ಪಾಕ್​ ಮಾಜಿ ಪ್ರಧಾನಿ ಇಮ್ರಾನ್​​​​ ಖಾನ್​​ಗೆ 3 ವರ್ಷ ಜೈಲುಶಿಕ್ಷೆ, 5 ವರ್ಷ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ:​ ಕೋರ್ಟ್ ಆದೇಶ

Imran Khan: ತೋಷಖಾನಾ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ,ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್​​ಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಪಾಕಿಸ್ತಾನದ ಕೋರ್ಟ್​ ಶನಿವಾರ ಆದೇಶ ಹೊರಡಿಸಿದೆ.

ಪಾಕ್​ ಮಾಜಿ ಪ್ರಧಾನಿ ಇಮ್ರಾನ್​​​​ ಖಾನ್​​ಗೆ 3 ವರ್ಷ ಜೈಲುಶಿಕ್ಷೆ, 5 ವರ್ಷ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ:​ ಕೋರ್ಟ್ ಆದೇಶ
ಇಮ್ರಾನ್ ಖಾನ್
ರಶ್ಮಿ ಕಲ್ಲಕಟ್ಟ

Updated on: Aug 05, 2023 | 1:51 PM

ಇಸ್ಲಾಮಾಬಾದ್ ಆಗಸ್ಟ್05: ಪಾಕಿಸ್ತಾನದ (Pakistan) ವಿಚಾರಣಾ ನ್ಯಾಯಾಲಯವು ಶನಿವಾರ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ (Imran Khan) ಸರ್ಕಾರಿ ಉಡುಗೊರೆಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದಕ್ಕಾಗಿ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ತೋಷಖಾನಾ ಭ್ರಷ್ಟಾಚಾರ ಪ್ರಕರಣ (Toshakhana Case) ಎಂದು ಕರೆಯಲ್ಪಡುವ ಈ ಪ್ರಕರಣದಲ್ಲಿ ಅವರನ್ನು ಐದು ವರ್ಷಗಳ ಕಾಲ ರಾಜಕೀಯದಿಂದ ಅನರ್ಹಗೊಳಿಸಲಾಗಿದೆ. ಈ ಪ್ರಕರಣದ ಶಿಕ್ಷೆಯು ನವೆಂಬರ್ ಆರಂಭದ ಮೊದಲು ನಡೆಯಲಿರುವ ರಾಷ್ಟ್ರೀಯ ಚುನಾವಣೆಗಳಲ್ಲಿ ಖಾನ್ ಭಾಗವಹಿಸುವ ಸಾಧ್ಯತೆಯನ್ನು ಕೊನೆಗೊಳಿಸಬಹುದು ಎಂದು ಕಾನೂನು ತಜ್ಞರು ಹೇಳಿದ್ದಾರೆ.

ನ್ಯಾಯಾಧೀಶ ಹುಮಾಯೂನ್ ದಿಲಾವರ್ ಅವರು, ಇಮ್ರಾನ್ ಖಾನ್ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ ಎಂದು ಹೇಳಿರುವುದಾಗಿ ಪಾಕಿಸ್ತಾನ ಟಿವಿ ಹೇಳಿದೆ. ಖಾನ್ ವಿಚಾರಣೆಗೆ ನ್ಯಾಯಾಲಯದಲ್ಲಿ ಇರಲಿಲ್ಲ. ಇಮ್ರಾನ್ ಖಾನ್ ಅವರನ್ನು ಬಂಧಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ನ್ಯಾಯಾಲಯವು ಪಿಟಿಐ ಮುಖ್ಯಸ್ಥರಿಗೆ 100,000 ಪಿಕೆಆರ್ ದಂಡ ವಿಧಿಸಿದೆ ಎಂದು ಡಾನ್ ವರದಿ ಮಾಡಿದೆ. ತೋಷಖಾನಾ ಉಡುಗೊರೆಗಳ ವಿವರಗಳನ್ನು ಮರೆಮಾಚಿದ್ದಕ್ಕಾಗಿ ಪಾಕಿಸ್ತಾನದ ಚುನಾವಣಾ ಆಯೋಗ (ಇಸಿಪಿ) ಅವರ ವಿರುದ್ಧ ಸಲ್ಲಿಸಿದ ಕ್ರಿಮಿನಲ್ ದೂರಿನ ಮೇರೆಗೆ ಖಾನ್ ಅವರನ್ನು ಮೇ 10 ರಂದು ದೋಷಾರೋಪಣೆ ಮಾಡಲಾಯಿತು.

ಶನಿವಾರ ನಡೆದ ವಿಚಾರಣೆಯಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ದಿಲಾವರ್ ಅವರು ಪ್ರಕರಣದಲ್ಲಿ ಮಾಜಿ ಪ್ರಧಾನಿ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದರು.

ಇದನ್ನೂ ಓದಿ: ಕ್ಯಾಲಿಫೋರ್ನಿಯಾದಲ್ಲಿ ಅಂಗಡಿ ಲೂಟಿ ಮಾಡಿದ ಕಳ್ಳನಿಗೆ ಹಿಗ್ಗಾಮುಗ್ಗ ಥಳಿಸಿದ ಸಿಖ್ ವ್ಯಕ್ತಿ; ಕೃತ್ಯದ ವಿಡಿಯೊ ವೈರಲ್

ಇಮ್ರಾನ್ ಖಾನ್ ಉದ್ದೇಶಪೂರ್ವಕವಾಗಿ ಪಾಕಿಸ್ತಾನದ ಚುನಾವಣಾ ಆಯೋಗಕ್ಕೆ ನಕಲಿ ವಿವರಗಳನ್ನು ಸಲ್ಲಿಸಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ಅವರು ತಪ್ಪಿತಸ್ಥರೆಂದು ಸಾಬೀತಾಗಿದೆ ಎಂದು ನ್ಯಾಯಾಧೀಶರನ್ನು ಉಲ್ಲೇಖಿಸಿ ಡಾನ್ ವರದಿ ಮಾಡಿದೆ. ಚುನಾವಣಾ ಕಾಯ್ದೆಯ ಸೆಕ್ಷನ್ 174 ರ ಅಡಿಯಲ್ಲಿ ಪಿಟಿಐ ಮುಖ್ಯಸ್ಥರನ್ನು ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ

ನ್ಯಾಯಾಲಯದ ಆದೇಶಗಳ ಅನುಷ್ಠಾನಕ್ಕಾಗಿ ಇಸ್ಲಾಮಾಬಾದ್ ಪೊಲೀಸ್ ಮುಖ್ಯಸ್ಥರಿಗೆ ಆದೇಶದ ಪ್ರತಿಯನ್ನು ಕಳುಹಿಸಬೇಕು ಎಂದು ಎಡಿಎಸ್‌ಜೆ ದಿಲಾವರ್ ನಿರ್ದೇಶಿಸಿದ್ದಾರೆ.

 

Published On - 1:33 pm, Sat, 5 August 23

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us