ಕಪ್ಪೆಚಿಪ್ಪು ಸಂಗ್ರಹದ ವೇಳೆ ಭಟ್ಕಳದಲ್ಲಿ ದುರಂತ: ಮನಕಲಕುವಂತಿದೆ ಜಲಸಮಾಧಿಯಾದ 11 ಮಂದಿಯ ಕುಟುಂಬದ ಕಥೆಗಳು
ಉತ್ತರ ಕನ್ನಡದ ಭಟ್ಕಳ ತಾಲೂಕಿನ ಬೆಂಗರೆಯಲ್ಲಿ ಕಪ್ಪೆಚಿಪ್ಪು ಸಂಗ್ರಹಕ್ಕೆ ತೆರಳಿದ್ದ 11 ಮಂದಿ ದುರಂತ ಅಂತ್ಯ ಕಂಡಿದ್ದಾರೆ. ಇವರಲ್ಲಿ ಎಂಟು ಮಂದಿ ಒಂದೇ ಕುಟುಂಬದವರಾಗಿದ್ದು, ಇಂದು ಸಾಮೂಹಿಕ ಅಂತ್ಯಸಂಸ್ಕಾರ ನೆರವೇರಿತು. ತಂದೆ-ತಾಯಿ, ಮಗ ಸೇರಿ ಹಲವಾರು ಕುಟುಂಬಗಳು ಈ ದುರಂತದಲ್ಲಿ ಅನಾಥವಾಗಿವೆ. ಮಕ್ಕಳ ರೋಧನೆ ಮನಕಲಕುವಂತಿದೆ.
ಕಾರವಾರ, ಮೇ 25: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಂಗರೆ ಬಳಿ ಸಂಭವಿಸಿದ ಕಪ್ಪೆಚಿಪ್ಪು ಸಂಗ್ರಹ ದುರಂತದಲ್ಲಿ ಒಟ್ಟು 11 ಮಂದಿ ಜಲಸಮಾಧಿಯಾಗಿದ್ದಾರೆ. ಮೃತಪಟ್ಟ 11 ಮಂದಿಯ ಪೈಕಿ ಎಂಟು ಮಂದಿ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಅವರ ಸಾಮೂಹಿಕ ಅಂತ್ಯಸಂಸ್ಕಾರವನ್ನು ಇಂದು (ಮೇ 24) ನೆರವೇರಿಸಲಾಯಿತು. ನಿನ್ನೆ ಮೂವರ ಅಂತ್ಯಕ್ರಿಯೆಗಳನ್ನು ನಡೆಸಲಾಗಿತ್ತು. ಕಪ್ಪೆಚಿಪ್ಪು ಹೆಕ್ಕಲು ತೆರಳಿದ್ದವರಲ್ಲಿ ಮಹಾದೇವ್ ನಾಯಕ್ ಮತ್ತು ಲಕ್ಷ್ಮಿ ನಾಯಕ್ ದಂಪತಿ ಕೂಡ ಸೇರಿದ್ದರು. ಇವರ ಅಕಾಲಿಕ ನಿಧನದಿಂದ ಮಕ್ಕಳಾದ ದರ್ಶನ್ ಮತ್ತು ಕೀರ್ತನಾ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ.
ಇದೇ ದುರಂತದಲ್ಲಿ ತಾಯಿಯನ್ನು ರಕ್ಷಿಸಲು ಹೋಗಿ ಮಗ ಉಮೇಶ್ ನಾಯಕ್ ಸಹ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಇನ್ನೊಂದು ಪ್ರಕರಣದಲ್ಲಿ, ನಾಲ್ಕು ಮಕ್ಕಳ ತಾಯಿ ಲಕ್ಷ್ಮಿ ಕೂಡ ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಹತ್ತು ವರ್ಷಗಳ ಹಿಂದೆ ಲಕ್ಷ್ಮಿಯ ಪತಿ ನಿಧನರಾಗಿದ್ದರು. ಅಂದಿನಿಂದ ನಾಲ್ವರು ಮಕ್ಕಳನ್ನು ಲಕ್ಷ್ಮಿ ಒಬ್ಬರೇ ಪೋಷಿಸುತ್ತಿದ್ದರು. ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಲಕ್ಷ್ಮಿ, ತಮ್ಮ ಮಕ್ಕಳನ್ನು ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯಲ್ಲಿ ಓದಿಸುತ್ತಿದ್ದರು. ಮಕ್ಕಳನ್ನು ದೊಡ್ಡವರನ್ನಾಗಿ ಮಾಡಬೇಕು, ಅವರಿಗೆ ಉತ್ತಮ ಭವಿಷ್ಯ ನೀಡಬೇಕು ಎಂಬ ಆಶಯದೊಂದಿಗೆ ಕಪ್ಪೆಚಿಪ್ಪು ಸಂಗ್ರಹಕ್ಕೆ ತೆರಳಿದ್ದಾಗ ದುರಂತಕ್ಕೀಡಾಗಿದ್ದಾರೆ. ತಾಯಿಯ ಸಾವಿನಿಂದ ನಾಲ್ಕು ಪುಟ್ಟ ಮಕ್ಕಳು ಅನಾಥರಾಗಿ, ಅವರ ಆಕ್ರಂದನ ಮುಗಿಲು ಮುಟ್ಟಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
