ಸಿಖ್ ಉಗ್ರಗಾಮಿ ಕೃತ್ಯಗಳ ವಿರುದ್ಧ ಬಲವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೆನಡಾ ಸರ್ಕಾರಕ್ಕೆ ಭಾರತ ಒತ್ತಾಯ

ಕಳವಳವನ್ನು ತಿಳಿಸುವುದಕ್ಕಾಗಿ ಕೆನಡಾದ ಹೈಕಮಿಷನರ್ ಅವರನ್ನು ಸೋಮವಾರ ಸೌತ್ ಬ್ಲಾಕ್‌ಗೆ ಕರೆಸಿದ್ದು, ಮಂಗಳವಾರ ಮುಂಜಾನೆ ಗ್ಲೋಬಲ್ ಅಫೇರ್ಸ್ ಕೆನಡಾಕ್ಕೆ ಟಿಪ್ಪಣಿಯನ್ನು ಕಳುಹಿಸಲಾಗಿದೆ. ಮಾರ್ಚ್ 23, 2023 ರಂದು ಸಿಖ್ ಉಗ್ರಗಾಮಿಗಳು ಹೈಕಮಿಷನ್ ಆವರಣಕ್ಕೆ ಎರಡು ಸ್ಮೋಕ್ ಗ್ರೆನೇಡ್‌ಗಳನ್ನು ಎಸೆದಿದ್ದಾರೆ ಎಂದು ಕೆನಡಾದ ಭಾರತೀಯ ಹೈಕಮಿಷನರ್ ಟ್ರುಡೊ ಸರ್ಕಾರಕ್ಕೆ ನೆನಪಿಸಿದ್ದಾರೆ.

ಸಿಖ್ ಉಗ್ರಗಾಮಿ ಕೃತ್ಯಗಳ ವಿರುದ್ಧ ಬಲವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೆನಡಾ ಸರ್ಕಾರಕ್ಕೆ ಭಾರತ ಒತ್ತಾಯ
ಖಲಿಸ್ತಾನಿ ಧ್ವಜ
ರಶ್ಮಿ ಕಲ್ಲಕಟ್ಟ

Updated on: Jul 04, 2023 | 3:10 PM

ಒಟ್ಟಾವಾದಲ್ಲಿನ ಭಾರತೀಯ ಹೈಕಮಿಷನ್ (Indian High Commission) ಮತ್ತು ಜುಲೈ 8 ರಂದು ಟೊರೊಂಟೊ ಮತ್ತು ವ್ಯಾಂಕೋವರ್‌ನಲ್ಲಿರುವ ಎರಡು ಕಾನ್ಸುಲೇಟ್‌ಗಳ ಹೊರಗೆ ಖಲಿಸ್ತಾನ್ ಪರ ಭಯೋತ್ಪಾದಕ ಸಂಘಟನೆಗಳ ಯೋಜಿತ ಪ್ರತಿಭಟನೆಗಳ ಕುರಿತು ಭಾರತ ಪ್ರತಿಭಟನೆ ದಾಖಲಿಸಿದೆ. ಮಿಷನ್‌ಗಳು ಮತ್ತು ಕಾನ್ಸುಲೇಟ್‌ಗಳ ಹತ್ತಿರ ಒಟ್ಟುಗೂಡುವುದು, ಭಾರತದ ರಾಷ್ಟ್ರ ಧ್ವಜವನ್ನು ಅಪವಿತ್ರಗೊಳಿಸುವುದು, ಕರಪತ್ರಗಳು ಅಥವಾ ವಸ್ತುಗಳನ್ನು ಗಡಿ ಬೇಲಿಗೆ ಅಂಟಿಸುವುದು ಮತ್ತು ಕೆನಡಾದಲ್ಲಿನ ಭಾರತೀಯ ರಾಜತಾಂತ್ರಿಕ ಆವರಣಕ್ಕೆ ಸ್ಪೋಟಕಗಳನ್ನು ಎಸೆಯುವುದು ಮೊದಲಾದ ಕೃತ್ಯಗಳ ವಿರುದ್ಧ ಬಲವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಸ್ಟಿನ್ ಟ್ರುಡೊ(Justin Trudeau) ಸರ್ಕಾರಕ್ಕೆ ಭಾರತ ಹೇಳಿದೆ.

ಕಳವಳವನ್ನು ತಿಳಿಸುವುದಕ್ಕಾಗಿ ಕೆನಡಾದ ಹೈಕಮಿಷನರ್ ಅವರನ್ನು ಸೋಮವಾರ ಸೌತ್ ಬ್ಲಾಕ್‌ಗೆ ಕರೆಸಿದ್ದು, ಮಂಗಳವಾರ ಮುಂಜಾನೆ ಗ್ಲೋಬಲ್ ಅಫೇರ್ಸ್ ಕೆನಡಾಕ್ಕೆ ಟಿಪ್ಪಣಿಯನ್ನು ಕಳುಹಿಸಲಾಗಿದೆ. ಮಾರ್ಚ್ 23, 2023 ರಂದು ಸಿಖ್ ಉಗ್ರಗಾಮಿಗಳು ಹೈಕಮಿಷನ್ ಆವರಣಕ್ಕೆ ಎರಡು ಸ್ಮೋಕ್ ಗ್ರೆನೇಡ್‌ಗಳನ್ನು ಎಸೆದಿದ್ದಾರೆ ಎಂದು ಕೆನಡಾದ ಭಾರತೀಯ ಹೈಕಮಿಷನರ್ ಟ್ರುಡೊ ಸರ್ಕಾರಕ್ಕೆ ನೆನಪಿಸಿದ್ದಾರೆ.

