ಲಂಚ ಸ್ವೀಕರಿಸುತ್ತಿದ್ದಾಗ ಗುಬ್ಬಿ ಆರ್ಎಫ್ಒ ಲೋಕಾಯುಕ್ತ ಬಲೆಗೆ: ಹೊರಗುತ್ತಿಗೆ ನೌಕರನೂ ಅರೆಸ್ಟ್
ತುಮಕೂರಿನ ಗುಬ್ಬಿ ವಲಯದಲ್ಲಿ ಪ್ರಾದೇಶಿಕ ಅರಣ್ಯಾಧಿಕಾರಿ ಸತೀಶ್ ಚಂದ್ರ ಮತ್ತು ಹೊರಗುತ್ತಿಗೆ ನೌಕರ ಶೌಕತ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಲಂಚ ಪಡೆಯುವಾಗ ಬಂಧಿಸಿದ್ದಾರೆ. ಗುತ್ತಿಗೆದಾರ ಶಿವರಾಜ್ ಅವರಿಂದ ಕಾಮಗಾರಿ ಅನುಮತಿಗಾಗಿ 2 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಈ ಕಾರ್ಯಾಚರಣೆ ನಡೆದಿದೆ. ಲಕ್ಷಾಂತರ ರೂಪಾಯಿ ಬೇಡಿಕೆ ಇಟ್ಟಿದ್ದ ಆರ್ಎಫ್ಒ ವಿರುದ್ಧ ಗುತ್ತಿಗೆದಾರ ದೂರು ನೀಡಿದ್ದರು.
ತುಮಕೂರು, ಸೆಪ್ಟೆಂಬರ್ 14: ಸರ್ಕಾರಿ ಅಧಿಕಾರಿಗಳಲ್ಲಿರುವ ಭ್ರಷ್ಟಾಚಾರವನ್ನು ಹತ್ತಿಕ್ಕಲು ಸಕ್ರಿಯವಾಗಿರುವ ಲೋಕಾಯುಕ್ತ, ತುಮಕೂರು ಜಿಲ್ಲೆಯಲ್ಲಿ ಮತ್ತೊಂದು ಭರ್ಜರಿ ಕಾರ್ಯಾಚರಣೆ ನಡೆಸಿದೆ. ಗುಬ್ಬಿ ವಲಯದ ಪ್ರಾದೇಶಿಕ ಅರಣ್ಯಾಧಿಕಾರಿ (ಆರ್ಎಫ್ಒ) ಸತೀಶ್ ಚಂದ್ರ ಮತ್ತು ಹೊರಗುತ್ತಿಗೆ ನೌಕರ ಶೌಕತ್ ಅವರು 2 ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಂಡ್ಯ ಮೂಲದ ಅರಣ್ಯ ಗುತ್ತಿಗೆದಾರ ಶಿವರಾಜ್ ಅವರು ಗುಬ್ಬಿ ಅರಣ್ಯ ವಲಯದಲ್ಲಿ ಕಾಮಗಾರಿಗೆ ಟೆಂಡರ್ ಪಡೆದಿದ್ದರು. ಕಾಮಗಾರಿ ಆರಂಭಿಸುವುದನ್ನು ತಡೆದು, ಆರ್ಎಫ್ಒ ಸತೀಶ್ ಚಂದ್ರ ಅವರು ಶೇಕಡಾ 30 ರಷ್ಟು ಅಂದರೆ 5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಆರಂಭದಲ್ಲಿ 50,000 ರೂಪಾಯಿ ನೀಡಿದ್ದರೂ, ಉಳಿದ ಹಣಕ್ಕೆ ನಿರಂತರ ಒತ್ತಾಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರ ಶಿವರಾಜ್ ಅವರು ತುಮಕೂರು ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ಇನ್ಸ್ಪೆಕ್ಟರ್ ಶಾಂತಿನಾಥ್ ನೇತೃತ್ವದಲ್ಲಿ ಗುಬ್ಬಿಯ ಆರ್ಎಫ್ಒ ಕಚೇರಿಯಲ್ಲೇ ಕಾರ್ಯಾಚರಣೆ ನಡೆಸಲಾಯಿತು. ಸತೀಶ್ ಚಂದ್ರ ಅವರ ಸೂಚನೆಯಂತೆ ಹೊರಗುತ್ತಿಗೆ ನೌಕರ ಶೌಕತ್ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
