ಎಲ್ಲಾ ದೇವರನ್ನು ಸ್ತುತಿಸೋ ಮೊದಲು ಆದಿ ಪೂಜಿತ ವಿನಾಯಕನ ಪೂಜೆ ತುಂಬಾನೇ ಮುಖ್ಯ. ನಾಡಿನಲ್ಲಿರುವ ಸಿದ್ಧಿ ವಿನಾಯಕ ದೇವಾಲಯಗಳಲ್ಲಿ ಉಡುಪಿಯಲ್ಲಿರುವ ಶೀಂಭ್ರ ಸಿದ್ದಿವಿನಾಯಕ ದೇವಾಲಯವೂ ಒಂದು. ಈ ಕ್ಷೇತ್ರದ ಇತಿಹಾಸ ಸಾಮಾನ್ಯವೇನಲ್ಲ. 1,500 ವರ್ಷಗಳ ಇತಿಹಾಸವಿರುವ ಕ್ಷೇತ್ರವಿದು. ಎರಡು ಗಣಪತಿ ವಿಗ್ರಹಗಳು ಸ್ವರ್ಣಾ ನದಿಯಲ್ಲಿ ತೇಲಿ ಬಂದಾಗ ಪೆರಂಪಳ್ಳಿ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಶಿವನ ಜೊತೆ ಒಂದೇ ಪಾಣಿಪೀಠದಲ್ಲಿ ಎರಡು ಗಣಪತಿಯನ್ನು ಆರಾಧನೆ ಮಾಡಿದ್ರು. ಕಾಲಕ್ರಮದಲ್ಲಿ ಒಂದು ವಿಗ್ರಹವನ್ನು ಈಗಿನ ಶೀಂಭ್ರ ಸನ್ನಿಧಿಯಲ್ಲಿ ಪ್ರತಿಷ್ಠಾಪಿಸಿದರಂತೆ. ಅದಕ್ಕೆ ಪ್ರತಿಯಾಗಿ ಇಂದಿಗೂ ಪೆರಂಪಳ್ಳಿ ಮಹಾಲಿಂಗೇಶ್ವರ ಸನ್ನಿಧಿಯ ಗಣಪತಿ ಗುಡಿಯಲ್ಲಿ ಎರಡು ಪಾಣಿಪೀಠ ಇರುವುದು ಗೋಚರಕ್ಕೆ ಬಂದಿದೆ. ಶೀಂಭ್ರ ಸಿದ್ಧಿ ವಿನಾಯಕನ ಗುಡಿಯ ಪಕ್ಕದಲ್ಲಿರುವ ಕೃಷ್ಣಾಂಗರಕ ಸ್ನಾನಘಟ್ಟ ಪ್ರಾಚೀನ ಇತಿಹಾಸ ಇರುವ ಸ್ಥಳ. ಇದಕ್ಕೆ ಪೂರಕವಾಗಿ ಅಷ್ಠಮಠದ ವಾದೀರಾಜ ಗುರುಸಾರ್ವಭೌಮರು ಬರೆದ ತೀರ್ಥ ಪ್ರಬಂಧದಲ್ಲಿ ಈ ಕ್ಷೇತ್ರದ ಬಗ್ಗೆ ಉಲ್ಲೇಖಿಸಿದ್ದಾರೆ.