ನಾಗೇಂದ್ರ ರಾಜೀನಾಮೆ ಕೊಟ್ಟರೂ ಬಿಜೆಪಿ ಪಾದಯಾತ್ರೆ ನಿಲ್ಲಿಸಲ್ಲ: ಆರ್ ಅಶೋಕ್
ವಾಲ್ಮೀಕಿ ನಿಗಮ ಹಗರಣದ ಹಿನ್ನೆಲೆಯಲ್ಲಿ ಬಿ. ನಾಗೇಂದ್ರ ರಾಜೀನಾಮೆಯನ್ನು ವಿಪಕ್ಷದ ಹೋರಾಟದ ಫಲ ಎಂದು ಆರ್. ಅಶೋಕ್ ಬಣ್ಣಿಸಿದ್ದಾರೆ. ದಲಿತರ ಹಣ ದುರುಪಯೋಗಪಡಿಸಿಕೊಂಡರೆ ಉಳಿಗಾಲವಿಲ್ಲ ಎಂದು ಕಾಂಗ್ರೆಸ್ಗೆ ಎಚ್ಚರಿಕೆ ನೀಡಿದ ಅವರು, ಬರಗಾಲ, ನೈಸ್, ಬಿಡದಿ, ಕೆಪಿಎಸ್ಸಿ ಹಗರಣದಂತಹ ಹಲವು ವಿಚಾರಗಳಿಗಾಗಿ ಪಾದಯಾತ್ರೆ ಮುಂದುವರಿಯಲಿದೆ ಎಂದು ಘೋಷಿಸಿದರು.
ಬೆಂಗಳೂರು, ಆಗಸ್ಟ್ 29: ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ರಾಜೀನಾಮೆಯು ವಿರೋಧ ಪಕ್ಷದ ಒಗ್ಗಟ್ಟಿನ ಹೋರಾಟದ ಫಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ವಿಧಾನಸಭೆ ಒಳಗಡೆ ಮತ್ತು ಹೊರಗಡೆ ನಡೆಸಿದ ಹೋರಾಟಕ್ಕೆ ದಲಿತರಿಗೆ ನ್ಯಾಯ ಸಿಕ್ಕಿದೆ ಎಂದು ಅವರು ತಿಳಿಸಿದರು. ಈ ಹೋರಾಟದಲ್ಲಿ ರಾಜ್ಯಾದ್ಯಂತ ಪಾಲ್ಗೊಂಡ ಎಲ್ಲರಿಗೂ, ವಿಶೇಷವಾಗಿ ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಶಾಸಕರಿಗೆ ಅಶೋಕ್ ಧನ್ಯವಾದ ಹೇಳಿದರು. ಇನ್ನು ಮುಂದೆ ಆದರೂ ಕಾಂಗ್ರೆಸ್ ಪಕ್ಷ ಬುದ್ಧಿ ಕಲಿಯಬೇಕು. ದಲಿತರ ಹಣ ದುರುಪಯೋಗಪಡಿಸಿಕೊಂಡರೆ ಉಳಿಗಾಲವಿಲ್ಲ ಎಂದು ಅವರು ಎಚ್ಚರಿಸಿದರು. ಎಸ್ಸಿಪಿ ಮತ್ತು ಟಿಎಸ್ಪಿ ಹಣವನ್ನು ದುರುಪಯೋಗಪಡಿಸಿಕೊಳ್ಳುವ ವಿಚಾರ ಮುಂದೊಂದು ದಿನ ದೊಡ್ಡ ವಿಷಯವಾಗುತ್ತದೆ ಎಂದು ಅಶೋಕ್ ಸೂಚ್ಯವಾಗಿ ನುಡಿದರು.
ಈ ಸರ್ಕಾರ ಬಂದ ಮೂರೇ ತಿಂಗಳಲ್ಲಿ ವಿರೋಧ ಪಕ್ಷದ ಹೋರಾಟದಿಂದ ಮೊದಲ ವಿಕೆಟ್ ಪತನವಾಗಿದೆ ಎಂದು ಅವರು ಹೇಳಿದರು. ನಾಗೇಂದ್ರ ರಾಜೀನಾಮೆ ನೀಡಿದರೂ, ಬರಗಾಲ, ನೈಸ್, ಬಿಡದಿ, ಕೆಪಿಎಸ್ಸಿ ಹಗರಣ ಸೇರಿದಂತೆ ಚರ್ಚೆಗೆ ಬಾರದ ಹಲವು ವಿಚಾರಗಳಿಗಾಗಿ ಜನಗಳ ಮುಂದೆ ಪಾದಯಾತ್ರೆ ನಡೆಸಲಾಗುವುದು ಎಂದು ಆರ್. ಅಶೋಕ್ ಸ್ಪಷ್ಟಪಡಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
