ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಜನ್ಮಾಷ್ಟಮಿಯ ಸಂಭ್ರಮ ಹೇಗಿದೆ ನೋಡಿ
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈ ಬಾರಿ ಪರ್ಯಾಯ ಮಠದ ನೇತೃತ್ವದಲ್ಲಿ ಜನ್ಮಾಷ್ಟಮಿ ಸಂಭ್ರಮ ನಡೆಯುತ್ತಿದ್ದು, ಸಾವಿರಾರು ಭಕ್ತರು ಸೇರಿದ್ದಾರೆ. ಮಧ್ಯರಾತ್ರಿ ಅರ್ಘ್ಯ ಪ್ರದಾನ, ನಾಳೆ ಕೃಷ್ಣ ಲೀಲೋತ್ಸವ, ಮೊಸರು ಕುಡಿಕೆ ಮತ್ತು ಹುಲಿ ವೇಷ ಪ್ರದರ್ಶನಗಳು ಎರಡು ದಿನಗಳ ಕಾಲ ಹಬ್ಬದ ವಾತಾವರಣವನ್ನು ಸೃಷ್ಟಿಸಿವೆ.
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ನಡೆಯುತ್ತಿದೆ. ಪರ್ಯಾಯ ಮಠದ ನೇತೃತ್ವದಲ್ಲಿ ಆಯೋಜಿಸಲಾಗಿರುವ ಈ ಆಚರಣೆಗಳಿಗೆ ದೇಶದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದಾರೆ. ಉಡುಪಿಯು ದೇವಾಲಯಗಳ ನಗರ, ಸಂಸ್ಕೃತಿಗಳ ಬೀಡು ಎಂದೇ ಪ್ರಸಿದ್ಧವಾಗಿದ್ದು, ಇಲ್ಲಿನ ಜನ್ಮಾಷ್ಟಮಿ ಆಚರಣೆಯು ಭಕ್ತಿ ಮತ್ತು ಸಂಸ್ಕೃತಿಯ ಅದ್ಭುತ ಸಂಗಮವಾಗಿದೆ. ಜನ್ಮಾಷ್ಟಮಿ ಆಚರಣೆಯು ಎರಡು ದಿನಗಳ ಕಾಲ ನಡೆಯಲಿದ್ದು, ಇಂದು ಸಾಂಪ್ರದಾಯಿಕ ಧಾರ್ಮಿಕ ವಿಧಿಗಳು ನಡೆಯಲಿವೆ. ನಾಳೆ ಕೃಷ್ಣ ಲೀಲೋತ್ಸವ, ಮೊಸರು ಕುಡಿಕೆ, ವಿಟ್ಲ ಪಿಂಡಿ, ಹುಲಿ ವೇಷ ಸ್ಪರ್ಧೆಗಳು ಮತ್ತು ಮಣ್ಣಿನ ರಥದಲ್ಲಿ ದೇವರ ಮೆರವಣಿಗೆಯಂತಹ ಸಾರ್ವಜನಿಕ ಆಕರ್ಷಣೆಗಳು ಭಕ್ತರ ಗಮನ ಸೆಳೆಯಲಿವೆ. ಉಡುಪಿ ಜಿಲ್ಲೆಯಾದ್ಯಂತ ಹುಲಿ ವೇಷಧಾರಿಗಳು ಗರ್ಜನೆ ಮಾಡಲಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದ ಕಳೆ ಹೆಚ್ಚಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಸರ್ವಸನ್ನದ್ಧವಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
