ಹಿಂದೂ ದೇವಾಲಯ ಧ್ವಂಸಗೊಳಿಸಿದ ದುಷ್ಕರ್ಮಿಗಳು: 26 ಮಂದಿಯನ್ನು ಬಂಧಿಸಿದ ಪಾಕ್ ಪೊಲೀಸರು

ಪಾಕಿಸ್ತಾನದ ಹಿಂದೂ ದೇವಸ್ಥಾನ ಮತ್ತು ಅದರ ನೂತನ ಕಟ್ಟಡವನ್ನು ದ್ವಂಸಗೊಳಿಸಿದ ಪ್ರಕರಣದಲ್ಲಿ ಪಾಕ್ ಪೊಲೀಸರು ಜಮಿಯತ್ ಉಲೆಮಾ-ಇ-ಇಸ್ಲಾಂ ಪಕ್ಷದ 26 ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಹಿಂದೂ ದೇವಾಲಯ ಧ್ವಂಸಗೊಳಿಸಿದ ದುಷ್ಕರ್ಮಿಗಳು: 26  ಮಂದಿಯನ್ನು ಬಂಧಿಸಿದ ಪಾಕ್ ಪೊಲೀಸರು
ಪಾಕಿಸ್ತಾನದ ತೇರಿ ಗ್ರಾಮದ ಹಿಂದೂ ದೇವಾಲಯ ಧ್ವಂಸಗೊಂಡಿರುವುದು
Updated By: ಸಾಧು ಶ್ರೀನಾಥ್​

Updated on: Dec 31, 2020 | 6:06 PM

ವಾಯವ್ಯ ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ಮತ್ತು ನೂತನ ಕಟ್ಟಡವನ್ನು ಧ್ವಂಸಗೊಳಿಸಿದ ಪ್ರಕರಣದಲ್ಲಿ ಜಮಿಯತ್ ಉಲೆಮಾ-ಇ-ಇಸ್ಲಾಂ ಪಕ್ಷದ 26 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಪಾಕಿಸ್ತಾನದ ಖರಕ್ ಜಿಲ್ಲೆಯ ತೇರಿ ಗ್ರಾಮದಲ್ಲಿ ಉದ್ವಿಕ್ತ ಗುಂಪೊಂದು ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿತ್ತು. ಕೃಷ್ಣ ದ್ವಾರ ಮಂದಿರ ಮತ್ತು ಅದರ ಸಮೀಪವಿರುವ ಶ್ರೀ ಪರಮಹಂಸ ಮಹಾರಾಜ ಸಮಾಧಿ (Shri Paramhans Ji Maharaj’s Samadhi along with the Krishna Dwara Mandir) ಸಮೀಪ ಜಮಾಯತ್ ಉಲೆಮಾ-ಇ-ಇಸ್ಲಾಂ ಪಕ್ಷ ಆಯೋಜಿಸಿದ್ದ ಸಮಾರಂಭವೊಂದರಲ್ಲಿ ಪ್ರಚೋದನಕಾರಿ ಭಾಷಣ ಮಾಡಲಾಗಿತ್ತು. ಈ ಭಾಷಣ ಕೇಳಿ ಉದ್ವಿಗ್ನಗೊಂಡಿದ್ದ ಗುಂಪು ಆ ದೇವಾಲಯವನ್ನು ಧ್ವಂಸಗೊಳಿಸಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದರು.

ಹಳೆಯ ದೇಗುಲದ ಪಕ್ಕ ನೂತನ ಮಂದಿರ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಉದ್ರಿಕ್ತರ ಗುಂಪು ಹೊಸ ಕಟ್ಟಡವನ್ನು ಸಹ ನಾಶಪಡಿಸಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಜಮಿಯತ್ ಉಲೆಮಾ-ಇ-ಇಸ್ಲಾಂ ಪಕ್ಷದ ಮುಖಂಡ ಮೌಲಾನಾ ಅತೌರ್ ರಹ್ಮಾನ್ ‘ಈ ಘಟನೆಗೂ ನಮ್ಮ ಪಕ್ಷ ಆಯೋಜಿಸಿದ್ದ ಪ್ರಚಾರ ಸಭೆಗೂ ಸಂಬಂಧವಿಲ್ಲ. ದೇಗುಲ ನಾಶವಾಗಿರುವದಕ್ಕೆ ವಿಷಾದವಿದೆ’ ಎಂದಿದ್ದರು.­

ಪಾಕಿಸ್ತಾನ ಸಂಸತ್​ನ ಮಾನವ ಹಕ್ಕು ವಿಭಾಗದ ಕಾರ್ಯದರ್ಶಿ ಲಾಲ್ ಚಂದ್ ಮಲ್ಹಿ, ‘ಸಮಾಜ ಘಾತುಕ ಶಕ್ತಿಗಳು ಈ ಘಟನೆಗೆ ಕಾರಣ. ಸರ್ಕಾರ ಇಂತಹ ವಿಚ್ಛಿದ್ರಕಾರಿ ಶಕ್ತಿಗಳನ್ನು ಮಟ್ಟಹಾಕಬೇಕು ಎಂದು ಒತ್ತಾಯಿಸಿದ್ದಾರೆ.

Published On - 6:00 pm, Thu, 31 December 20