ಪಕ್ಷದ ಕಾರ್ಯಕರ್ತೆಯರ ಕರೆಸಿ ಫಾರ್ಮ್​ಹೌಸ್​ನಲ್ಲಿ ಅಶ್ಲೀಲ ವಿಡಿಯೋ ರೆಕಾರ್ಡಿಂಗ್ ಮಾಡಲಾಗಿತ್ತಾ?

Updated on: May 02, 2024 | 2:50 PM

Prajwal Revanna sexual assault videos: ಪ್ರಜ್ವಲ್ ರೇವಣ್ಣ ಅವರೆದ್ದೆನ್ನಲಾದ ವಿಡಿಯೋ ರೆಕಾರ್ಡಿಂಗ್​ಗಳಿರುವ ಪೆನ್ ಡ್ರೈವ್ ಪ್ರಕರಣ ಸದ್ದು ಮಾಡುತ್ತಿದೆ. ಈ ವಿಡಿಯೋಗಳನ್ನು ಹಾಸನದಲ್ಲಿರುವ ಎಂಪಿ ಹೌಸ್ ಮತ್ತು ಹೊಳೆನರಸೀಪುರದಲ್ಲಿರುವ ಫಾರ್ಮ್ ಹೌಸ್​ನಲ್ಲಿ ಚಿತ್ರೀಕರಿಸಿರಬಹುದು. ಪಕ್ಷದ ಕಾರ್ಯಕರ್ತೆಯರನ್ನು ವಿಡಿಯೋ ರೆಕಾರ್ಡಿಂಗ್​ಗೆ ಬಳಸಿರಬಹುದು ಎಂದು ಸಂಸದ ಡಿಕೆ ಸುರೇಶ್ ಅನುಮಾನಿಸಿದ್ದಾರೆ. ಪ್ರಜ್ವಲ್ ರೇವಣ್ಣ ಹಾಸನಕ್ಕೆ ಬಂದಾಗ ಹೆಚ್ಚಾಗಿ ಪಡುವಲಹಿಪ್ಪೆಯಲ್ಲಿನ ಫಾರ್ಮ್​ಹೌಸ್​ನಲ್ಲೇ ಇರುತ್ತಿದ್ದರು ಎನ್ನಲಾಗಿದೆ.

ಹಾಸನ, ಮೇ 2: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ (Prajwal Revanna sex scandal) ಪ್ರಕರಣದ ಸದ್ದು ಮುಂದುವರಿದಿದೆ. ಎಸ್​ಐಟಿಯಿಂದ ತನಿಖೆ ನಡೆಯುತ್ತಿದೆ. ಪೆನ್​ಡ್ರೈವ್​ನಲ್ಲಿ 3,000 ಸಂಖ್ಯೆಗೆ ಸಮೀಪದಷ್ಟು ವಿಡಿಯೋಗಳಿವೆ ಎನ್ನುವ ಮಾತು ಹರಿದಾಡುತ್ತಿದೆ. ಇಷ್ಟು ಪ್ರಮಾಣದ ವಿಡಿಯೋಗಳು ಎಲ್ಲೆಲ್ಲಿ ರೆಕಾರ್ಡ್ ಆಗಿವೆ ಎಂಬುದು ಗೊತ್ತಾಗಬೇಕಿದೆ. ಇದೇ ವೇಳೆ ಕಾಂಗ್ರೆಸ್ ನಾಯಕ ಹಾಗೂ ಸಚಿವ ಡಿ.ಕೆ. ಸುರೇಶ್ (DK Suresh) ಅವರು, ಈ ವಿಡಿಯೋಗಳನ್ನು ಹಾಸನದ ತಮ್ಮ ಫಾರ್ಮ್​ಹೌಸ್​ನಲ್ಲಿ ರೆಕಾರ್ಡ್ ಮಾಡಿರಬಹುದು ಎಂದು ಅನುಮಾನಿಸಿದ್ದಾರೆ.

