ಮಂತ್ರಾಲಯದಲ್ಲಿ ಇಂದು ರಾಯರ 354ನೇ ಆರಾಧನಾ ಮಹೋತ್ಸವ, ಮಠದ ಆವರಣದಲ್ಲಿ ಸಹಸ್ರಾರು ಭಕ್ತರು

ಅರುಣ್​ ಕುಮಾರ್​ ಬೆಳ್ಳಿ

Updated on: Aug 11, 2025 | 1:27 PM

ಗುರು ರಾಘವೇಂದ್ರ ಸ್ವಾಮಿಗಳ 354 ನೇ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ರಾಯರ ದರ್ಶನ ಮಾಡಿದರೆ ವಿಶೇಷ ಅನುಗ್ರಹ ಪ್ರಾಪ್ತಿಯಾಗುತ್ತದೆ ಅನ್ನೋದು ಭಕ್ತರ ನಂಬಿಕೆಯಾಗಿದೆ. ಧಾರ್ಮಿಕ ಆಚರಣೆಯ ಅಂಗವಾಗಿ ಇಂದು ಸ್ವರ್ಣ ರಥೋತ್ಸವ ಕೂಡ ನಡೆಯಲಿದೆ. ಮಠಕ್ಕೆ ಆಗಮಿಸಿರುವ ಭಕ್ತರಲ್ಲಿ ಕೆಲವರು ಉರುಳು ಸೇವೆ ಮಾಡುವ ಹರಕೆ ಹೊತ್ತಿದ್ದು ಅದನ್ನು ಪೂರೈಸುತ್ತಿದ್ದಾರೆ.

ರಾಯಚೂರು, ಆಗಸ್ಟ್ 11: ನಗರದಿಂದ ಸುಮಾರು 40 ಕಿಮೀ ದೂರ ಮಂತ್ರಾಲಯದಲ್ಲಿರುವ ರಾಯರ ಮಠದಲ್ಲಿ ಇವತ್ತು ಗುರು ರಾಘವೇಂದ್ರ ಸ್ವಾಮಿಗಳ 354 ಆರಾಧನಾ ಮಹೋತ್ಸವ ನಡೆಯುತ್ತಿದ್ದು ದೇಶದ ನಾನಾ ಭಾಗಗಳಿಂದ ಆಗಮಿಸಿರುವ ಸಹಸ್ರಾರು ಭಕ್ತಾದಿಗಳು ಬೆಳಗ್ಗೆಯಿಂದಲೇ ತುಂಗಭಾದ್ರಾ ನದಿಯಲ್ಲಿ (River Tungabhadra) ಪುಣ್ಯಸ್ನಾನ ಮಾಡಿ ಮಠದಲ್ಲಿ ಆಯೋಜಿಸಲಾಗುತ್ತಿರುವ ಹಲವಾರು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಮಠದ ಪೀಠಾಧಿಪತಿಗಳಾಗಿರುವ ಸುಭುದೇಂದ್ರ ತೀರ್ಥಸ್ವಾಮಿಯವರು ಮೂಲ ವೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ ಮಾಡುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಇವತ್ತಿನ ವಿಶೇಷ ಸಂದರ್ಭಕ್ಕಾಗಿ ಸ್ವರ್ಣಕವಚ ರಾಯರ ವೃಂದಾವನಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ ಎಂದು ನಮ್ಮ ರಾಯಚೂರು ವರದಿಗಾರ ಹೇಳುತ್ತಾರೆ. ಮಹಿಳಾ ಭಕ್ತರು ಸಹ ಸಾಕಷ್ಟು ಸಂಖ್ಯೆಯಲ್ಲಿ ನೆರೆದಿರುವುದನ್ನು ಕಾಣಬಹುದು.

ಇದನ್ನೂ ಓದಿ:    ಗುರುಪೂರ್ಣಿಮೆ: ಗುರು ರಾಯರಿಂದ ಸಾಕಷ್ಟು ಪ್ರಭಾವಿತರಾಗಿದ್ದ ರಾಜ್​ಕುಮಾರ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.