AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ವಿಡಿಯೋ ನೋಡಿದ್ರೆ ಇಂದಿಗೂ ಮೈ ರೋಮಾಂಚನವಾಗುತ್ತೆ!: ಮತ್ತೆ ವೈರಲ್​​ ಆಯಿತು ಅಂದು ಸಿದ್ದರಾಮಯ್ಯ ಗುಡುಗಿದ ದೃಶ್ಯ!

ಆ ವಿಡಿಯೋ ನೋಡಿದ್ರೆ ಇಂದಿಗೂ ಮೈ ರೋಮಾಂಚನವಾಗುತ್ತೆ!: ಮತ್ತೆ ವೈರಲ್​​ ಆಯಿತು ಅಂದು ಸಿದ್ದರಾಮಯ್ಯ ಗುಡುಗಿದ ದೃಶ್ಯ!

ಅಕ್ಷಯ್​ ಪಲ್ಲಮಜಲು​​
|

Updated on:May 28, 2026 | 10:06 PM

Share

ಸಿದ್ದರಾಮಯ್ಯ ಅವರ ರಾಜೀನಾಮೆ ಬೆನ್ನಲ್ಲೇ, ರೆಡ್ಡಿ ಸಹೋದರರ ವಿರುದ್ಧದ ಅವರ ಐತಿಹಾಸಿಕ ಬಳ್ಳಾರಿ ಹೋರಾಟದ ವಿಡಿಯೋ ವೈರಲ್ ಆಗಿದೆ. 2010ರಲ್ಲಿ ಸದನದಲ್ಲಿ ಗುಡುಗಿದ ನಂತರ, 320 ಕಿ.ಮೀ ಪಾದಯಾತ್ರೆ ಹಮ್ಮಿಕೊಂಡ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದ ಪತನಕ್ಕೆ ಕಾರಣರಾದರು. ಇದು 2013ರಲ್ಲಿ ಅವರು ಮುಖ್ಯಮಂತ್ರಿಯಾಗಲು ಪ್ರಮುಖ ಕಾರಣವಾಗಿತ್ತು. ಅವರ ಧೈರ್ಯ, ಮಾಸ್ ನಾಯಕತ್ವವನ್ನು ಅಭಿಮಾನಿಗಳು ಮತ್ತೆ ನೆನಪಿಸಿಕೊಳ್ಳುತ್ತಿದ್ದಾರೆ.

ಬೆಂಗಳೂರು, ಮೇ.28: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ, ಕರ್ನಾಟಕ ರಾಜಕೀಯದ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಅವರ ಅತ್ಯಂತ ರೋಚಕ ರಾಜಕೀಯ ಹೋರಾಟದ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಭಾರಿ ವೈರಲ್ ಆಗುತ್ತಿದೆ. ಅಂದು ಬಳ್ಳಾರಿಯ ಗಣಿ ಧಣಿಗಳು ಹಾಗೂ ರೆಡ್ಡಿ ಸಹೋದರರ (Reddy Brothers) ಸಾಮ್ರಾಜ್ಯದ ವಿರುದ್ಧ ಸಿದ್ದರಾಮಯ್ಯ ಅವರು ವಿಧಾನಸಭೆಯ ಒಳಗೆ ಮತ್ತು ಹೊರಗೆ ಸಿಂಹದಂತೆ ಗುಡುಗಿದ್ದ ಆ ಐತಿಹಾಸಿಕ ದೃಶ್ಯಗಳು ಇಂದಿಗೂ ಕೋಟ್ಯಂತರ ಕನ್ನಡಿಗರ ಮೈ ರೋಮಾಂಚನಗೊಳ್ಳುವಂತೆ ಮಾಡುತ್ತಿವೆ. ಅದು 2010ರ ಸಮಯ, ಬಳ್ಳಾರಿಯಲ್ಲಿ ರೆಡ್ಡಿ ಸಹೋದರರ ವಿರುದ್ಧ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಏಕಾಂಗಿಯಾಗಿ ಸಿಡಿದೆದ್ದಿದ್ದರು. “ಧೈರ್ಯವಿದ್ದರೆ ಬಳ್ಳಾರಿಗೆ ಕಾಲಿಟ್ಟು ತೋರಿಸಿ” ಎಂದು ರೆಡ್ಡಿ ಬ್ರದರ್ಸ್ ಹಾಕಿದ್ದ ಸವಾಲನ್ನು ಸ್ವೀಕರಿಸಿದ್ದ ಸಿದ್ದರಾಮಯ್ಯ, ಸದನದಲ್ಲಿ ಮೇಜು ಕುಟ್ಟಿ ಗರ್ಜಿಸಿದ್ದರು. ಆ ವಿಡಿಯೋದಲ್ಲಿ ಸಿದ್ದರಾಮಯ್ಯ ಅವರ ಆವೇಶ, ಕಣ್ಣುಗಳಲ್ಲಿನ ಧೀರತೆ ಮತ್ತು ಗಡಸು ಧ್ವನಿಯ ಹೆದರಿಕೆಯಿಲ್ಲದ ಮಾತುಗಳು ಇಂದಿನ ಯುವ ಪೀಳಿಗೆಗೂ ನೆಚ್ಚಿನ ‘ಮಾಸ್ ಡೈಲಾಗ್’ನಂತೆ ಕಾಣಿಸುತ್ತಿವೆ.