ಹಾಸನದಲ್ಲಿರುವ ಎಂಪಿ ಹೌಸ್ ಅಥವಾ ಸರ್ಕಾರಿ ಬಂಗಲೆ, ಹೊಳೆನರಸೀಪುರದ ತೋಟದ ಮನೆಯಲ್ಲಿ ಪ್ರಜ್ವಲ್ ರೇವಣ್ಣ ಈ ಲೈಂಗಿಕ ದೌರ್ಜನ್ಯದ ವಿಡಿಯೋಗಳನ್ನು ರೆಕಾರ್ಡ್ ಮಾಡಿರಬಹುದು. ಪಕ್ಷದ ಕಾರ್ಯಕರ್ತೆಯರನ್ನು ಕರೆಸಿ ಈ ಕೆಲಸ ಮಾಡಿಸಿರಬಹುದು ಎಂದು ಡಿಕೆ ಸುರೇಶ್ ಶಂಕಿಸಿದ್ದಾರೆ.

ಕಷ್ಟ ಹೇಳಿಕೊಂಡು ಎಂಪಿ ಹೌಸ್​ಗೆ ಬರುವ ಮಹಿಳೆಯರನ್ನು ಪ್ರಜ್ವಲ್ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದರು ಎನ್ನುವ ಆರೋಪವೂ ಇದೆ. ಪೆನ್​ಡ್ರೈವ್​ನಲ್ಲಿರುವ ವಿಡಿಯೋಗಳು ಅಸಲಿ ಎಂಬುದು ಸಾಬೀತಾದ ಬಳಿಕ ಎಸ್​ಐಟಿ ತಂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಬಹುದು.

ಇದನ್ನೂ ಓದಿ: ದೇವೇಗೌಡ ಕುಟುಂಬದ ಆಸ್ತಿ ಪೆನ್​ಡ್ರೈವ್, ತೆನೆ ಹೊತ್ತ ಮಹಿಳೆ ಪೆನ್​ಡ್ರೈವ್ ಹೊರಬೇಕಾಗುತ್ತದೆ: ಡಿಕೆ ಸುರೇಶ್ ತಿರುಗೇಟು

ಹಾಸನದ ಸಂಸದರಾಗಿರುವ ಪ್ರಜ್ವಲ್ ರೇವಣ್ಣ ದೆಹಲಿಯಿಂದ ಮರಳಿ ಬಂದಾಗ ಹಾಸನದಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ಉಳಿದುಕೊಳ್ಳುತ್ತಾರೆ. ಹೆಚ್ಚು ಕಾಲ ಅವರು ಹೊಳೆನರಸೀಪುರದ ಪಡುವಲಹಿಪ್ಪೆ ಗ್ರಾಮದಲ್ಲಿ ಉಳಿಯುತ್ತಾರೆ. ಈ ಪಡುವಲಹಿಪ್ಪೆ ಗ್ರಾಮದಲ್ಲಿ ದೇವೇಗೌಡರ ಕುಟುಂಬದ ದೊಡ್ಡ ಪ್ರಮಾಣದ ಜಮೀನು ಇದೆ. ತೋಟದ ಮನೆಯಿಂದ ಹಿಡಿದು ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಉಳಿದುಕೊಳ್ಳಲು ಮನೆಗಳೂ ಈ ಫಾರ್ಮ್​ಹೌಸ್​ನಲ್ಲಿವೆ.

ದೇವೇಗೌಡರು ಹುಟ್ಟಿದ್ದು ಹರದನಹಳ್ಳಿಯಾದರೂ ಬೆಳೆದದ್ದೆಲ್ಲಾ ಪಡುವಲಹಿಪ್ಪೆಯಲ್ಲೇ. ಎಚ್.ಡಿ. ರೇವಣ್ಣ ಹಾಗೂ ಮೊಮ್ಮಕ್ಕಳು ಈ ಪಡುವಲಹಿಪ್ಪೆಯಲ್ಲೇ ಹುಟ್ಟಿ ಬೆಳೆದದ್ದು ಎನ್ನಲಾಗುತ್ತಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published on: May 02, 2024 02:49 PM
Follow Us
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More