ರಾಜತಾಂತ್ರಿಕ ವಿವಾದ ಬಗೆಹರಿಸಲು ಭಾರತದೊಂದಿಗೆ ಮಾತುಕತೆಗೆ ಸಿದ್ಧ: ಕೆನಡಾ

ಸಿಖ್ಖ್​​ ಭಯೋತ್ಪಾದಕನ ಹತ್ಯೆ ವಿವಾದದಿಂದ ಭಾರತ ಮತ್ತು ಕೆನಡಾ ರಾಜತಾಂತ್ರಿಕ ಬಿಕ್ಕಟನ್ನು ಬಗೆಹರಿಸಲು ಕೆನಡಾ ಭಾರತದ ಜತೆಗೆ ಖಾಸಗಿ ಮಾತುಕತೆ ನಡೆಸಲಿದೆ ಎಂದು ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಮಂಗಳವಾರ ಹೇಳಿದ್ದಾರೆ. ಇನ್ನು ಈ ಬೆಳವಣಿಗೆ ನೆನ್ನೆ (ಅ.3) ಭಾರತದಲ್ಲಿರುವ ಕೆನಡಾ 41 ರಾಜತಾಂತ್ರಿಕರನ್ನು ವಾಪಸ್​​ ಕರೆಸಿಕೊಳ್ಳವಂತೆ ಹೇಳಿದ ನಂತರ ನಡೆದಿದೆ.

ರಾಜತಾಂತ್ರಿಕ ವಿವಾದ ಬಗೆಹರಿಸಲು ಭಾರತದೊಂದಿಗೆ ಮಾತುಕತೆಗೆ ಸಿದ್ಧ: ಕೆನಡಾ
ಸಾಂದರ್ಭಿಕ ಚಿತ್ರ
Follow us
|

Updated on: Oct 04, 2023 | 11:04 AM

ಕೆನಡಾ- ಭಾರತದ (Canada-India) ನಡುವಿನ ರಾಜತಾಂತ್ರಿಕ ಬಿಕ್ಕಟು ಅಂತ್ಯ ಕಾಣುವ ಸಾಧ್ಯತೆ ಇದೆ. ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ಗಾದೆ ಮಾತಿನಂತೆ, ಇಷ್ಟೆಲ್ಲ ಮಾಡಿ, ಈಗ ಕೆನಡಾಕ್ಕೆ ಬುದ್ಧಿ ಬಂದಿದೆ. ಸಿಖ್ಖ್​​ ಭಯೋತ್ಪಾದಕನ ಹತ್ಯೆ ವಿವಾದದಿಂದ ಭಾರತ ಮತ್ತು ಕೆನಡಾ ರಾಜತಾಂತ್ರಿಕ ಬಿಕ್ಕಟನ್ನು ಬಗೆಹರಿಸಲು ಕೆನಡಾ ಭಾರತದ ಜತೆಗೆ ಖಾಸಗಿ ಮಾತುಕತೆ ನಡೆಸಲಿದೆ ಎಂದು ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಮಂಗಳವಾರ ಹೇಳಿದ್ದಾರೆ. ಇನ್ನು ಈ ಬೆಳವಣಿಗೆ ನೆನ್ನೆ (ಅ.3) ಭಾರತದಲ್ಲಿರುವ ಕೆನಡಾ 41 ರಾಜತಾಂತ್ರಿಕರನ್ನು ವಾಪಸ್​​ ಕರೆಸಿಕೊಳ್ಳವಂತೆ ಹೇಳಿದ ನಂತರ ನಡೆದಿದೆ.

