾಜೀನಾಮೆ ಕೊಟ್ಟಿದ್ದ ವಿಶೇಷ ಭೂ ಸ್ವಾಧೀನ ಅಧಿಕಾರಿ ಮಲ್ಲಿಕಾರ್ಜುನ!
ವಿಶೇಷ ಭೂ ಸ್ವಾಧೀನ ಅಧಿಕಾರಿ ಮಲ್ಲಿಕಾರ್ಜುನ್ ಲೋಕಾಯುಕ್ತ ದಾಳಿಗೆ ಹೆದರಿ ರಾಜೀನಾಮೆ ನೀಡಿದ್ದರು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ. 2021ರಿಂದ ಆಸ್ತಿ ಘೋಷಿಸದ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್ ನೀಡಲಾಗಿತ್ತು. ಆಗಸ್ಟ್ 19ರಂದು ನಡೆದ ಲೋಕಾಯುಕ್ತ ದಾಳಿಯಲ್ಲಿ 11 ಕಡೆಗಳಲ್ಲಿ ಶೋಧ ನಡೆಸಲಾಗಿದ್ದು, ಒಟ್ಟು 18.32 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿತ್ತು. ಇದರಲ್ಲಿ 2.53 ಕೋಟಿ ರೂ. ನಗದೂ ಸೇರಿದೆ.
ಬೆಂಗಳೂರು, ಆಗಸ್ಟ್ 28: ವಿಶೇಷ ಭೂ ಸ್ವಾಧೀನ ಅಧಿಕಾರಿ ಮಲ್ಲಿಕಾರ್ಜುನ್ ದಿಢೀರ್ ರಾಜೀನಾಮೆ ನೀಡಿದ್ದಕ್ಕೆ ಲೋಕಾಯುಕ್ತ ದಾಳಿಯ ಹೆದರಿಕೆಯೇ ಕಾರಣ ಎನ್ನಲಾಗುತ್ತಿದೆ. ಕಳೆದ ಜುಲೈ 22ರಂದೇ ಮಲ್ಲಿಕಾರ್ಜುನ್ ರಾಜೀನಾಮೆ ಸಲ್ಲಿಸಿದ್ದರು. ಅದಾದ ನಂತರ ಆಗಸ್ಟ್ 19ರಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ಬಗ್ಗೆ ಊಹಿಸಿ ಅವರು ರಾಜೀನಾಮೆ ಕೊಟ್ಟಿದ್ದಾರೆಯೇ ಎಂಬ ಅನುಮಾನ ಈಗ ಬಲವಾಗಿದೆ. ಮಲ್ಲಿಕಾರ್ಜುನ್ ಅವರು 2021ನೇ ಸಾಲಿನಿಂದ ತಮ್ಮ ಆಸ್ತಿಯನ್ನು ಘೋಷಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ, ತಮ್ಮ ಆಸ್ತಿ ಮತ್ತು ಹೊಣೆಗಾರಿಕೆಗಳ ಲೆಕ್ಕ ನೀಡುವಂತೆ ಅವರಿಗೆ ನೋಟಿಸ್ ನೀಡಲಾಗಿತ್ತು. ಆಸ್ತಿ ವಿವರ ನೀಡಲು ಹೆದರಿ ಮಲ್ಲಿಕಾರ್ಜುನ್ ವೈಯಕ್ತಿಕ ಕಾರಣಗಳನ್ನು ನೀಡಿ ರಾಜೀನಾಮೆ ಸಲ್ಲಿಸಿದ್ದರು ಎಂದು ಹೇಳಲಾಗಿದೆ.
ಮಾಹಿತಿ ಕಲೆಹಾಕಿದ ನಂತರ ಆಗಸ್ಟ್ 19ರಂದು ಲೋಕಾಯುಕ್ತ ಅಧಿಕಾರಿಗಳು ಮಲ್ಲಿಕಾರ್ಜುನ್ ಮನೆ ಹಾಗೂ ವಿವಿಧ ಕಚೇರಿಗಳ ಸೇರಿದಂತೆ 11 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಈ ದಾಳಿ ಸಂದರ್ಭದಲ್ಲಿ ಒಟ್ಟು 12.95 ಕೋಟಿ ರೂ. ಮೌಲ್ಯದ ಅಸಮತೋಲಿತ ಆಸ್ತಿ ಪತ್ತೆಯಾಗಿದೆ. ಒಟ್ಟಾರೆಯಾಗಿ, 18.32 ಕೋಟಿ ರೂ. ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ. ಇದರಲ್ಲಿ ಎರಡು ವಾಸದ ಮನೆಗಳು, 100 ಎಕರೆ 5 ಗುಂಟೆ ಜಮೀನು, 14.28 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ 2.53 ಕೋಟಿ ರೂ. ನಗದು ಕೂಡ ಸೇರಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
