Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳ ತಂಡದ ಗೆಲುವಿನ ಹಿಂದಿದೆ ಒಂದು ಕರಾಳ ಕಥೆ..!

ಕೇರಳ ತಂಡದ ಗೆಲುವಿನ ಹಿಂದಿದೆ ಒಂದು ಕರಾಳ ಕಥೆ..!

ಝಾಹಿರ್ ಯೂಸುಫ್
|

Updated on: Feb 22, 2025 | 10:54 AM

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ರಣಜಿ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಗುಜರಾತ್ ತಂಡದ ವಿರುದ್ಧ ಕೇರಳ ತಂಡ ಜಯ ಸಾಧಿಸಿದೆ. ಅದು ಕೂಡ ಕೇವಲ 2 ರನ್​ಗಳ ಮುನ್ನಡೆಯೊಂದಿಗೆ. ಅಂದರೆ ರಣಜಿ ಟೂರ್ನಿಯ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಡ್ರಾ ಆದರೆ ಮೊದಲ ಇನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸಿದ ತಂಡಗಳನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.

ನವೆಂಬರ್ 25, 2014 ಕ್ರಿಕೆಟ್ ಅಂಗಳದ ಕರಾಳ ದಿನ. ಈ ದಿನದಂದು ಆಸ್ಟ್ರೇಲಿಯಾದಲ್ಲಿ ನಡೆದ ದೇಶೀಯ ಟೂರ್ನಿಯ ಪಂದ್ಯದ ವೇಳೆ ಶಾನ್ ಅಬಾಟ್ ಎಸೆದ ಚೆಂಡು ಫಿಲ್ ಹ್ಯೂಸ್ ಅವರ ತಲೆಯ ಹಿಂಭಾಗಕ್ಕೆ ತಾಗಿತ್ತು. ತಕ್ಷಣವೇ ಕುಸಿದು ಬಿದ್ದಿದ್ದ ಫಿಲಿಪ್ ಹ್ಯೂಸ್ ಕೋಮಾಕ್ಕೆ ಜಾರಿದ್ದರು. ಇದಾಗಿ 2 ದಿನಗಳ ನಂತರ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

ಈ ನಿಧನದ ಬಳಿಕ ಕ್ರಿಕೆಟ್​ನಲ್ಲಿ ಹೆಲ್ಮೆಟ್ ನಿಯಮವನ್ನು ಮತ್ತಷ್ಟು ಕಠಿಣಗೊಳಿಸಲಾಯಿತು. ಅದರಲ್ಲೂ ಚೆಂಡು ಹೆಲ್ಮೆಟ್​​ಗೆ ತಾಗಿದರೆ ವೈದ್ಯಕೀಯ ಪರಿಶೀಲನೆ ಅತ್ಯಗತ್ಯ ಎಂಬ ನಿಯಮವನ್ನು ಜಾರಿಗೊಳಿಸಲಾಯಿತು. ಇದರ ಜೊತೆಗೆ ಕ್ಲೋಸ್-ಇನ್ ಫೀಲ್ಡರ್​ ಹೆಲ್ಮೆಟ್​ ಧರಿಸುವುದನ್ನು ಕಡ್ಡಾಯಗೊಳಿಸಲಾಯಿತು. ಅಲ್ಲದೆ ಹೆಲ್ಮೆಟ್​ಗೆ ಚೆಂಡು ಬಡಿದು ಕ್ಯಾಚ್, ಸ್ಟಂಪ್ಡ್ ಅಥವಾ ರನೌಟ್ ಆಗುವುದನ್ನು ಸಹ ಕಾನೂನುಬದ್ಧಗೊಳಿಸಲಾಯಿತು. ಬ್ಯಾಟರ್ ಹತ್ತಿರ ನಿಲ್ಲುವ ಫೀಲ್ಡರ್​ಗಳು ಹೆಲ್ಮೆಟ್​ ಬಳಸುವುದನ್ನು ಹೆಚ್ಚಿಸಲೆಂದೇ ಹಳೆಯ ನಿಯಮದಲ್ಲಿ ಬದಲಾವಣೆ ತರಲಾಯಿತು.

ಅದರಂತೆ 2023 ರಲ್ಲಿ ಸ್ಟಂಪ್‌ಗಳ ಬಳಿ ನಿಲ್ಲುವ ವಿಕೆಟ್‌ಕೀಪರ್‌ಗಳು ಮತ್ತು ಬ್ಯಾಟರ್‌ನ ಹತ್ತಿರವಿರುವ ಫೀಲ್ಡರ್‌ಗಳಿಗೆ (ಸ್ಲಿಪ್ಸ್ ಫೀಲ್ಡರ್‌ಗಳನ್ನು ಹೊರತುಪಡಿಸಿ) ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಅಲ್ಲದೆ ಹೆಲ್ಮೆಟ್​ಗೆ ಚೆಂಡು ತಾಗಿ ಕ್ಯಾಚ್, ಸ್ಟಂಪ್ಡ್ ಅಥವಾ ರನೌಟ್ ಆದರೆ ಅದನ್ನು ಔಟ್ ಎಂದು ಪರಿಗಣಿಸಲಾಗುವ ನಿಯಮವನ್ನು ಜಾರಿಗೊಳಿಸಲಾಗಿದೆ.