ಅ.10ರ ಒಳಗೆ ನಿಮ್ಮ (ಕೆನಡಾ) ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಸ್​​ ಕರೆಸಿಕೊಳ್ಳವಂತೆ ಭಾರತದ ಹೇಳಿದೆ. ಆದರೆ ಭಾರತದ ಈ ನಿರ್ಧಾರಕ್ಕೆ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಮತ್ತು ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊ ಅವರು ಯಾವುದೇ ಪ್ರಕ್ರಿಯೆ ನೀಡಿಲ್ಲ. ಇನ್ನು ಈ ಬಿಕ್ಕಟ್ಟಿಗೆ ಕೆನಡಾ ಅಂತ್ಯ ಹಾಡುವಂತಿದೆ. ನಾವು ಭಾರತದ ಜತೆಗೆ ಸಂಪರ್ಕದಲ್ಲಿದ್ದೇವೆ. ರಾಜತಾಂತ್ರಿಕ ಅಧಿಕಾರಿಗಳ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಈ ಕಾರಣಕ್ಕಾಗಿ ಭಾರತದ ಜತೆಗೆ ನಾವು ಖಾಸಗಿ ಮಾತುಕತೆ ನಡೆಸುತ್ತೇವೆ ಎಂದು ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಹೇಳಿದ್ದಾರೆ.

ಇದನ್ನೂ ಓದಿ:ಭಾರತದೊಂದಿಗೆ ಪರಿಸ್ಥಿತಿಯನ್ನು ಉಲ್ಬಣಗೊಳಿಸಲು ಬಯಸುತ್ತಿಲ್ಲ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ

ಜೂನ್​​ 18ರಂದು ಕೆನಡಾ ಗುರುದ್ವಾರದ ಬಳಿ, ಸಿಖ್ಖ್​​ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆ ಮಾಡಲಾಗಿದೆ. ಈ ಹತ್ಯೆಯ ಹಿಂದೆ ಭಾರತ ಸರ್ಕಾರದ ಕೈವಾಡ ಇದೆ ಎಂದು ಕೆನಡಾದ ಆರೋಪಿಸಿತ್ತು. ಇದರ ಜತೆಗೆ ಭಾರತ ಹರ್ದೀಪ್ ಸಿಂಗ್ ನಿಜ್ಜರ್​​ನ್ನು ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿದ್ದು ಈ ಹತ್ಯೆ ಪ್ರಕರಣಕ್ಕೆ ಮತ್ತಷ್ಟು ಪುಷ್ಟಿ ನೀಡಿತ್ತು. ಇಲ್ಲಿಂದ ಭಾರತ ಮತ್ತು ಕೆನಡಾದ ನಡುವಿನ ಸಂಬಂಧದಲ್ಲಿ ಬಿರುಕು ಮೂಡಲು ಆರಂಭವಾಗಿದೆ. ನಂತರ ಭಾರತದ ಹಿರಿಯ ರಾಜತಾಂತ್ರಿಕರರನ್ನು ಕೆನಡಾದಿಂದ ಹೊರಹಾಕಲಾಗಿದೆ. ಇದಕ್ಕೆ ಪ್ರತಿಯಾಗಿ ಭಾರತ ಕೂಡ ಕೆನಡಾ ರಾಜತಾಂತ್ರಿಕರನ್ನು ಭಾರತ ಬಿಟ್ಟು ಹೋಗುವಂತೆ ತಿಳಿಸಿತ್ತು. ಜತೆಗೆ ಭಾರತ ಕೆನಡಾನಿಯರಿಗೆ ವೀಸಾವನ್ನು ತಡೆಹಿಡಿದಿತ್ತು.

ಇನ್ನು ಭಾರತದಲ್ಲಿರುವ 41 ಕೆನಡಾನಿಯನ್​​​ ರಾಜತಾಂತ್ರಿಕರನ್ನು ಮಂಗಳವಾರ ವಾಪಸ್​​ ಕರೆಸಿಕೊಳ್ಳುವಂತೆ ಭಾರತ ಹೇಳಿದೆ. ಇದಕ್ಕೆ ಕೆನಡಾ ಭಾರತ ನಮಗೆ ಬೆದರಿಕೆ ಹಾಕುತ್ತಿದೆ ಎಂದು ಹೇಳಿತ್ತು. ಕೆನಡಾದಲ್ಲೂ ಭಾರತದ 62 ರಾಜತಾಂತ್ರಿರನ್ನು ಹೊಂದಿದೆ. ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ, ಆದರೆ ನಾವು ಭಾರತ ಸರ್ಕಾರದೊಂದಿಗೆ ಜವಾಬ್ದಾರಿಯುತವಾಗಿ ಮತ್ತು ರಚನಾತ್ಮಕವಾಗಿ ಸಂಬಂಧವನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