ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ: ಸ್ಟುಪಿಡ್‌ ಎಂದ ಬಿಜೆಪಿ

ವಿವೇಕ ಬಿರಾದಾರ

Updated on: Nov 21, 2024 | 8:40 AM

ಶಿಕ್ಷಣ ಸಚಿವರಿಗೆ "ಕನ್ನಡ ಬರಲ್ಲ" ಎಂದು ಹೇಳಿದ್ದ ವಿದ್ಯಾರ್ಥಿ ವಿರುದ್ಧ ಮಧು ಬಂಗಾರಪ್ಪ ಆಕ್ರೋಶಗೊಂಡಿದ್ದಾರೆ. ಯಾರು ಆ ವಿದ್ಯಾರ್ಥಿ ಕ್ರಮ ಕೈಗೊಳ್ಳಿ ಎಂದು ಆದೇಶಿಸಿದ್ದಾರೆ. ಶಿಕ್ಷಣ ಸಚಿವರ ಆದೇಶಕ್ಕೆ ಬಿಜೆಪಿ ಕಿಡಿ ಕಾರಿದೆ.

ಬೆಂಗಳೂರು, ನವೆಂಬರ್ 21: ಬುಧವಾರ ವಿಧಾನಸೌಧದಲ್ಲಿ ನಡೆದ ನೀಟ್​ ಕೋಚಿಂಗ್​ ತರಬೇತಿ ಉದ್ಘಾಟನಾ ಸಮಾರಂಭದಲ್ಲಿ ಓರ್ವ ವಿದ್ಯಾರ್ಥಿ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರಿಗೆ “ಕನ್ನಡ ಬರಲ್ಲ” (Kannada Baralla) ಎಂದು ಹೇಳಿದ್ದನು. ಇದರಿಂದ ಆಕ್ರೋಶಗೊಂಡ ಸಚಿವ ಮಧು ಬಂಗಾರಪ್ಪ ಆ ವಿದ್ಯಾರ್ಥಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆದೇಶಿಸಿದರು.

ಕಾರ್ಯಕ್ರಮಲ್ಲಿ ಸಚಿವರು ಬೇರೆ ಬೇರೆ ಜಿಲ್ಲೆಗಳ ವಿದ್ಯಾರ್ಥಿ ಹಾಗೂ ಶಿಕ್ಷಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದರು. ಈ ವೇಳೆ ಆನ್ಲೈನ್​ನಲ್ಲಿ ಅಭಿಪ್ರಯ ಹಂಚಿಕೊಳ್ಳುವ ವೇಳೆ ವಿದ್ಯಾರ್ಥಿಯೊಬ್ಬ “ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ” ಅಂತ ಹೇಳಿದನು.

ವಿದ್ಯಾರ್ಥಿ ಹೇಳಿಕೆಯನ್ನು ಆರಂಭದಲ್ಲಿ ತಮಾಷೆಯಾಗಿ ತೆಗೆದುಕೊಂಡ ಶಿಕ್ಷಣ ಸಚಿವ ಮಧು ಬಂಗಾರಪ್ಪ ನಂತರ ವಿದ್ಯಾರ್ಥಿ ವಿರುದ್ಧ ಗರಂ ಆದರು. “ಈಗ ನಾನೇನು ಉರ್ದುವಿನಲ್ಲಿ ಮಾತನಾಡುತ್ತಿದ್ದೇನಾ? ಸ್ಟುಪೀಡ್. ಯಾರೂ ಹಾಗೆ ಹೇಳಿದ್ದು, ಮಾಹಿತಿ ತೆಗದುಕೊಳ್ಳಿ ಸುಮ್ಮನೆ ಬಿಡಬೇಡಿ” ಅಂತಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರಿಗೆ ಸೂಚನೆ ನೀಡಿದರು.

ಶಿಕ್ಷಣ ಸಚಿವರ ಈ ಆದೇಶಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. “ಟ್ವೀಟ್​ ಮಾಡಿ, ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ. ಇದು ಅಕ್ಷರಶಃ ನಮ್ಮ ಅವಿದ್ಯಾವಂತ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಅನ್ವಯಿಸುತ್ತದೆ!!”

“ನನಗೆ ಕನ್ನಡ ಸರಿಯಾಗಿ ಬರುವುದಿಲ್ಲ ಎಂದು ಮಧು ಬಂಗಾರಪ್ಪ ಅವರೆ ಹಿಂದೊಮ್ಮೆ ಹೇಳಿದ್ದರು, ಅದನ್ನೇ ವಿದ್ಯಾರ್ಥಿಯೊಬ್ಬ ನೆನಪಿಸದ ತಕ್ಷಣ, ಆ ವಿದ್ಯಾರ್ಥಿ ಸೇರಿದಂತೆ ಅಲ್ಲಿನ ಶಿಕ್ಷಕರು ಹಾಗೂ ಬಿಇಒ ಮೇಲೆ ಕ್ರಮ ಕೈಗೊಳ್ಳಿ ಎಂದು ಆದೇಶಿಸಿರುವುದು ನಿಜಕ್ಕೂ ಸ್ಟುಪಿಡ್‌!! ಕಾಂಗ್ರೆಸ್ಸಿಗರ ಈ ರೀತಿಯ ಸರ್ವಾಧಿಕಾರಿ ಧೋರಣೆ ಪ್ರಜಾಪ್ರಭುತ್ವಕ್ಕೆ ಮಾರಕ” ಎಂದಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us