ಅನಾರೋಗ್ಯದಲ್ಲಿ ಕೈ ಹಿಡಿದ RCBಗೆ ಕಪ್ ಗೆಲ್ಲಿಸಿ ಕೊಡುವುದೇ ಗುರಿ..!
IPL 2025 RCB vs PBKS: ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ಗೇರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 101 ರನ್ಗಳಿಸಿದರೆ, ಆರ್ಸಿಬಿ 10 ಓವರ್ಗಳಲ್ಲಿ ಈ ಗುರಿಯನ್ನು ಚೇಸ್ ಮಾಡಿದೆ.
ಮುಲ್ಲನ್ಪುರ್ನಲ್ಲಿ ನಡೆದ ಐಪಿಎಲ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿಗಳಲ್ಲಿ ಸುಯಶ್ ಶರ್ಮಾ ಕೂಡ ಒಬ್ಬರು. ಏಕೆಂದರೆ ಈ ಪಂದ್ಯದಲ್ಲಿ ಅತ್ಯುತ್ತಮ ಸ್ಪಿನ್ ದಾಳಿ ಸಂಘಟಿಸಿದ ಸುಯಶ್ 3 ಓವರ್ಗಳಲ್ಲಿ 17 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು.
ಈ ಮೂರು ವಿಕೆಟ್ಗಳು ಯಾವುದೆಂದರೆ… ಡೇಂಜರಸ್ ಮಾರ್ಕಸ್ ಸ್ಟೊಯಿನಿಸ್, ಹೊಡಿಬಡಿ ದಾಂಡಿಗ ಶಶಾಂಕ್ ಸಿಂಗ್ ಹಾಗೂ ಮುಶೀರ್ ಖಾನ್ ಅವರದ್ದು. ಹೀಗೆ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸುವ ಮೂಲಕ ಸುಯಶ್ ಪಂಜಾಬ್ ಕಿಂಗ್ಸ್ 101 ರನ್ಗಳಿಗೆ ಆಲೌಟ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು.
ವಿಶೇಷ ಎಂದರೆ ಈ ಬಾರಿಯ ಐಪಿಎಲ್ಗೆ ಆಯ್ಕೆಯಾಗಿದ್ದ ಸುಯಶ್ ಶರ್ಮಾ ಟೂರ್ನಿಗೆ ಅಲಭ್ಯರಾಗುವ ಸ್ಥಿತಿಯಲ್ಲಿದ್ದರು. ಏಕೆಂದರೆ ಐಪಿಎಲ್ ಆರಂಭಕ್ಕೂ ಕೆಲ ತಿಂಗಳುಗಳ ಮುಂಚೆ ಸುಯಶ್ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರು ಈ ಬಾರಿಯ ಐಪಿಎಲ್ನಿಂದ ಹೊರಗುಳಿಯಲು ನಿರ್ಧರಿಸಿದ್ದರು.
ಈ ವಿಷಯ ತಿಳಿಯುತ್ತಿದ್ದಂತೆ ಆರ್ಸಿಬಿ ಫ್ರಾಂಚೈಸಿ ಸುಯಶ್ ಶರ್ಮಾ ಅವರ ನೆರವಿಗೆ ನಿಂತರು. ಅಲ್ಲದೆ ಉತ್ತಮ ಚಿಕಿತ್ಸೆಗಾಗಿ ಅವರನ್ನು ಲಂಡನ್ಗೆ ಕಳುಹಿಸಿದರು. ಇದರ ಖರ್ಚು ವೆಚ್ಚಗಳನ್ನು ಆರ್ಸಿಬಿ ಫ್ರಾಂಚೈಸಿಯೇ ನೋಡಿಕೊಂಡಿತು.
ಅಷ್ಟೇ ಅಲ್ಲದೆ ಆರ್ಸಿಬಿ ಫಿಸಿಯೋ ಜೇಮ್ಸ್ ಪೈಪಿ ಲಂಡನ್ನಲ್ಲಿ ಸುಯಶ್ ಶರ್ಮಾ ಅವರ ಆರೋಗ್ಯದ ಬಗ್ಗೆ ಕಾಳಜಿವಹಿಸಿದರು. ಐಪಿಎಲ್ ಆರಂಭಕ್ಕೂ ಮುನ್ನ ಫಿಟ್ ಆಗುವಂತೆ ನೋಡಿಕೊಂಡರು. ಹೀಗೆ ಯುವ ಆಟಗಾರನಿಗೆ ಆರ್ಸಿಬಿ ಫ್ರಾಂಚೈಸಿ ಎಲ್ಲಾ ರೀತಿಯ ನೆರವು ನೀಡಿತು.
ಇದೀಗ ಅದೇ ಆರ್ಸಿಬಿ ಫ್ರಾಂಚೈಸಿಗೆ ಸುಯಶ್ ಶರ್ಮಾ ಕಪ್ ಗೆಲ್ಲಿಸಿಕೊಡಲು ಪಣತೊಟ್ಟಿದ್ದಾರೆ. ಅನಾರೋಗ್ಯದಲ್ಲಿ ಕೈ ಹಿಡಿದ RCBಗೆ ಕಪ್ ಗೆಲ್ಲಿಸಿಕೊಡುವುದೇ ನನ್ನ ಗುರಿ ಎಂದು ಅವರು ಬಹಿರಂಗವಾಗಿಯೇ ಹೇಳಿದ್ದಾರೆ. ಈ ಹೇಳಿಕೆಯನ್ನು ಸಮರ್ಥಿಸುವಂತೆ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸುಯಶ್ ಭರ್ಜರಿ ಪ್ರದರ್ಶನ ನೀಡಿದ್ದಾರೆ.
ಇನ್ನು ಜೂನ್ 3 ರಂದು ಕೂಡ ಸುಯಶ್ ಕಡೆಯಿಂದ ಇಂತಹದ್ದೇ ಪ್ರದರ್ಶನ ಮೂಡಿಬಂದರೆ, ಆರ್ಸಿಬಿ ಕಪ್ ಗೆಲ್ಲುವುದರಲ್ಲಿ ಡೌಟೇ ಇಲ್ಲ ಎನ್ನಬಹುದು.