ಅಷ್ಟಕ್ಕೇ ನಿಲ್ಲದ ಸಿದ್ದರಾಮಯ್ಯ, ಬೆಂಗಳೂರಿನಿಂದ ಬಳ್ಳಾರಿಯವರೆಗೆ ಬರೋಬ್ಬರಿ 320 ಕಿಲೋಮೀಟರ್‌ಗಳ ಐತಿಹಾಸಿಕ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದರು. ಈ ಪಾದಯಾತ್ರೆಯು ಅಂದಿನ ಬಿಜೆಪಿ ಸರ್ಕಾರದ ಪತನಕ್ಕೆ ಭದ್ರ ಬುನಾದಿ ಹಾಕಿದ್ದಲ್ಲದೆ, 2013 ರಲ್ಲಿ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಲು ಅತ್ಯಂತ ಪ್ರಮುಖ ಕಾರಣವಾಗಿತ್ತು. ಸದ್ಯ ಸಿದ್ದರಾಮಯ್ಯ ಅವರು ತಮ್ಮ 50 ವರ್ಷಗಳ ಸುದೀರ್ಘ ರಾಜಕೀಯ ಪಯಣದಲ್ಲಿ ಸಿಎಂ ಸ್ಥಾನಕ್ಕೆ ವಿದಾಯ ಹೇಳಿರುವ ಈ ಭಾವುಕ ಸಂದರ್ಭದಲ್ಲಿ, ನೆಟ್ಟಿಗರು ಹಾಗೂ ಅವರ ಅಭಿಮಾನಿಗಳು ಆ ಹಳೇ ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಎಕ್ಸ್ (ಟ್ವಿಟರ್) ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. “ಕುರ್ಚಿ ಇರಲಿ, ಬಿಡಲಿ.. ಸಿದ್ದರಾಮಯ್ಯ ಅವರ ಈ ಗತ್ತನ್ನು ಮತ್ತು ಧೈರ್ಯವನ್ನು ಮರೆಯಲು ಸಾಧ್ಯವೇ ಇಲ್ಲ. ಇವರೊಬ್ಬರೇ ನಿಜವಾದ ಮಾಸ್ ಲೀಡರ್” ಎಂದು ಅಭಿಮಾನಿಗಳು ಕಮೆಂಟ್‌ಗಳ ಮೂಲಕ ಭಾವುಕರಾಗಿ ನೆನಪಿಸಿಕೊಳ್ಳುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published on: May 28, 2026 09:46 PM

Follow Us