ಇವರು ಶಾಲೆ ಮಕ್ಕಳಾ ಅಲ್ಲಾ ಸರಕುಗಳಾ? ಗೂಡ್ಸ್ ರೀತಿ ವಿದ್ಯಾರ್ಥಿಗಳ ಟಿಪ್ಪರ್ ಲಾರೀಲಿ ತುಂಬಿಕೊಂಡು ಹೋದ ಶಿಕ್ಷಕರು!
ದಕ್ಷಿಣ ಕನ್ನಡ ಜಿಲ್ಲೆಯ ಬಳೆಂಜ ಎಂಬಲ್ಲಿ ಶಾಲಾ ಮಕ್ಕಳನ್ನು ಜೇನು ಕೃಷಿ ಅಧ್ಯಯನಕ್ಕಾಗಿ ಟಿಪ್ಪರ್ ಹಾಗೂ ಪಿಕ್ಅಪ್ ವಾಹನಗಳಲ್ಲಿ ಸರಕು ಸಾಗಾಟ ಮಾಡಿದಂತೆ ಕರೆದೊಯ್ದ ಘಟನೆ ನನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆ ವಿಚಾರದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಆಗಬಾರದು ಎಂಬುದು ಪೋಷಕರ ಆಗ್ರಹವಾಗಿದೆ.
ಮಂಗಳೂರು, ಫೆಬ್ರವರಿ 12: ಶಾಲಾ ಮಕ್ಕಳನ್ನು ಟಿಪ್ಪರ್ ಹಾಗೂ ಪಿಕಪ್ ವಾಹನಗಳಲ್ಲಿ ಸಾಗಾಟ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಳೆಂಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಜೇನು ಕೃಷಿ ಅಧ್ಯಯನಕ್ಕಾಗಿ ವಿದ್ಯಾರ್ಥಿಗಳನ್ನು ಸರಕುಗಳಂತೆ ವಾಹನಗಳಲ್ಲಿ ಕರೆದೊಯ್ಯಲಾಗಿದೆ. ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆದೊಯ್ಯಬೇಕಾದ ಜವಾಬ್ದಾರಿ ಹೊಂದಿರುವ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಕಿರಣ್ ಅವರೇ ಈ ವ್ಯವಸ್ಥೆ ಮಾಡಿಸಿದ್ದಾಗಿ ತಿಳಿದುಬಂದಿದೆ. ಟಿಪ್ಪರ್ ಹಾಗೂ ಪಿಕಪ್ ವಾಹನಗಳಲ್ಲಿ ಮಕ್ಕಳನ್ನು ಕೂರಿಸಿಕೊಂಡು ಸಾಗಾಟ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕಾನೂನು ಪ್ರಕಾರ, ಕೂಲಿ ಕಾರ್ಮಿಕರನ್ನೂ ಕೂಡ ಈ ರೀತಿಯ ವಾಹನಗಳಲ್ಲಿ ಕರೆದೊಯ್ಯುವಂತಿಲ್ಲ. ಹೀಗಿದ್ದೂ ವಿದ್ಯಾರ್ಥಿಗಳನ್ನೇ ಈ ರೀತಿಯಲ್ಲಿ ಕರೆದೊಯ್ದಿರುವುದು ಗಂಭೀರ ನಿರ್ಲಕ್ಷ್ಯವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಶತಮಾನೋತ್ಸವ ಸಂಭ್ರಮಾಚರಣೆ ನಡೆಸಿದ್ದ ಶಾಲೆಯಲ್ಲಿ ಇಂತಹ ಘಟನೆ ನಡೆದಿರುವುದು ಪ್ರಶ್ನೆಗಳನ್ನು ಹುಟ್ಟಿಸಿದೆ.