ಆ ಶ್ರೀಗಳು ಸ್ಥಾನ ಬಿಟ್ಟುಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗ್ತೇನೆ: ರಾಜಣ್ಣ ತಿರುಗೇಟು

Edited By:

Updated on: Jun 27, 2024 | 6:34 PM

ಡಿಕೆ ಶಿವಕುಮಾರ್​ಗೆ ಸಿಎಂ ಸ್ಥಾನ ಬಿಟ್ಟುಕೊಡಲಿ ಎಂಬ ಒಕ್ಕಗಲಿಗ ಚಂದ್ರಶೇಖರ ಸ್ವಾಮೀಜಿ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಅದರಲ್ಲೂ ಕಾಂಗ್ರೆಸ್​ನಲ್ಲಿ ಕಂಪನ ಸೃಷ್ಟಿಸಿದೆ. ಇನ್ನು ಸ್ವಾಮೀಜಿ ಅವರ ಈ ಹೇಳಿಕೆ ಪ್ರತಿಕ್ರಿಯಿಸಿದ ಸಚಿವ ಕೆಎನ್ ರಾಜಣ್ಣ, ಆ ಸ್ವಾಮೀಜಿಗಳು ಅವರ ಸ್ಥಾನ ಬಿಟ್ಟು ಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

ಬೆಂಗಳೂರು, (ಜೂನ್ 27): ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲಿ ಎಂದು ಒಕ್ಕಗಲಿಗ ಚಂದ್ರಶೇಖರ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಇಂದು (ಜೂನ್ 27) ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಸ್ವಾಮೀಜಿ ಖುದ್ದು ಸಿದ್ದರಾಮಯ್ಯ ಅವರಿಗೆ ಹೇಳಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇನ್ನು ಈ ಬಗ್ಗೆ ಬೆಂಗಳೂರಿನಲ್ಲಿ ಸಹಕಾರ ಸಚಿವ ಕೆಎನ್ ರಾಜಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಆ ಶ್ರೀಗಳು ಅವರ ಸ್ಥಾನ ಬಿಟ್ಟುಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗ್ತೇನೆ. ನಾಳೆಯಿಂದ ನಾನು ಕಾವಿ ಬಟ್ಟೆ ಹಾಕ್ತೀನಿ, ಅವರು ಬಿಟ್ಟು ಕೊಡುತ್ತಾರಾ? ಅವರು ಬಿಟ್ಟುಕೊಡಲ್ಲ, ಇವರು ಬಿಟ್ಟು ಕೊಡಲ್ಲ ಎಂದು ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದರು.

ಇದನ್ನೂ ಒದಿ: ಸಿದ್ದರಾಮಯ್ಯನವರೇ ದಯವಿಟ್ಟು ಡಿಕೆ ಶಿವಕುಮಾರ್​ಗೆ ಸಿಎಂ ಸ್ಥಾನ ಬಿಟ್ಟುಕೊಡಿ: ಚಂದ್ರಶೇಖರಶ್ರೀ ಮನವಿ

ಯಾರು ಬಿಟ್ಟು ಕೊಡ್ತಾರೆ, ಅವರು ಕೇಳಿದ ತಕ್ಷಣ ಬಿಟ್ಟುಕೊಡೊಕೆ ಆಗುತ್ತಾ? ಚಂದ್ರಶೇಖರ್‌ ಸ್ವಾಮೀಜಿ ಯಾವ ಉದ್ದೇಶದಿಂದ ಹೇಳಿದ್ದಾರೋ ಗೊತ್ತಿಲ್ಲ. ಸದುದ್ದೇಶದಿಂದ ಹೇಳಿದ್ದಾರೋ, ದುರುದ್ದೇಶದಿಂದ ಹೇಳಿದ್ದಾರೋ ಗೊತ್ತಿಲ್ಲ. ಎಲ್ಲರಿಗೂ ವಾಕ್ ಸ್ವಾತಂತ್ರ್ಯ ಇದೆ. ಸ್ವಾಮೀಜಿ ಹೇಳಿಕೆ ಸರಿ, ತಪ್ಪು ಅಂತಾ ವ್ಯಾಖ್ಯಾನ ಮಾಡೋಕೆ ಹೋಗಲ್ಲ. ಅಧಿಕಾರ ಬಿಟ್ಟು ಬಾರಪ್ಪ ಇನ್ನೊಬ್ಬ ಅಧಿಕಾರ ನಡೆಸು ಅಂತಾ ಇದೆಯಾ? ಆ ರೀತಿ ಉದಾಹರಣೆ ದೇಶದಲ್ಲಿ ಎಲ್ಲಾದರೂ ಇದೆಯಾ? ಹಾಗೆ ನೋಡಿದ್ರೆ ಸೋನಿಯಾ ಒಬ್ಬರೇ ಪ್ರಧಾನಿ ಹುದ್ದೆ ಬೇಡ ಅಂದವರು. ಬೇರೆಯವರಿಗೆ ಬಿಟ್ಟು ಕೊಟ್ಟಿರುವ ಇತಿಹಾಸ ಇಲ್ಲ. ಭರ್ತಿ ಮಾಡಲು ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಸದ್ಯಕ್ಕೆ ಖಾಲಿ ಇಲ್ಲ. ಡಿಸಿಎಂ ಸ್ಥಾನ ಖಾಲಿ ಇದೆ, ಅದನ್ನ ಭರ್ತಿ ಮಾಡಲಿ ಎಂದು ಖಡಕ್ ಆಗಿ ಹೇಳಿದರು. ಈ ಮೂಲಕ ಸ್ವಾಮೀಜಿ ಹೇಳಿಕೆಗೆ ತೀರುಗೇಟು ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Anil Kalkere