ಉಡುಪಿ: ಬಾರದ ಆಂಬ್ಯುಲೆನ್ಸ್, ಗೂಡ್ಸ್ ವಾಹನದಲ್ಲೇ ರೋಗಿಯ ಆಸ್ಪತ್ರೆಗೆ ಸಾಗಿಸಿದ ಕುಟುಂಬದವರು
ತುರ್ತು ಸಂದರ್ಭದಲ್ಲಿ ಹಲವು ಬಾರಿ ಕರೆ ಮಾಡಿದರೂ 108 ಆಂಬ್ಯುಲೆನ್ಸ್ ಸೇವೆ ಕಡೆಯಿಂದ ಸ್ಪಂದನೆ ದೊರೆಯದ ಕಾರಣ ರೋಗಿಯ ಕುಟುಂಬದವರು ಗೂಡ್ಸ್ ವಾಹನದಲ್ಲೇ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ದ ಘಟನೆ ಉಡುಪಿ ಜಿಲ್ಲೆಯ ಉದ್ಯಾವರದಲ್ಲಿ ನಡೆದಿದೆ. 108 ಆಂಬ್ಯುಲೆನ್ಸ್ ಸೇವೆ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇರುವ ಬಗ್ಗೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ.
ಉಡುಪಿ, ಡಿಸೆಂಬರ್ 9: ಆಂಬ್ಯುಲೆನ್ಸ್ ಸಿಗದೆ ತುರ್ತು ಪರಿಸ್ಥಿತಿಯಲ್ಲಿ ರೋಗಿಯನ್ನು ಗೂಡ್ಸ್ ವಾಹನದಲ್ಲೇ ಆಸ್ಪತ್ರೆಗೆ ಸಾಗಿಸಬೇಕಾಗಿ ಬಂದ ಮನಕಲಕುವ ಘಟನೆ ಉಡುಪಿ ಜಿಲ್ಲೆಯ ಉದ್ಯಾವರದಲ್ಲಿ ನಡೆದಿದೆ. ಸಂಜೆಯ ವೇಳೆ ರೋಗಿಗೆ ತುರ್ತು ಚಿಕಿತ್ಸೆಯ ಅವಶ್ಯಕತೆ ಕಂಡುಬಂದಾಗ ಕುಟುಂಬದವರು 108 ಆಂಬ್ಯುಲೆನ್ಸ್ಗೆ ಹಲವು ಬಾರಿ ಕರೆ ಮಾಡಿದರೂ ಯಾವುದೇ ಸ್ಪಂದನೆ ದೊರಕಲಿಲ್ಲ. ಕೊನೆಗೆ ಸಮಾಜ ಸೇವಕ ವಿಶು ಶೆಟ್ಟಿ ನೆರವಿನಿಂದ ಗೂಡ್ಸ್ ವಾಹನದ ವ್ಯವಸ್ಥೆ ಮಾಡಿ, ಅದರಲ್ಲಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಉಡುಪಿ ಜಿಲ್ಲೆಯಲ್ಲಿ 108 ಆಂಬ್ಯುಲೆನ್ಸ್ ಸೇವೆ ಕಳೆದ ಒಂದು ವರ್ಷದಿಂದ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹಲವು ಬಾರಿ ದೂರು ನೀಡಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ವಿಶು ಶೆಟ್ಟಿ ವಿಷಾದ ವ್ಯಕ್ತಪಡಿಸಿದ್ದಾರೆ.