ಪ್ರಜಾಪ್ರಭುತ್ವ ನಮ್ಮ ಡಿಎನ್​ಎಯಲ್ಲಿದೆ; ಗಯಾನಾ ಸಂಸತ್ತಿನ ವಿಶೇಷ ಅಧಿವೇಶನ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಪ್ರಧಾನಿ ನರೇಂದ್ರ ಮೋದಿ ಇಂದು ಗಯಾನಾದಲ್ಲಿ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದಾರೆ. ತಮ್ಮ ಭಾಷಣದಲ್ಲಿ, ಪಿಎಂ ಮೋದಿ ಅವರು ಭಾರತ-ಗಯಾನಾ ಬಾಂಧವ್ಯದ ಇತಿಹಾಸದ ಬಗ್ಗೆ ಮತ್ತು 14 ವರ್ಷಗಳ ಹಿಂದೆ ಗಯಾನಾಗೆ ಭೇಟಿ ನೀಡಿದ ಬಗ್ಗೆ ಮಾತನಾಡಿದ್ದಾರೆ.

ಪ್ರಜಾಪ್ರಭುತ್ವ ನಮ್ಮ ಡಿಎನ್​ಎಯಲ್ಲಿದೆ; ಗಯಾನಾ ಸಂಸತ್ತಿನ ವಿಶೇಷ ಅಧಿವೇಶನ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
ಪಿಎಂ ನರೇಂದ್ರ ಮೋದಿ

Updated on: Nov 21, 2024 | 8:56 PM

ಗಯಾನಾ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ನವೆಂಬರ್ 21) ಗಯಾನಾ ಸಂಸತ್ತಿನ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಭಾರತ ಮತ್ತು ಗಯಾನಾ ನಡುವಿನ ವಿಶೇಷ ಬಾಂಧವ್ಯವನ್ನು ಪಿಎಂ ಮೋದಿ ಶ್ಲಾಘಿಸಿದ್ದಾರೆ. ಪ್ರಪಂಚದಾದ್ಯಂತ ಯಾವುದೇ ದೇಶದ ಯಾವುದೇ ಬಿಕ್ಕಟ್ಟಿನ ಸಂದರ್ಭದಲ್ಲಿ ನಾವು ಪ್ರಾಮಾಣಿಕ ಪ್ರಯತ್ನದಿಂದ ಸಹಾಯಹಸ್ತ ಚಾಚುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಜಾಪ್ರಭುತ್ವವು ನಮ್ಮ ಡಿಎನ್‌ಎಯಲ್ಲಿದೆ, ನಮ್ಮ ದೃಷ್ಟಿಯಲ್ಲಿ ಮತ್ತು ನಮ್ಮ ನಡವಳಿಕೆಯಲ್ಲಿದೆ. ನಮಗೆ ಪ್ರಜಾಪ್ರಭುತ್ವ ಮತ್ತು ಮಾನವೀಯತೆಯೇ ಮೊದಲು. ಭಾರತ ಮತ್ತು ಗಯಾನಾ ನಡುವಿನ ಬಾಂಧವ್ಯ ವಿಶೇಷವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ವಿದೇಶಿ ಸಂಸತ್ತಿನಲ್ಲಿ ಪ್ರಧಾನಿ ಮೋದಿ ದಾಖಲೆಯ 14ನೇ ಭಾಷಣ

