ತುಂಗಭದ್ರೆಗೆ ಕಂಟಕ ತಂದ ‘ಅಂತರಗಂಗೆ’! ಕಲುಷಿತಗೊಂಡ ಗದಗ ಜಿಲ್ಲೆಯ ಜೀವನಾಡಿ

Edited By:

Updated on: Aug 24, 2026 | 2:27 PM

ಗದಗ ಜಿಲ್ಲೆಯ ಜೀವನಾಡಿ ತುಂಗಭದ್ರಾ ನದಿಯು ಅಂತರಗಂಗೆಯಿಂದ ಕಲುಷಿತಗೊಂಡಿದೆ. ಮುಂಡರಗಿ ತಾಲೂಕಿನ ಹಮ್ಮಿಗಿ ಬಳಿ ಬೆಳೆದಿರುವ ಈ ಕಳೆ, ಗದಗ-ಬೆಟಗೇರಿ ಸೇರಿದಂತೆ ನೂರಾರು ಗ್ರಾಮಗಳಿಗೆ ಕುಡಿಯುವ ನೀರಿನ ಪೂರೈಕೆಗೆ ಧಕ್ಕೆ ಉಂಟುಮಾಡಿದೆ. ಇದು ಜಲಚರಗಳ ಬದುಕಿಗೂ ಆತಂಕ ತಂದಿದ್ದು, ಕೂಡಲೇ ನದಿ ಸ್ವಚ್ಛಗೊಳಿಸಲು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಗದಗ, ಆಗಸ್ಟ್ 24: ಗದಗ ಜಿಲ್ಲೆಯ ಜೀವನಾಡಿ ತುಂಗಭದ್ರಾ ನದಿಗೆ ಈಗ ಅಂತರಗಂಗೆಯ ಕಂಟಕ ಎದುರಾಗಿದೆ. ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಬಳಿ ಇರುವ ಸಿಂಗಟಾಲೂರು ಏತ ನೀರಾವರಿ ಬ್ಯಾರೇಜ್ ಹಿನ್ನೀರಿನಲ್ಲಿ ಅಪಾರ ಪ್ರಮಾಣದಲ್ಲಿ ಜಲ ಸಸ್ಯಗಳು (ಅಂತರ ಗಂಗೆ) ಬೆಳೆದು ನಿಂತಿವೆ. ಇದು ಒಂದು ಅಥವಾ ಎರಡು ಎಕರೆ ಅಲ್ಲದೆ, ಮೂರು ಎಕರೆಗೂ ಹೆಚ್ಚು ಪ್ರದೇಶದಲ್ಲಿ ವ್ಯಾಪಿಸಿದೆ. ಈ ಜಲಸಸ್ಯಗಳು ಬೆಳೆದಿರುವುದರಿಂದ ನದಿ ನೀರು ಕಲುಷಿತಗೊಂಡು ಮಲೀನವಾಗುತ್ತಿದೆ ಎಂದು ಪರಿಸರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಈ ನೀರು ಗದಗ-ಬೆಟಗೇರಿ ಅವಳಿ ನಗರಗಳಿಗೆ ಮತ್ತು ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕುಗಳ ನೂರಾರು ಗ್ರಾಮಗಳಿಗೆ ಕುಡಿಯಲು ಪೂರೈಕೆಯಾಗುತ್ತಿದ್ದು, ಶುದ್ಧ ನೀರಿನ ಲಭ್ಯತೆಗೆ ಧಕ್ಕೆ ಉಂಟಾಗಿದೆ. ಅಷ್ಟೇ ಅಲ್ಲದೆ, ರಾತ್ರಿ ವೇಳೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಜಲಚರ ಪ್ರಾಣಿಗಳಿಗೂ ಅಪಾಯ ಎದುರಾಗಿದ್ದು, ದುರ್ಗಂಧವೂ ಬೀರುತ್ತಿದೆ.

ಪ್ರಸ್ತುತ ಬ್ಯಾರೇಜ್‌ನಲ್ಲಿ ನೀರು ಸಂಗ್ರಹಗೊಂಡಿರುವ ಕಾರಣ ಅಂತರ ಗಂಗೆಯನ್ನು ತೆಗೆಯುವುದು ಕಷ್ಟವಾಗಿದೆ. ಹಾಗಾಗಿ, ಮುಂದಿನ ಬೇಸಿಗೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ಈ ಜಲಸಸ್ಯಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಗದಗ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us