ಪ್ರಧಾನಿಯ ಬೆಂಗಾವಲು ಪಡೆಯನ್ನು ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ ಸಮಂತ್ ಗೋಯಲ್
ಇಂಧನ ಬಿಕ್ಕಟ್ಟಿನಿಂದಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಬೆಂಗಾವಲು ಪಡೆಯ ವಾಹನಗಳ ಸಂಖ್ಯೆಯನ್ನು ಕಡಿಮೆಗೊಳಿಸಿದ್ದಾರೆ. ಇತರೆ ಕೇಂದ್ರ ಸಚಿವರು ಕೂಡ ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿಮೆಗೊಳಿಸಿದ್ದಾರೆ. ಆದರೆ, ಇದು ಸರಿಯಲ್ಲ. ಇದರಿಂದ ಭದ್ರತಾ ಅಪಾಯಗಳು ಉಂಟಾಗಬಹುದು ಎಂದು ಮಾಜಿ ರಾ (RAW) ಮುಖ್ಯಸ್ಥ ಸಮಂತ್ ಗೋಯಲ್ ಹೇಳಿದ್ದಾರೆ.
ನವದೆಹಲಿ, ಮೇ 15: ಭಾರತದಲ್ಲಿ ಉಂಟಾಗಿರುವ ಇಂಧನದ ಬಿಕ್ಕಟ್ಟನ್ನು ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ (PM Modi) ವಾಹನಗಳ ಬಳಕೆಯನ್ನು ಕಡಿಮೆಗೊಳಿಸಲು ಸೂಚಿಸಿದ್ದರು. ಪ್ರಧಾನಿ ಮೋದಿ ಕೂಡ ತಮ್ಮ ಬೆಂಗಾವಲು ಪಡೆಯ ಪ್ರಮಾಣವನ್ನು ಕಡಿಮೆಗೊಳಿಸಿದ್ದರು. ಈ ಬಗ್ಗೆ ಭಾರತದ ಮಾಜಿ ಬಾಹ್ಯ ಗುಪ್ತಚರ ಸಂಸ್ಥೆ ರಾ (RAW) ಮುಖ್ಯಸ್ಥ ಸಮಂತ್ ಗೋಯಲ್ ಪ್ರತಿಕ್ರಿಯೆ ನೀಡಿದ್ದಾರೆ.
“ಪ್ರಸ್ತುತ ಅಂತಾರಾಷ್ಟ್ರೀಯ ಭದ್ರತಾ ಪರಿಸ್ಥಿತಿ ಅಸ್ಥಿರವಾಗಿದೆ. ಅಮೆರಿಕವನ್ನು ಸುರಕ್ಷಿತ ದೇಶವೆಂದು ಪರಿಗಣಿಸಿದ್ದರೂ ಅದರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ 3 ದಾಳಿಗಳು ನಡೆದಿವೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಲೇ ಇವೆ. ಪಕ್ಕದ ದೇಶದಿಂದಲೇ ಭಾರತಕ್ಕೆ ಭದ್ರತಾ ಆತಂಕವಿದೆ. ಹೀಗಾಗಿ, ನಾವು ಪ್ರಧಾನಿಯವರ ಭದ್ರತೆಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಇಂತಹ ಸಂದರ್ಭದಲ್ಲಿ ನಾವು ಅವರ ಭದ್ರತೆಯನ್ನು ಕಡಿಮೆ ಮಾಡುವ ಬದಲು ಬಲಪಡಿಸಬೇಕು. ಈ ರೀತಿ ಬೆಂಗಾವಲು ಪಡೆಯನ್ನು ಕಡಿಮೆ ಮಾಡುವುದು ರಾಷ್ಟ್ರದ ಹಿತಾಸಕ್ತಿಯ ದೃಷ್ಟಿಯಿಂದ ಒಳ್ಳೆಯದಲ್ಲ.” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