ರಂಗನತಿಟ್ಟುನಲ್ಲಿ ವಿದೇಶಿ ಮಾದರಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ

Edited By:

Updated on: Sep 10, 2026 | 5:25 PM

ಪ್ರವಾಹದಿಂದ ರಂಗನತಿಟ್ಟು ಪಕ್ಷಿಧಾಮದ ನಡುಗಡ್ಡೆಗಳು ಹಾಗೂ ಪಕ್ಷಿಗಳ ಗೂಡುಗಳು ಕೊಚ್ಚಿ ಹೋಗುವುದನ್ನು ತಡೆಯಲು ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಂಡುಕೊಂಡಿದೆ. ಗೇಬಿಯನ್ ತಂತ್ರಜ್ಞಾನದ ಮೂಲಕ ತಡೆಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ಇದು ಪಕ್ಷಿಗಳಿಗೆ ಸುರಕ್ಷಿತ ವಾತಾವರಣವನ್ನು ಒದಗಿಸಿ, ಅವುಗಳ ಸಂತಾನೋತ್ಪತ್ತಿಗೆ ಸಹಕಾರಿಯಾಗಲಿದೆ. ಈ ಯೋಜನೆಯು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾದ ರಂಗನತಿಟ್ಟನ್ನು ಮುಂದಿನ ಪೀಳಿಗೆಗೂ ಉಳಿಸಲು ನೆರವಾಗಲಿದೆ.

ಮಂಡ್ಯ, ಸೆಪ್ಟೆಂಬರ್​ 10: ಕೆಆರ್‌ಎಸ್ ಜಲಾಶಯದಿಂದ ಅಧಿಕ ಪ್ರಮಾಣದಲ್ಲಿ ನೀರು ಬಿಟ್ಟಾಗ ಪ್ರವಾಹದ ಸೆಳೆತಕ್ಕೆ ವಿಶ್ವವಿಖ್ಯಾತ ರಂಗನತಿಟ್ಟು ಪಕ್ಷಿಧಾಮದ ನಡುಗಡ್ಡೆಗಳು ಕೊಚ್ಚಿಹೋಗುವುದನ್ನು ತಡೆಯಲು ಅರಣ್ಯ ಇಲಾಖೆಯು ವಿದೇಶಗಳಲ್ಲಿ ಯಶಸ್ವಿಯಾಗಿರುವ ‘ಗೇಬಿಯನ್ ತಂತ್ರಜ್ಞಾನ’ದ ಮೂಲಕ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದೆ. ಈ ಹಿಂದೆ ಹಾಕಲಾಗುತ್ತಿದ್ದ ಮರಳಿನ ಮೂಟೆಗಳು ನೀರಿನ ರಭಸಕ್ಕೆ ಕೊಚ್ಚಿಹೋಗುತ್ತಿದ್ದ ಹಿನ್ನೆಲೆ, ಪ್ರಸ್ತುತ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಿರುವ ಸಮಯದಲ್ಲೇ ಕಲ್ಲು ಮತ್ತು ತಂತಿ ಬೇಲಿಗಳನ್ನೊಳಗೊಂಡ ಗೇಬಿಯನ್ ರಚನೆಗಳನ್ನು ನಿರ್ಮಿಸಲಾಗುತ್ತಿದ್ದು, 170ಕ್ಕೂ ಹೆಚ್ಚು ಪ್ರಭೇದಗಳ ಪಕ್ಷಿಗಳು ಗೂಡು ಕಟ್ಟಿ ಮೊಟ್ಟೆಯಿಡುವ ತಾಣವಾದ ಇಲ್ಲಿನ ಒಟ್ಟು 25ಕ್ಕೂ ಹೆಚ್ಚು ನಡುಗಡ್ಡೆಗಳ ಪೈಕಿ ಈಗಾಗಲೇ 7 ನಡುಗಡ್ಡೆಗಳಿಗೆ ತಡೆಗೋಡೆ ಪೂರ್ಣಗೊಳಿಸಲಾಗಿದೆ. ಉಳಿದ ನಡುಗಡ್ಡೆಗಳಿಗೂ ಈ ರಕ್ಷಣೆ ಒದಗಿಸಲು ಪ್ರತಿ ನಡುಗಡ್ಡೆಗೆ 20 ರಿಂದ 25 ಲಕ್ಷದಂತೆ ಅಂದಾಜು ಒಂದೂವರೆ ಕೋಟಿ ರೂ ವೆಚ್ಚ ಮಾಡಲಾಗುತ್ತಿದ್ದು, ನಡುಗಡ್ಡೆ ಹಾಗೂ ಪಕ್ಷಿಗಳ ಸಂರಕ್ಷಣೆಗೆ ಕೈಗೊಂಡಿರುವ ಈ ವಿನೂತನ ಯೋಜನೆ ಪ್ರವಾಹದ ಸಮಯದಲ್ಲಿ ಎಷ್ಟು ಯಶಸ್ವಿಯಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us