ಕೆನಡಾದ ಪ್ರಮುಖ ಕೊಂಡಿ ಹರ್ದೀಪ್ ಸಿಂಗ್ ನಿಜ್ಜರ್ ನ್ನು ಜೂನ್ 19 ರಂದು ವ್ಯಾಂಕೋವರ್‌ನ ಸರ್ರೆಯಲ್ಲಿ ಗುಂಡಿಕ್ಕಿ ಕೊಂದಿದ್ದು, ಇದನ್ನು ಖಂಡಿಸಿ ಯುಎಸ್ ಮೂಲದ ನಿಷೇಧಿತ ಸಂಘಟನೆ SFJ ಪ್ರತಿಭಟನೆಗಳನ್ನು ಆಯೋಜಿಸುತ್ತಿದೆ. ಖಲಿಸ್ತಾನ್ ಟೈಗರ್ ಫೋರ್ಸ್ ಭಯೋತ್ಪಾದಕ ನಿಜ್ಜರ್‌ನ ವಿರೋಧಿಗಳು ಸರ್ರೆಯಲ್ಲಿ 15 ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಆದರೆ ಎಸ್ಎಫ್ ಜೆ ಈ ಹತ್ಯೆಗೆ ಭಾರತೀಯ ಭದ್ರತಾ ಏಜೆನ್ಸಿಗಳನ್ನು ದೂಷಿಸಿದೆ.

ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸದ ಮೇಲಿನ ದಾಳಿಯು ಭಯೋತ್ಪಾದಕ ಜಿ.ಎಸ್. ಪನ್ನು ನಡೆಸುತ್ತಿರುವ ಎಸ್‌ಎಫ್‌ಜೆ ಅಭಿಯಾನದ ಭಾಗವಾಗಿದೆ. ಪನ್ನು ವಿಶೇಷವಾಗಿ ಕೆನಡಾ ಮತ್ತು ಯುಕೆಯಲ್ಲಿ ಹೆಚ್ಚಿನ ಪ್ರಭಾವ ಹೊಂದಿದ್ದಾರೆ.

ಇದನ್ನೂ ಓದಿ: ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತೀಯ ದೂತವಾಸ ಕಚೇರಿಗೆ ಬೆಂಕಿ ಹಚ್ಚಿದ ಖಲಿಸ್ತಾನಿ ಬೆಂಬಲಿಗರು

ಒಟ್ಟಾರೆ ಬೆದರಿಕೆ ಕಡಿಮೆಯಾಗುವವರೆಗೆ ಮತ್ತು ವಿಶೇಷವಾಗಿ ಅವರು ಭಾಗವಹಿಸುವ ಕಾರ್ಯಕ್ರಮಗಳ ಸಮಯದಲ್ಲಿ ಹೈಕಮಿಷನರ್ ಮತ್ತು ಇಬ್ಬರು ಕಾನ್ಸುಲ್ ಜನರಲ್‌ಗಳಿಗೆ ಬೆಂಗಾವಲು ಒದಗಿಸುವುದು ಸೇರಿದಂತೆ ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಕೆನಡಾದಲ್ಲಿರುವ ಭಾರತೀಯ ಹೈಕಮಿಷನ್ ಫೆಡರಲ್ ಸರ್ಕಾರವನ್ನು ಕೇಳಿದೆ. ಭಾರತೀಯ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ, ಕಾನ್ಸುಲ್ ಜನರಲ್ ವ್ಯಾಂಕೋವರ್ ಮನೀಶ್, ಕಾನ್ಸುಲ್ ಜನರಲ್ ಟೊರೊಂಟೊ ಅಪೂರ್ವ ಶ್ರೀವಾಸ್ತವ ಅವರನ್ನು ಉಗ್ರಗಾಮಿಗಳು ಪ್ರಸಾರ ಮಾಡಿದ ಕರಪತ್ರಗಳಲ್ಲಿ ಭಯೋತ್ಪಾದಕ ನಿಜ್ಜರ್ ಹತ್ಯೆಗೆ ಕಾರಣವೆಂದು ಹೆಸರಿಸಲಾಗಿದೆ.

ಈ ಖಲಿಸ್ತಾನ್ ಪ್ರತ್ಯೇಕತಾವಾದಿಗಳು ಪ್ರತಿಭಟನೆಯ ಸಮಯದಲ್ಲಿ ಭಾರತೀಯ ರಾಷ್ಟ್ರಧ್ವಜವನ್ನು ಸುಡಲು ಯೋಜಿಸಿದ್ದಾರೆ ಎಂದು ಭಾರತೀಯ ಮಿಷನ್ ಕೆನಡಾದ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ಇದು ಟೊರೊಂಟೊ ಮತ್ತು ವ್ಯಾಂಕೋವರ್‌ನಲ್ಲಿ ಯೋಜಿಸಲಾದ ಈ ಕೂಟಗಳ ಹಿಂಸಾತ್ಮಕ ಸ್ವರೂಪ ಅಥವಾ ಉಗ್ರಗಾಮಿ ಸ್ವರೂಪವನ್ನು ಸೂಚಿಸುತ್ತದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us