ತೀವ್ರ ವಿರೋಧದ ನಡುವೆಯೂ ಮೈಸೂರು ದಸರಾದಲ್ಲಿ ಕಂಬಳಕ್ಕೆ ಭರದ ಸಿದ್ಧತೆ: ಟ್ರ್ಯಾಕ್ ನಿರ್ಮಾಣ ಕಾರ್ಯ ಆರಂಭ

Edited By:

Updated on: Aug 20, 2026 | 2:33 PM

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಕಂಬಳ ಕ್ರೀಡೆ ಆಯೋಜನೆಗೆ ಸಿದ್ಧತೆ ನಡೆದಿದೆ. ಸಾತಗಳ್ಳಿಯಲ್ಲಿ ಟ್ರ್ಯಾಕ್ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಪರಿಸರವಾದಿಗಳು, ಇತಿಹಾಸ ತಜ್ಞರು, ಕನ್ನಡಪರ ಸಂಘಟನೆಗಳು ಮತ್ತು ವಿರೋಧ ಪಕ್ಷದ ತೀವ್ರ ವಿರೋಧದ ನಡುವೆಯೂ, ಅಕ್ಟೋಬರ್ 18 ಮತ್ತು 19 ರಂದು ಕಂಬಳ ಆಚರಣೆಗೆ ಸರ್ಕಾರ ನಿರ್ಧರಿಸಿದೆ.

ಮೈಸೂರು, ಆಗಸ್ಟ್ 20: ತೀವ್ರ ವಿರೋಧದ ನಡುವೆಯೂ ಮೈಸೂರು ದಸರಾ ಮಹೋತ್ಸವ-2026ರ ಸಂದರ್ಭದಲ್ಲಿ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳವನ್ನು ಆಯೋಜಿಸಲು ರಾಜ್ಯ ಸರ್ಕಾರ ಭರದಿಂದ ಸಿದ್ಧತೆ ನಡೆಸುತ್ತಿದೆ. ಮೈಸೂರಿನ ಸಾತಗಳ್ಳಿ ರಿಂಗ್ ರಸ್ತೆ ಸಮೀಪದಲ್ಲಿ ಕಂಬಳದ ಟ್ರ್ಯಾಕ್ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಮೈಸೂರು ದಸರಾ ಅಕ್ಟೋಬರ್ 11 ರಿಂದ 21 ರವರೆಗೆ ನಡೆಯಲಿದ್ದು, ಕಂಬಳ ಕ್ರೀಡೆಯು ಅಕ್ಟೋಬರ್ 18 ಮತ್ತು 19 ರಂದು ಆಯೋಜನೆಯಾಗಲಿದೆ. ಕಂಬಳಕ್ಕಾಗಿ ಕೃತಕ ಕೆಸರುಗದ್ದೆ ನಿರ್ಮಿಸಲು ಮರಗಳನ್ನು ಕಡಿಯುವ ಕಾರ್ಯಕ್ಕೆ ಪರಿಸರವಾದಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟಿಸಿದ್ದರು. ಇತಿಹಾಸ ತಜ್ಞರು ದಸರೆಯ ಮಹತ್ವಕ್ಕೆ ಕಂಬಳ ಸರಿಹೊಂದುವುದಿಲ್ಲ ಎಂದು ವಾದಿಸಿದರೆ, ಕನ್ನಡಪರ ಸಂಘಟನೆಗಳು ಭೀಕರ ಬರಗಾಲದ ಸಂದರ್ಭದಲ್ಲಿ 25 ಲಕ್ಷ ಲೀಟರ್ ನೀರು ವ್ಯರ್ಥ ಮಾಡುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದವು. ವಿರೋಧ ಪಕ್ಷ ಬಿಜೆಪಿ ಮತ್ತು ಮೈಸೂರು ರಾಜಮನೆತನದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕೂಡ ಕಂಬಳದ ಆಯೋಜನೆಗೆ ಅಸಮ್ಮತಿ ಸೂಚಿಸಿದ್ದರು.

ಇಷ್ಟೆಲ್ಲಾ ವಿರೋಧದ ನಡುವೆಯೂ, ರಾಜ್ಯ ಸರ್ಕಾರ ತನ್ನ ನಿರ್ಧಾರಕ್ಕೆ ಅಚಲವಾಗಿ ನಿಂತಿದೆ. ಕರಾವಳಿ ಭಾಗದಿಂದ 140 ಜೋಡಿ ಕೋಣಗಳು ಈಗಾಗಲೇ ನೋಂದಾಯಿಸಿಕೊಂಡಿದ್ದು, ಅವುಗಳ ಆಗಮನಕ್ಕೆ ಸಿದ್ಧತೆ ನಡೆದಿದೆ. ಕಂಬಳ ಆಯೋಜನೆಯ ಮುಂದಿನ ಬೆಳವಣಿಗೆಗಳ ಬಗ್ಗೆ ಕುತೂಹಲ ಮೂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us