ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್ ಎಂದ ದರ್ಶನ್; ನಾನೇನು ಮಾಡೋಕೆ ಆಗಲ್ಲ ಎಂದ ಡಿಜಿಪಿ
ಮುಖ್ಯಾಂಶಗಳು
- ಜೈಲಿನಲ್ಲಿ ನಟ ದರ್ಶನ್ಗೆ ಸೊಳ್ಳೆ ಕಾಟದ ಕಿರಿಕಿರಿ
- ಡಿಜಿಪಿ ಅಲೋಕ್ ಕುಮಾರ್ ಬಳಿ ಸೌಲಭ್ಯಕ್ಕಾಗಿ ದರ್ಶನ್ ಮನವಿ
- ಸೊಳ್ಳೆ ವಿಚಾರದಲ್ಲಿ ನಾನೇನು ಮಾಡಲಾಗಲ್ಲ ಎಂದ ಜೈಲು ಡಿಜಿಪಿ
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ಗೆ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಜೈಲಿಗೆ ಭೇಟಿ ನೀಡಿದ್ದ ಡಿಜಿಪಿ ಅಲೋಕ್ ಕುಮಾರ್ ಅವರಲ್ಲಿ ದರ್ಶನ್ ಸೊಳ್ಳೆ ಕಾಟಕ್ಕೆ ಪರಿಹಾರ ಕೋರಿದ್ದಾರೆ. ಆದರೆ, ಜೈಲು ಮ್ಯಾನ್ಯುವಲ್ ಹೊರತಾಗಿ ಯಾವುದೇ ಹೆಚ್ಚುವರಿ ಸೌಲಭ್ಯ ನೀಡಲು ಸಾಧ್ಯವಿಲ್ಲ ಎಂದು ಅಲೋಕ್ ಕುಮಾರ್ ಸ್ಪಷ್ಟವಾಗಿ ಉತ್ತರಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿರುವ ನಟ ದರ್ಶನ್ಗೆ ಸೊಳ್ಳೆಗಳ ಕಾಟ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಜೈಲಿನಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಅದರಿಂದ ಮುಕ್ತಿ ನೀಡುವಂತೆ ದರ್ಶನ್ ಜೈಲು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ರಾಜ್ಯ ಜೈಲುಗಳ ಮಹಾನಿರ್ದೇಶಕರಾದ (ಡಿಜಿಪಿ) ಅಲೋಕ್ ಕುಮಾರ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಪರಿಶೀಲನೆಗಾಗಿ ಭೇಟಿ ನೀಡಿದ್ದರು. ಈ ವೇಳೆ ನಟ ದರ್ಶನ್, ‘ಜೈಲಿನಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದೆ. ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ, ಇದಕ್ಕೆ ಏನಾದರೂ ಪರಿಹಾರ ಮಾಡಿ’ ಎಂದು ಅವರಿಗೆ ಮನವಿ ಮಾಡಿದ್ದಾರೆ.
ಆದರೆ ದರ್ಶನ್ ಅವರ ಈ ಮನವಿಗೆ ಡಿಜಿಪಿ ಅಲೋಕ್ ಕುಮಾರ್ ಖಡಕ್ ಆಗಿಯೇ ಪ್ರತಿಕ್ರಿಯಿಸಿದ್ದಾರೆ. ‘ಸೊಳ್ಳೆಗಳ ವಿಷಯದಲ್ಲಿ ನಾನೇನು ಮಾಡಲು ಸಾಧ್ಯವಿಲ್ಲ. ಜೈಲಿನ ಮ್ಯಾನ್ಯುವಲ್ ಪ್ರಕಾರ ಬಂದಿಗಳಿಗೆ ಏನೆಲ್ಲಾ ಸೌಲಭ್ಯ ಒದಗಿಸಬೇಕೋ ಅದನ್ನು ಮಾತ್ರ ಕೊಡಲು ಸಾಧ್ಯ. ಮ್ಯಾನ್ಯುವಲ್ನಲ್ಲಿ ಇಲ್ಲದಿರುವುದನ್ನು ನೀಡಲು ಬರುವುದಿಲ್ಲ. ಜೈಲು ನಿಯಮಾವಳಿ ಪ್ರಕಾರ ಏನಾದರೂ ಸಮಸ್ಯೆಗಳಿದ್ದರೆ ಹೇಳಿ, ಸೌಲಭ್ಯ ಒದಗಿಸುತ್ತೇವೆ. ಅದನ್ನು ಹೊರತುಪಡಿಸಿ ಸೊಳ್ಳೆಗಳ ಬಗ್ಗೆ ನಾವೇನು ಮಾಡಲು ಆಗುವುದಿಲ್ಲ’ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

