ಹಿಂದೂ ಎಂಬುದು ಧರ್ಮವೇ ಅಲ್ಲ, RSS ವಿರುದ್ಧ ಮಾತನಾಡಲು ಭಯ ಬೇಡ: ನಿವೃತ್ತ ನ್ಯಾಯಮೂರ್ತಿ ವಿವಾದಾತ್ಮಕ ಮಾತು
ಆರ್ಎಸ್ಎಸ್ ಅನ್ನು ಟೀಕಿಸುವ ಭರದಲ್ಲಿ ಮುಂಬೈ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಜಿ. ಕೋಲ್ಸೆ ಪಾಟೀಲ್ ಹಿಂದೂ ಧರ್ಮ ಹಾಗೂ ಬ್ರಾಹ್ಮಣರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ. ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಆಯೋಜಿಸಿದ್ದ ಸೂಫಿ ಸಂತರ ಸಮಾವೇಶದಲ್ಲಿ ಕೋಲ್ಸೆ ಪಾಟೀಲ್ ಆಡಿರುವ ಮಾತುಗಳು ಇಲ್ಲಿವೆ.
ಬೀದರ್, ಡಿಸೆಂಬರ್ 8: ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಭಾನುವಾರ ನಡೆದಿದ್ದ ಸೂಫಿ–ಸಂತರ ಸಮಾವೇಶದಲ್ಲಿ ಮುಂಬೈ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಜಿ. ಕೋಲ್ಸೆ ಪಾಟೀಲ್ ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು ದೊಡ್ಡ ಸಂಚಲನ ಮೂಡಿಸಿವೆ. ಕರ್ನಾಟಕ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಆಯೋಜಿಸಿದ್ದ ಈ ಸಮಾವೇಶದಲ್ಲಿ ಅವರು ಹಿಂದೂ ಧರ್ಮ, ಬ್ರಾಹ್ಮಣರು ಹಾಗೂ ಆರ್ಎಸ್ಎಸ್ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿ ಟೀಕಿಸಿದ್ದಾರೆ. ಸಮಾರಂಭದಲ್ಲಿ ಮಾತನಾಡಿದ ಕೋಲ್ಸೆ ಪಾಟೀಲ್, ‘‘ಹಿಂದೂ ಎಂಬುದು ಧರ್ಮವೇ ಅಲ್ಲ. ಅದು ಪರ್ಷಿಯನ್ ಪದ; ಪರ್ಷಿಯನ್ ಭಾಷೆಯಲ್ಲಿ ‘ಹಿಂದೂ’ ಎಂದರೆ ಬೈಗುಳ ಎಂಬ ಅರ್ಥ ಇದೆ. ಬ್ರಾಹ್ಮಣರು ಅವರ ಬುದ್ಧಿಯಿಂದ ಜನರನ್ನು ಗುಲಾಮರನ್ನಾಗಿ ಮಾಡಿ ಹಿಂದೂ ಧರ್ಮ ಎಂದು ಸೃಷ್ಟಿ ಮಾಡಿದ್ದಾರೆ’’ ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲದೆ, ‘ದೇಶದಲ್ಲಿನ ಎಲ್ಲಾ ದಂಗೆಗಳಿಗೆ, ಸಿಖ್ಖರ ದಂಗೆಗೂ ಆರ್ಎಸ್ಎಸ್ ಕಾರಣ. ಅನೇಕರು ಆರ್ಎಸ್ಎಸ್ ವಿರುದ್ಧ ಮಾತನಾಡಲು ಭಯ ಪಡ್ತಾರೆ. ಬ್ರಾಹ್ಮಣರು ಮತ್ತು ಆರ್ಎಸ್ಎಸ್ ವಿರುದ್ಧ ಮಾತನಾಡಲು ಭಯಪಡಬೇಡಿ; ಅವರು ದೇಶದಲ್ಲಿ ಇರುವುದು ಕೇವಲ ಒಂದು ಪರ್ಸೆಂಟ್ ಮಾತ್ರ’ ಎಂದು ಕೋಲ್ಸೆ ಪಾಟೀಲ್ ಹೇಳಿದ್ದಾರೆ.