ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಅಮಾನವೀಯ ಹಲ್ಲೆ; ರೂಮಿನಲ್ಲಿ ಕೂಡಿ ಹಾಕಿ ಬೆಲ್ಟ್‌ನಿಂದ ಬಾರಿಸಿದ ಪ್ರಿನ್ಸಿಪಾಲ್!

Edited By:

Updated on: Mar 21, 2026 | 2:45 PM

ಮೂಡಿಗೆರೆಯ ಏಕಲವ್ಯ ವಸತಿ ಶಾಲೆಯಲ್ಲಿ ಪ್ರಿನ್ಸಿಪಾಲ್ ಮತ್ತು ಸಿಬ್ಬಂದಿ ಏಳು ವಿದ್ಯಾರ್ಥಿಗಳ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಆಟವಾಡಿದ ಕ್ಷುಲ್ಲಕ ಕಾರಣಕ್ಕೆ ಪ್ಲಾಸ್ಟಿಕ್ ಪೈಪ್ ಹಾಗೂ ಬೆಲ್ಟ್‌ನಿಂದ ಹೊಡೆದು, ಕೊಠಡಿಯಲ್ಲಿ ಬೀಗ ಹಾಕಲಾಗಿತ್ತು. ಪೊಲೀಸರು ಸ್ಥಳಕ್ಕೆ ತಕ್ಷಣ ಧಾವಿಸಿ ಗಾಯಗೊಂಡ ವಿದ್ಯಾರ್ಥಿಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.

ಮೂಡಿಗೆರೆ , ಮಾ,21: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿರುವ ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪ್ರಿನ್ಸಿಪಾಲ್ ಮತ್ತು ಸಿಬ್ಬಂದಿ ಮನಸೋಇಚ್ಛೆ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಅನುಮತಿ ಪಡೆಯದೆ ಆಟವಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ 7 ವಿದ್ಯಾರ್ಥಿಗಳನ್ನು ರೂಮಿನಲ್ಲಿ ಕೂಡಿ ಹಾಕಿ ಪ್ಲಾಸ್ಟಿಕ್ ಪೈಪ್ ಮತ್ತು ಬೆಲ್ಟ್‌ನಿಂದ ಥಳಿಸಲಾಗಿದೆ. ಶುಕ್ರವಾರ ರಾತ್ರಿ ವಿದ್ಯಾರ್ಥಿಗಳ ನಡುವೆ ಸಣ್ಣ ಗಲಾಟೆ ನಡೆದಿತ್ತು. ಈ ಸಿಟ್ಟಿನಲ್ಲಿದ್ದ ಪ್ರಿನ್ಸಿಪಾಲ್, ಶನಿವಾರ ಬೆಳಿಗ್ಗೆ ಅನುಮತಿ ಪಡೆಯದೆ ಮೈದಾನದಲ್ಲಿ ಆಟವಾಡುತ್ತಿದ್ದ 7 ವಿದ್ಯಾರ್ಥಿಗಳ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.ಪ್ರಿನ್ಸಿಪಾಲ್ ಸತೀಶ್ ಮತ್ತು ಸಿಬ್ಬಂದಿ ಶುಭಮ್ ಸೇರಿ ವಿದ್ಯಾರ್ಥಿಗಳ ಕೈಕಾಲುಗಳಿಗೆ ಬಾಸುಂಡೆ ಬರುವಂತೆ ಪ್ಲಾಸ್ಟಿಕ್ ಪೈಪ್ ಹಾಗೂ ಬೆಲ್ಟ್‌ನಿಂದ ಮನಸೋಇಚ್ಛೆ ಹೊಡೆದಿದ್ದಾರೆ. ಬಳಿಕ ವಿದ್ಯಾರ್ಥಿಗಳನ್ನು ರೂಮಿನೊಳಗೆ ಹಾಕಿ ಬೀಗ ಹಾಕಿದ್ದಾರೆ. ವಸತಿ ಶಾಲೆಯ ರೂಮಿನೊಳಗಿಂದ ವಿದ್ಯಾರ್ಥಿಗಳ ಕಿರುಚಾಟ ಮತ್ತು ಅಳು ಕೇಳಿ ಪಕ್ಕದ ಕಾಫಿ ತೋಟದ ಕಾರ್ಮಿಕರು ಬಣಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ರೂಮಿನಲ್ಲಿದ್ದ 7 ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಏಳು ವಿದ್ಯಾರ್ಥಿಗಳನ್ನು ಪೊಲೀಸರು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ವಿದ್ಯಾರ್ಥಿಗಳು ಪ್ರಿನ್ಸಿಪಾಲ್ ಸತೀಶ್ ಮತ್ತು ಸಿಬ್ಬಂದಿ ಶುಭಮ್ ಅವರ ಹೆಸರನ್ನು ಪೊಲೀಸರಿಗೆ ತಿಳಿಸಿದ್ದು, ಈ ಕುರಿತು ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us