ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಬೆವರಿಳಿಸಿದ ಭಾರತದ ಮಹಿಳಾ ಅಧಿಕಾರಿ ಪೆಟಲ್ ಗೆಹ್ಲೋಟ್ ಯಾರು?
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರಿಗೆ ಭಾರತ ತಕ್ಕ ತಿರುಗೇಟು ನೀಡಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಪಾಕಿಸ್ತಾನದ ಸುಳ್ಳುಗಳನ್ನು ಭಾರತೀಯ ರಾಜತಾಂತ್ರಿಕ ಅಧಿಕಾರಿ ಪೆಟಲ್ ಗೆಹ್ಲೋಟ್ ಬಹಿರಂಗಪಡಿಸಿದ್ದಾರೆ. ಪಾಕಿಸ್ತಾನದ ಮರ್ಯಾದೆ ಹರಾಜು ಹಾಕಿದ ಪೆಟಲ್ ಗೆಹ್ಲೋಟ್ ಬಗ್ಗೆ ನಿಮಗೆಷ್ಟು ಗೊತ್ತು?
ನ್ಯೂಯಾರ್ಕ್, ಸೆಪ್ಟೆಂಬರ್ 27: ಪಾಕಿಸ್ತಾನದ ಪ್ರಧಾನಿ (Pakistan PM) ಶೆಹಬಾಜ್ ಷರೀಫ್ ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಮರುದಿನವಾದ ಇಂದು ಭಾರತ ಅವರಿಗೆ ವಿಶ್ವಸಂಸ್ಥೆಯಲ್ಲೇ ತಕ್ಕ ತಿರುಗೇಟು ನೀಡಿದೆ. ಭಾರತದ ರಾಜತಾಂತ್ರಿಕ ಅಧಿಕಾರಿಯಾದ ಭಾರತದ ಹೆಮ್ಮೆಯ ಮಗಳು ಪೆಟಲ್ ಗೆಹ್ಲೋಟ್ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಅಸಲಿ ಮುಖವನ್ನು ತೆರೆದಿಡುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಪಾಕಿಸ್ತಾನವು ಒಂದು ದಶಕದಿಂದ ಒಸಾಮಾ ಬಿನ್ ಲಾಡೆನ್ಗೆ ಆಶ್ರಯ ನೀಡಿದೆ ಮತ್ತು ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಅದರ ದ್ವಂದ್ವತೆ ಇಡೀ ಜಗತ್ತಿನ ಮುಂದೆ ಬಯಲಾಗಿದೆ ಎಂದು ಗೆಹ್ಲೋಟ್ ಒತ್ತಿ ಹೇಳಿದರು. ಆಪರೇಷನ್ ಸಿಂಧೂರ್ ಬಗ್ಗೆಯೂ ಮಾತನಾಡಿದ ಪೆಟಲ್ ಗೆಹ್ಲೋಟ್ “ಪಾಕಿಸ್ತಾನ ಭಯೋತ್ಪಾದನೆಯನ್ನು ವೈಭವೀಕರಿಸುತ್ತಿದೆ. ಮೇ 9ರವರೆಗೆ ಪಾಕಿಸ್ತಾನ ಭಾರತಕ್ಕೆ ಬೆದರಿಕೆ ಹಾಕುತ್ತಿತ್ತು, ಮೇ 10ರಂದು ಅದರ ಸೈನ್ಯವು ಕದನ ವಿರಾಮಕ್ಕಾಗಿ ಮನವಿ ಮಾಡಿತು” ಎಂದು ಅವರು ನೆನಪಿಸಿದ್ದಾರೆ.
ವಿಶ್ವಸಂಸ್ಥೆಯಲ್ಲಿನ ಪೆಹಲ್ ಗೆಹ್ಲೋಟ್ ಅವರ ಭಾಷಣವನ್ನು ಕೇಳಿದವರೆಲ್ಲರೂ ಅವರು ಯಾರೆಂಬ ಕುರಿತು ಕುತೂಹಲಗೊಂಡಿದ್ದಾರೆ. ವಿಶ್ವಸಂಸ್ಥೆಯಲ್ಲಿ ಭಾರತ-ಪಾಕ್ ಸಂಘರ್ಷದ ಬಗ್ಗೆ ದಾಖಲೆ ಸಮೇತ ಪಾಕಿಸ್ತಾನದ ಬೆವರಿಳಿಸಿದ ಪೆಟಲ್ ಗೆಹ್ಲೋಟ್ ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಮಿಷನ್ನ ಮೊದಲ ಕಾರ್ಯದರ್ಶಿ. ಭಾರತದ ರಾಜತಾಂತ್ರಿಕ ಅಧಿಕಾರಿಯಾಗಿರುವ ಪೆಟಲ್ ಗೆಹ್ಲೋಟ್ ಜುಲೈ 2023ರಿಂದ ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಮಿಷನ್ನಲ್ಲಿ ಪ್ರಥಮ ಕಾರ್ಯದರ್ಶಿಯಾಗಿದ್ದಾರೆ. ಅದಕ್ಕೂ ಮೊದಲು ಅವರು ವಿದೇಶಾಂಗ ಸಚಿವಾಲಯದಲ್ಲಿ ಅಂಡರ್ ಸೆಕ್ರೆಟರಿಯಾಗಿದ್ದರು. 2020ರಿಂದ 2023ರವರೆಗೆ ಯುರೋಪಿಯನ್ ವೆಸ್ಟ್ ಡಿವಿಷನ್ನೊಂದಿಗೆ ಕೆಲಸ ಮಾಡುತ್ತಿದ್ದರು. ಅವರ ಅಧಿಕಾರಾವಧಿಯಲ್ಲಿ ಪ್ಯಾರಿಸ್ನಲ್ಲಿರುವ ಭಾರತೀಯ ಮಿಷನ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದ ಕಾನ್ಸುಲೇಟ್ನಲ್ಲಿಯೂ ಅವರನ್ನು ನೇಮಿಸಲಾಯಿತು.
ಮುಂಬೈನ ಸೇಂಟ್ ಕ್ಸೇವಿಯರ್ಸ್ ಕಾಲೇಜಿನ ಹಳೆಯ ವಿದ್ಯಾರ್ಥಿನಿಯಾಗಿರುವ ಪಟಲ್ ಗೆಹ್ಲೋಟ್ ಪದವಿಪೂರ್ವ ಮಟ್ಟದಲ್ಲಿ ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಮತ್ತು ಫ್ರೆಂಚ್ ಸಾಹಿತ್ಯವನ್ನು ಅಧ್ಯಯನ ಮಾಡಿದರು. ನಂತರ ಅವರು ದೆಹಲಿ ವಿಶ್ವವಿದ್ಯಾಲಯದ ಲೇಡಿ ಶ್ರೀ ರಾಮ್ ಕಾಲೇಜ್ ಫಾರ್ ವುಮೆನ್ನಿಂದ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು ಅಮೆರಿಕದ ಮಾಂಟೆರಿಯಲ್ಲಿರುವ ಮಿಡಲ್ಬರಿ ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್ನಿಂದ ಭಾಷಾ ವ್ಯಾಖ್ಯಾನ ಮತ್ತು ಅನುವಾದದಲ್ಲಿ ಎರಡನೇ ಸ್ನಾತಕೋತ್ತರ ಪದವಿಯನ್ನು ಸಹ ಪಡೆದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

