ನಾಗರಿಕರ ಹೆಸರಿನಲ್ಲಿ ರಾಜ್ಯಾದ್ಯಂತ ತಿರಂಗಾ ಯಾತ್ರೆ: ಆರ್ ಅಶೋಕ್
ಕೇಂದ್ರ ಸರ್ಕಾರದ ಆದೇಶದಂತೆ, ರಾಷ್ಟ್ರೀಯ ಏಕತೆಯ ಸಂಕೇತವಾಗಿ ಕರ್ನಾಟಕದಲ್ಲಿ ತಿರಂಗಾ ಯಾತ್ರೆ ಆಯೋಜಿಸಲಾಗಿದೆ. ಮೇ 15 ರಿಂದ 23 ರವರೆಗೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಈ ಯಾತ್ರೆ ನಡೆಯಲಿದೆ. ಬೆಂಗಳೂರಿನಲ್ಲಿ ಮೇ 15 ರಂದು ಮಲ್ಲೇಶ್ವರದಿಂದ 18 ನೇ ಕ್ರಾಸ್ ವರೆಗೆ ಯಾತ್ರೆ ನಡೆಯಲಿದೆ. ಯಾವುದೇ ರಾಜಕೀಯ ಪಕ್ಷದ ಧ್ವಜಗಳ ಬಳಕೆಗೆ ಅವಕಾಶವಿಲ್ಲ ಎಂದು ತಿಳಿಸಲಾಗಿದೆ. ಸೇನಾಪಡೆಗಳಿಗೆ ಬೆಂಬಲ ವ್ಯಕ್ತಪಡಿಸುವುದು ಈ ಯಾತ್ರೆಯ ಮುಖ್ಯ ಉದ್ದೇಶ.
ಬೆಂಗಳೂರು, ಮೇ 13: ರಾಷ್ಟ್ರ ರಕ್ಷಣೆಗಾಗಿ ನಾಗರಿಕರ ಹೆಸರಿನಲ್ಲಿ ದೇಶಾದ್ಯಂತ ಯಾವುದೇ ಪಕ್ಷಭೇದವಿಲ್ಲದೆ ತಿರಂಗಾ ಯಾತ್ರೆ ಮಾಡಬೇಕೆಂಬುದು ಕೇಂದ್ರ ಸರ್ಕಾರ ಹೇಳಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು. ಸೇನಾಪಡೆಗಳ ಜೊತೆ ನಿಂತು ಬಲ ತುಂಬುವುದು ತಿರಂಗಾ ಯಾತ್ರೆಯ ಉದ್ದೇಶವಾಗಿದೆ. ಹೀಗಾಗಿ, ರಾಜ್ಯದಲ್ಲಿ ಕೂಡ ದೊಡ್ಡಮಟ್ಟದಲ್ಲಿ ತಿರಂಗಾ ಯಾತ್ರೆ ಮಾಡುತ್ತಿದ್ದೇವೆ. ಮೇ 15ರಂದು ಬೆಂಗಳೂರಿನಲ್ಲಿ ತಿರಂಗಾ ಯಾತ್ರೆ ಮಾಡುತ್ತೇವೆ. ಮಲ್ಲೇಶ್ವರಂನ ಶಿರೂರು ಪಾರ್ಕ್ನಿಂದ 18ನೇ ಕ್ರಾಸ್ವರೆಗೆ ತಿರಂಗಾ ಯಾತ್ರೆ ಮಾಡುತ್ತೇವೆ. ಮೇ 16, 17ರಂದು ಜಿಲ್ಲಾ ಕೇಂದ್ರಗಳಲ್ಲಿ ತಿರಂಗಾ ಯಾತ್ರೆ ನಡೆಯಲಿದೆ. ಮೇ 18ರಿಂದ 23ರವರೆಗೆ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ. ತಿರಂಗಾ ಯಾತ್ರೆಯಲ್ಲಿ ಯಾವುದೇ ಪಕ್ಷದ ಧ್ವಜ ಬಳಕೆ ಮಾಡಲ್ಲ ಎಂದು ಹೇಳಿದರು.