ಫಿಲ್ ಹ್ಯೂಸ್ ಅವರ ನಿಧನದಿಂದಾಗಿ ಬದಲಾದ ಈ ನಿಯಮವೇ ರಣಜಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಕೇರಳ ತಂಡದ ಕೈ ಹಿಡಿದಿದೆ. ಏಕೆಂದರೆ ಅಹಮದಾಬಾದ್​ನಲ್ಲಿ ನಡೆದ ರಣಜಿ ಟೂರ್ನಿ ಸೆಮಿಫೈನಲ್ ಪಂದ್ಯದಲ್ಲಿ ಕೇರಳ ಮತ್ತು ಗುಜರಾತ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡದ ಕೇರಳ ತಂಡವು ಮೊದಲ ಇನಿಂಗ್ಸ್​ನಲ್ಲಿ 457 ರನ್ ಪೇರಿಸಿತು.

ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಗುಜರಾತ್ ತಂಡವು 9 ವಿಕೆಟ್​ ಕಳೆದುಕೊಂಡು 455 ರನ್​ ಕಲೆಹಾಕಿತ್ತು. ಅತ್ತ ಪಂದ್ಯವು ಕೊನೆಯ ದಿನದಾಟಕ್ಕೆ ಕಾಲಿಟ್ಟಿದ್ದರಿಂದ ಗುಜರಾತ್ ತಂಡಕ್ಕೆ ಮುನ್ನಡೆ ಅತ್ಯವಶ್ಯಕವಾಗಿತ್ತು. ಏಕೆಂದರೆ ರಣಜಿ ಟೂರ್ನಿಯ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಡ್ರಾ ಆದರೆ ಮೊದಲ ಇನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸಿದ ತಂಡಗಳನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.

ಇತ್ತ ಡ್ರಾನತ್ತ ಸಾಗಿದ್ದ ಈ ಪಂದ್ಯದ ಮೂಲಕ ಫೈನಲ್​ಗೇರಲು ಗುಜರಾತ್ ತಂಡ ಮೊದಲ ಇನಿಂಗ್ಸ್​ನಲ್ಲಿ ಕೇವಲ ಮೂರು ರನ್​ಗಳ ಮುನ್ನಡೆಗಳಿಸಿದ್ದರೆ ಸಾಕಿತ್ತು. ಈ ಹಂತದಲ್ಲಿ ಗುಜರಾತ್ ಬ್ಯಾಟರ್ ಅರ್ಝಾನ್ ನಾಗಸ್ವಲ್ಲಾ ಬಾರಿಸಿದ ಚೆಂಡು ನೇರವಾಗಿ ಶಾರ್ಟ್ ಲೆಗ್‌ನಲ್ಲಿ ಫೀಲ್ಡಿಂಗ್​ನಲ್ಲಿದ್ದ ಸಲ್ಮಾನ್ ನಿಝಾರ್ ಅವರ ಹೆಲ್ಮೆಟ್​ಗೆ ಬಡಿದಿದೆ. ಹೆಲ್ಮೆಟ್​ಗೆ ತಾಗಿ ಗಾಳಿಯಲ್ಲಿ ಹಾರಿದ ಚೆಂಡು ನೇರವಾಗಿ ಸ್ಲಿಪ್​ನಲ್ಲಿದ್ದ ಸಚಿನ್ ಬೇಬಿ ಅವರ ಕೈ ಸೇರಿದೆ.

ಅಂತಿಮ ವಿಕೆಟ್ ಸಿಕ್ಕ ಖುಷಿಯಲ್ಲಿ ಕೇರಳ ತಂಡದ ಫೀಲ್ಡರ್​ಗಳು ಸಂಭ್ರಮಿಸಲಾರಂಭಿಸಿದರು. ಇದಾಗ್ಯೂ ಫೀಲ್ಡ್ ಅಂಪೈರ್ ಔಟ್ ನೀಡಿರಲಿಲ್ಲ. ಆ ಬಳಿಕ ಅಂಪೈರ್​ಗಳು ನಿಯಮಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಫಿಲ್ ಹ್ಯೂಸ್ ಸಾವಿನ ಬಳಿಕ ಹೆಲ್ಮೆಟ್ ನಿಯಮದಲ್ಲಿ ಬದಲಾವಣೆ ಮಾಡಲಾಗಿರುವುದು ಕಂಡು ಬಂದಿದೆ. ಈ ನಿಯಮದಂತೆ ಫೀಲ್ಡ್ ಅಂಪೈರ್ ಔಟ್ ನೀಡಿದ್ದಾರೆ.

ಅಲ್ಲಿಗೆ ಗುಜರಾತ್ ತಂಡದ ಮೊದಲ ಇನಿಂಗ್ಸ್ 455 ರನ್​ಗಳಿಗೆ ಅಂತ್ಯಗೊಂಡಿತು.  ಇದರೊಂದಿಗೆ ಕೇರಳ ತಂಡವು ಮೊದಲ ಇನಿಂಗ್ಸ್​ನಲ್ಲಿ ಕೇವಲ 2 ರನ್​ಗಳ ಮುನ್ನಡೆ ಪಡೆಯಿತು. ಈ ಅತ್ಯಲ್ಪ ಮುನ್ನಡೆಯೊಂದಿಗೆ ಕೇರಳ ತಂಡವು 74 ವರ್ಷಗಳ ಬಳಿಕ ರಣಜಿ ಟೂರ್ನಿಯ ಫೈನಲ್​ಗೇರುವಲ್ಲಿ ಯಶಸ್ವಿಯಾಗಿದೆ. ಅದು ಸಹ ಕ್ರಿಕೆಟ್ ಅಂಗಳದ ಕರಾಳ ಘಟನೆಯಿಂದಾಗಿ ಬದಲಾದ ನಿಯಮದಿಂದ ಎಂಬುದೇ ವಿಶೇಷ.