ಪ್ರಜ್ವಲ್ ಪ್ರಕರಣ: ಐವರ ಬೇಲ್ ಅರ್ಜಿ ತಿರಸ್ಕೃತವಾಗಿದೆ; ಯಾಕೆ ಬಂಧನ ಆಗಿಲ್ಲ?: ರೇವಣ್ಣ ವಕೀಲರ ಪ್ರಶ್ನೆ

Updated on: May 08, 2024 | 4:25 PM

Prajwal Revann sex scandal case: ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪೆನ್ ಡ್ರೈವ್ ಹಂಚಿಕೆ ಮಾಡಿದ ಆರೋಪದ ಮೇಲೆ ಐವರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಇವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಈ ವಿಚಾರದ ಬಗ್ಗೆ ಮಾತನಾಡಿದ ಎಚ್.ಡಿ. ರೇವಣ್ಣ ಪರ ವಕೀಲರು, ಕೋರ್ಟ್​ನಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡ ಐವರು ಆರೋಪಿಗಳನ್ನು ಎಸ್​ಐಟಿ ಇನ್ನೂ ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಹಾಸನದ ಹೆಣ್ಮಕ್ಕಳ ಮಾನ ಮರ್ಯಾದೆ ಹರಾಜು ಹಾಕಿದ ಈ ವ್ಯಕ್ತಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಹಾಸನ, ಮೇ 8: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳ ಪ್ರಕರಣದಲ್ಲಿ (Prajwal Revanna sex scandal) ಎಚ್.ಡಿ. ರೇವಣ್ಣ ಅವರನ್ನು ಎಸ್​ಐಟಿ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ರೇವಣ್ಣ ಪರ ವಕೀಲರು, ಹಾಸನದ ಹುಡುಗಿಯರ ಮಾನ ಹರಾಜು ಮಾಡಿದವರ ಮೇಲೆ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಕೇಳಿದ್ದಾರೆ. ಪೆನ್ ಡ್ರೈವ್ ಮತ್ತು ವಿಡಿಯೋ ಹಂಚಿಕೆ ಆರೋಪದಲ್ಲಿ ಕಾರ್ತಿಕ್, ಪುಟ್ಟರಾಜು ಅಲಿಯಾಸ್ ಪುಟ್ಟಿ, ಚೇತನ್, ನವೀನ್ ಗೌಡ ಮತ್ತು ಶರತ್ ಮೇಲೆ ಎಫ್​ಐಆರ್ ಆಗಿ 15 ದಿನಗಳಾಗಿವೆ. ರಾಜ್ಯ ಸರ್ಕಾರವಾಗಲೀ, ಎಸ್​ಐಟಿ ಆಗಲೀ ಈವರೆಗೂ ಈ ಐವರ ಮೇಲೆ ಕ್ರಮವನ್ನೇ ತೆಗೆದುಕೊಂಡಿಲ್ಲ ಎಂದು ಎಚ್.ಡಿ. ರೇವಣ್ಣ ಪರ ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುಟ್ಟರಾಜು ಅಲಿಯಾಸ್ ಪುಟ್ಟಿ, ಕಾರ್ತಿಕ್, ಚೇತನ್, ನವೀನ್ ಗೌಡ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹಾಸನ ನ್ಯಾಯಾಲಯ ರಿಜೆಕ್ಟ್ ಮಾಡಿದೆ. ಇದು ಬೇಲ್ ಕೊಡಲು ಅರ್ಹ ಅಲ್ಲದ ಕೇಸ್ ಎಂಬುದು ನ್ಯಾಯಾಲಯಕ್ಕೆ ಮನವರಿಕೆ ಆಗಿದೆ. ಆದರೆ ಸರ್ಕಾರಕ್ಕೆ ಯಾಕೆ ಇದು ಅರ್ಥ ಆಗಿಲ್ಲ. 33/24 ಸೆಕ್ಷನ್ ಅಡಿಯಲ್ಲಿ ಎಫ್​ಐಆರ್ ಆಗಿದ್ದರೂ ಯಾಕೆ ಇವರನ್ನು ಬಂಧಿಸಿಲ್ಲ ಎಂದು ವಕೀಲರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣ; ಎಸ್ಐಟಿ ತನಿಖೆ ಒನ್ ವೇನಲ್ಲಿ ಸಾಗುತ್ತಿರುವ ಕಾರಣ ಸಿಬಿಐಗೆ ವಹಿಸಿಕೊಡಬೇಕು: ಜಿಟಿ ದೇವೇಗೌಡ

ಎಚ್.ಡಿ. ರೇವಣ್ಣ ವಿರುದ್ಧ ಏಳು ವರ್ಷ ಶಿಕ್ಷೆ ಇರುವ ಕೇಸ್ ಹಾಕಿ ಬಂಧನ ಮಾಡಿದ್ದಾರೆ. ಈ ಐವರು ವ್ಯಕ್ತಿಗಳು ಹಾಸನದ ಹೆಣ್ಮಕ್ಕಳ ಮಾನ ಮರ್ಯಾದೆ ಹರಾಜು ಮಾಡಿದ್ದಾರೆ. ಆದರೂ ಅವರ ಮೇಲೆ ಏನೂ ಕ್ರಮ ತೆಗೆದುಕೊಂಡಿಲ್ಲ. ನಿಮ್ಮಲ್ಲಿ ಪಾರದರ್ಶಕತೆ ಇದ್ದರೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರಜ್ವಲ್ ರೇವಣ್ಣ ವಿವಿಧ ಮಹಿಳೆಯರ ಜೊತೆ ಆಪ್ತವಾಗಿರುವ ಸಾವಿರಾರು ವಿಡಿಯೊಗಳಿರುವ ಪೆನ್ ಡ್ರೈವ್ ಅನ್ನು ಹಂಚಿಕೆ ಮಾಡಿದ ಆರೋಪ ಈ ಐವರ ಮೇಲಿದೆ. ಕಾರ್ತಿಕ್ ಎಂಬಾತ ಎಚ್.ಡಿ. ರೇವಣ್ಣ ಅವರ ಕಾರ್ ಡ್ರೈವರ್ ಆಗಿದ್ದವರು. ಶರತ್ ಅವರು ಹಾಸನ ಬಿಜೆಪಿಯ ಸ್ಥಳೀಯ ನಾಯಕ.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More