ಜಗತ್ತಿಗೆ ಇದು ಸಂಘರ್ಷದ ಸಮಯವಲ್ಲ. ಸಂಘರ್ಷಕ್ಕೆ ಕಾರಣವಾಗುವ ಪರಿಸ್ಥಿತಿಗಳನ್ನು ಗುರುತಿಸಲು ಮತ್ತು ತೊಡೆದುಹಾಕಲು ಇದು ಸೂಕ್ತ ಸಮಯ. ಬಾಹ್ಯಾಕಾಶವಾಗಲಿ ಅಥವಾ ಸಮುದ್ರವಾಗಲಿ ಅವು ಸಾರ್ವತ್ರಿಕ ಸಹಕಾರದ ವಿಷಯಗಳಾಗಿರಬೇಕೇ ವಿನಃ ಸಾರ್ವತ್ರಿಕ ಸಂಘರ್ಷದ ಸಂಗತಿಯಲ್ಲ ಎಂದು ಪಿಎಂ ನರೇಂದ್ರ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ನಿನ್ನೆ, ಗಯಾನಾ ತನ್ನ ಉನ್ನತ ಗೌರವವನ್ನು ನನಗೆ ನೀಡಿದೆ. ಈ ಗೌರವಕ್ಕಾಗಿ ನಾನು ಎಲ್ಲಾ ಗಯಾನೀಸ್ ಜನರಿಗೆ ಕೃತಜ್ಞನಾಗಿದ್ದೇನೆ ಮತ್ತು ನಾನು ಅದನ್ನು ಭಾರತದ ಎಲ್ಲಾ ನಾಗರಿಕರಿಗೆ ಅರ್ಪಿಸುತ್ತೇನೆ. ಸುಮಾರು 180 ವರ್ಷಗಳ ಹಿಂದೆ ಒಬ್ಬ ಭಾರತೀಯನು ಗಯಾನಾಕ್ಕೆ ಬಂದನು. ಅಂದಿನಿಂದ ಒಳ್ಳೆಯದು ಮತ್ತು ಕೆಟ್ಟದ್ದರಲ್ಲಿ, ಪ್ರತಿಯೊಂದು ಪರಿಸ್ಥಿತಿಯಲ್ಲಿಯೂ ಭಾರತ-ಗಯಾನಾ ಸಂಬಂಧಗಳು ಸೌಹಾರ್ದತೆಯಿಂದ ತುಂಬಿವೆ ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಗಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ‘ಆರ್ಡರ್ ಆಫ್ ಎಕ್ಸಲೆನ್ಸ್​’ ನೀಡಿ ಗೌರವಿಸಿದ ಅಧ್ಯಕ್ಷ ಇರ್ಫಾನ್ ಅಲಿ

ಸುಮಾರು 14 ವರ್ಷಗಳ ಹಿಂದೆ ನಾನು ಕುತೂಹಲಕಾರಿ ವ್ಯಕ್ತಿಯಾಗಿ ಈ ಸುಂದರ ದೇಶಕ್ಕೆ ಬಂದಿದ್ದೆ. ಸಾಮಾನ್ಯವಾಗಿ, ಜನರು ಬೆರಗುಗೊಳಿಸುವ ಸ್ಥಳಗಳಿಗೆ ಪ್ರಯಾಣಿಸಲು ಇಷ್ಟಪಡುತ್ತಾರೆ. ಆದರೆ ನಾನು ಗಯಾನಾದ ಇತಿಹಾಸ ಮತ್ತು ಸಂಸ್ಕೃತಿಯನ್ನು ಕಲಿಯಲು ಇಲ್ಲಿಗೆ ಬಂದಿದ್ದೆ ಎಂದು ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.


‘ಪ್ರಜಾಪ್ರಭುತ್ವ ಮೊದಲು, ಮಾನವೀಯತೆ ಮೊದಲು’ ಎಂಬುದು ನಮ್ಮ ಮಂತ್ರ’ಪ್ರಜಾಪ್ರಭುತ್ವ ಮೊದಲು’ ಎಂಬ ಮನೋಭಾವವು ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಿ ಪ್ರತಿಯೊಬ್ಬರ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವಂತೆ ಕಲಿಸುತ್ತದೆ. ‘ಮಾನವೀಯತೆ ಮೊದಲು’ ಎಂಬ ಮನೋಭಾವವು ನಮ್ಮ ನಿರ್ಧಾರಗಳ ದಿಕ್ಕನ್ನು ನಿರ್ಧರಿಸುತ್ತದೆ ಎಂದಿದ್ದಾರೆ.

21 ನೇ ಶತಮಾನದಲ್ಲಿ, ಜಾಗತಿಕ ಸಮೃದ್ಧಿಯನ್ನು ಖಾತ್ರಿಪಡಿಸುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ. ಗ್ಲೋಬಲ್ ಸೌತ್‌ನ ಏಕೀಕೃತ ಧ್ವನಿಯು ನಿರ್ಣಾಯಕವಾಗಿದೆ. ಇದು ಜಾಗತಿಕ ದಕ್ಷಿಣದ ಜಾಗೃತಿಯ ಸಮಯ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:51 pm, Thu, 21 November 24