ನನ್ನ ಭೇಟಿಯನ್ನು ಭಾರತ-ಪಾಕ್ ದ್ವಿಪಕ್ಷೀಯ ಸಂಬಂಧಗಳ ದೃಷ್ಟಿಯಿಂದ ನೋಡಬಾರದು: ಬಿಲಾವಲ್ ಭುಟ್ಟೋ ಜರ್ದಾರಿ

ಗುರುವಾರ ಪ್ರಸಾರವಾದ ದುನಿಯಾ ನ್ಯೂಸ್‌ನಲ್ಲಿ ಕಾರ್ಯಕ್ರಮವೊಂದರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಂದಿನ ತಿಂಗಳು ಗೋವಾದಲ್ಲಿ ನಡೆಯಲಿರುವ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸುವುದಾಗಿ ಹೇಳಿದ್ದಾರೆ

ನನ್ನ ಭೇಟಿಯನ್ನು ಭಾರತ-ಪಾಕ್ ದ್ವಿಪಕ್ಷೀಯ ಸಂಬಂಧಗಳ ದೃಷ್ಟಿಯಿಂದ ನೋಡಬಾರದು: ಬಿಲಾವಲ್ ಭುಟ್ಟೋ ಜರ್ದಾರಿ
ಬಿವಾವಲ್ ಭುಟ್ಟೋ ಜರ್ದಾರಿ
ರಶ್ಮಿ ಕಲ್ಲಕಟ್ಟ

Updated on: Apr 21, 2023 | 1:57 PM

ಭಾರತದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ ಮಂಡಳಿಯ(Shanghai Cooperation Organization Council) ಸಭೆಯಲ್ಲಿ ಭಾಗವಹಿಸುವುದು ಎಸ್​​ಸಿಒ ಚಾರ್ಟರ್‌ಗೆ ಇಸ್ಲಾಮಾಬಾದ್‌ನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇದನ್ನು ದ್ವಿಪಕ್ಷೀಯ ಸಂಬಂಧಗಳ ದೃಷ್ಟಿಯಿಂದ ನೋಡಬಾರದು ಎಂದು ಪಾಕಿಸ್ತಾನದ (Pakistan) ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ (Bilawal Bhutto-Zardari) ಹೇಳಿದ್ದಾರೆ. ಗುರುವಾರ ಪ್ರಸಾರವಾದ ದುನಿಯಾ ನ್ಯೂಸ್‌ನಲ್ಲಿ ಕಾರ್ಯಕ್ರಮವೊಂದರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಂದಿನ ತಿಂಗಳು ಗೋವಾದಲ್ಲಿ ನಡೆಯಲಿರುವ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸುವುದಾಗಿ ಹೇಳಿದ್ದಾರೆ. ನಾವು ಎಸ್​​ಸಿಒ ಚಾರ್ಟರ್‌ಗೆ ಬದ್ಧರಾಗಿದ್ದೇವೆ. ಈ ಭೇಟಿಯನ್ನು ದ್ವಿಪಕ್ಷೀಯವಾಗಿ ನೋಡಬಾರದು. ಇದನ್ನು ಎಸ್​​ಸಿಒ ಸಂದರ್ಭದಲ್ಲಿ ನೋಡಬೇಕು ಎಂದಿದ್ದಾರೆ.

ಮೇ 4-5 ರಂದು ಗೋವಾದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆಯ ವಿದೇಶಾಂಗ ಮಂತ್ರಿಗಳ (CFM) ಸಭೆಗೆ ಭುಟ್ಟೋ ಪಾಕಿಸ್ತಾನದ ನಿಯೋಗದ ನೇತೃತ್ವ ವಹಿಸಲಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಗುರುವಾರ ತಿಳಿಸಿದೆ. ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ಮುಮ್ತಾಜ್ ಜಹ್ರಾ ಬಲೂಚ್ ಗುರುವಾರ ವಾರದ ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಆಹ್ವಾನದ ಮೇರೆಗೆ ಭುಟ್ಟೋ-ಜರ್ದಾರಿ ಎಸ್‌ಸಿಒ-ಸಿಎಫ್‌ಎಂ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಭೆಯಲ್ಲಿನ ನಮ್ಮ ಭಾಗವಹಿಸುವಿಕೆಯು ಎಸ್​​ಸಿಒ ಚಾರ್ಟರ್ ಮತ್ತು ಪ್ರಕ್ರಿಯೆಗೆ ಪಾಕಿಸ್ತಾನದ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಪಾಕಿಸ್ತಾನವು ತನ್ನ ವಿದೇಶಾಂಗ ನೀತಿಯ ಆದ್ಯತೆಗಳಲ್ಲಿ ಪ್ರದೇಶಕ್ಕೆ ನೀಡುವ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ವಕ್ತಾರರು ಹೇಳಿದರು.

ಸುಮಾರು 12 ವರ್ಷಗಳ ನಂತರ ಭಾರತಕ್ಕೆ ಭೇಟಿ ನೀಡಲಿರುವ ಪಾಕಿಸ್ತಾನದ ಮೊದಲ ವಿದೇಶಾಂಗ ಸಚಿವರಾಗಿದ್ದಾರೆ ಬಿಲಾವಲ್ ಭುಟ್ಟೋ. 2011ರಲ್ಲಿ ಆಗಿನ ಪಾಕ್ ವಿದೇಶಾಂಗ ಸಚಿವೆ ಹಿನಾ ರಬ್ಬಾನಿ ಖಾರ್ ಭಾರತಕ್ಕೆ ಭೇಟಿ ನೀಡಿದ್ದರು. 2014ರಲ್ಲಿ ನವಾಜ್ ಶೆರೀಫ್ ಭೇಟಿ ನೀಡಿದ್ದರು. ಮುಂಬರುವ ವಿದೇಶಾಂಗ ಸಚಿವರ ಸಭೆಗೆ ಭಾರತವು ಪಾಕಿಸ್ತಾನ ಮತ್ತು ಚೀನಾ ಸೇರಿದಂತೆ ಶಾಂಘೈ ಸಹಕಾರ ಸಂಘಟನೆಯ (SCO) ಎಲ್ಲಾ ಸದಸ್ಯರಿಗೆ ಔಪಚಾರಿಕವಾಗಿ ಆಹ್ವಾನಗಳನ್ನು ಕಳುಹಿಸಿದೆ.

ಇದನ್ನೂ ಓದಿ:  ಸದ್ಯ ಆಫ್ರಿಕನ್ನರ ಪಾಲಿಗೆ ವೈದ್ಯೋ ನಾರಾಯಣ ಹರಿ ಆಗಿರುವ ಹಕ್ಕಿಪಿಕ್ಕಿಗಳು ಆಫ್ರಿಕಾಗೆ ಹೋಗಿದ್ದು ಹೇಗೆ? ಯುದ್ಧಪೀಡಿತ ಸುಡಾನ್‌ನಲ್ಲಿ ಈಗ ಇವರ ಪಡಿಪಾಟಲು ಹೇಗಿದೆ?

ಚೀನಾದ ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ಮತ್ತು ಅವರ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಕೂಡ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭಾರತವು 9 ಸದಸ್ಯರ ಗುಂಪಿನ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ ಮತ್ತು ಈ ವರ್ಷ ಪ್ರಮುಖ ಸಚಿವರ ಸಭೆಗಳು ಮತ್ತು ಶೃಂಗಸಭೆಯನ್ನು ನಡೆಸಲಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us