2022 ರ ರಸ್ತೆ ಅಪಘಾತಗಳ ಆತಂಕಕಾರಿ ವರದಿ ಪ್ರಕಟ- ಹೆಚ್ಚಿನ ಸಾವು ಸಂಭವಿಸಲು ಇದೇ ಕಾರಣವಂತೆ..

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು 2022ರ ಅವಧಿಯಲ್ಲಿನ ಅಪಘಾತಗಳ ವರದಿಯನ್ನು ಪ್ರಕಟಿಸಿದ್ದು, ಅಪಘಾತದ ವರದಿಯಲ್ಲಿ ಆತಂಕಕಾರಿಯಾದ ಮಾಹಿತಿಯನ್ನು ಹಂಚಿಕೊಂಡಿದೆ.

2022 ರ ರಸ್ತೆ ಅಪಘಾತಗಳ ಆತಂಕಕಾರಿ ವರದಿ ಪ್ರಕಟ- ಹೆಚ್ಚಿನ ಸಾವು ಸಂಭವಿಸಲು ಇದೇ ಕಾರಣವಂತೆ..
2022 ರ ರಸ್ತೆ ಅಪಘಾತಗಳ ಆತಂಕಕಾರಿ ವರದಿ ಪ್ರಕಟ
Praveen Sannamani

Updated on: Nov 07, 2023 | 8:13 PM

ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ವಾಹನಗಳ ಸಂಖ್ಯೆ ಹೆಚ್ಚಳದೊಂದಿಗೆ ರಸ್ತೆ ಅಪಘಾತ (Road Accident) ಪ್ರಕರಣಗಳು ಕೂಡಾ ಹೆಚ್ಚಳವಾಗುತ್ತಿವೆ. ಅಪಘಾತ ಪ್ರಕರಣ ತಗ್ಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರಂತರವಾಗಿ ಪ್ರಯತ್ನಿಸುತ್ತಿದ್ದರೂ ಕೂಡಾ ಸಾವು ನೋವುಗಳು ಹೆಚ್ಚುತ್ತಿವೆ.

ಕೇಂದ್ರ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು 2022ರ ಅವಧಿಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ವರದಿ ಪ್ರಕಟಿಸಿದ್ದು, ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಇಲಾಖೆಗಳಿಂದ ಪಡೆದ ಮಾಹಿತಿಯ ಆಧರಿಸಿದ ಆತಂಕಕಾರಿಯಾದ ಮಾಹಿತಿ ಹಂಚಿಕೊಂಡಿದೆ. ಭಾರತದಲ್ಲಿ ಕಳೆದ ವರ್ಷ ಒಟ್ಟು 4,61,312 ರಸ್ತೆ ಅಪಘಾತಗಳು ಸಂಭವಿಸಿದ್ದು, ಇದರಲ್ಲಿ ಬರೋಬ್ಬರಿ 1,68,491 ಜನ ಪ್ರಾಣಕಳೆದುಕೊಂಡಿದ್ದಾರೆ.

‘ಭಾರತದಲ್ಲಿ ರಸ್ತೆ ಅಪಘಾತಗಳು – 2022’ ರ ಡೇಟಾ ಪ್ರಕಾರ ಭಾರತದಲ್ಲಿ ಸಂಭವಿಸುವ ಅಪಘಾತಗಳು 2022ರಲ್ಲಿ ವರ್ಷದಿಂದ ವರ್ಷಕ್ಕೆ ಶೇ. 11.9 ರಷ್ಟು ಹೆಚ್ಚಳ ಮತ್ತು ಸಾವು ಪ್ರಕರಣಗಳು ಶೇ. 9.4 ರಷ್ಟು ಹೆಚ್ಚಳವಾಗಿರುವುದು ಬಹಿರಂಗವಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಅಪಘಾತದಲ್ಲಿ ಗಾಯಾಳುಗಳ ಸಂಖ್ಯೆ ಶೇ. 15.3 ಏರಿಕೆಯಾಗಿದ್ದು, ಈ ಅಂಕಿಅಂಶಗಳು ರಸ್ತೆ ಸುರಕ್ಷತೆಯಲ್ಲಿ ಸಮಗ್ರ ಸುಧಾರಣೆಯ ಅಗತ್ಯತೆಯನ್ನು ಒತ್ತಿ ಹೇಳುತ್ತಿದೆ.

ಇದನ್ನೂ ಓದಿ: ಭಾರತ್ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಮಿಂಚಲು ಸಜ್ಜಾಗಿವೆ ಡಜನ್ ಕಾರುಗಳು..

ಭಾರತದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣವೆಂದರೆ ಅತಿವೇಗದ ಚಾಲನೆ ಎಂದು ಗುರುತಿಸಲಾಗಿದ್ದು, ತದನಂತರದಲ್ಲಿ ಅಜಾಗರೂಕ ಚಾಲನೆ, ಕುಡಿದು ವಾಹನ ಚಾಲನೆ, ಸಂಚಾರ ನಿಯಮ ಪಾಲಿಸದಿರುವುದು ಕೂಡಾ ಪ್ರಮುಖ ಕಾರಣಗಳಾಗಿವೆ. ಇದರಲ್ಲಿ ಮತ್ತೊಂದು ಆತಂಕ ಮಾಹಿತಿಯೆಂದರೆ ಕಳೆದ ವರ್ಷದ ಅಪಘಾತದಲ್ಲಿ ಮರಣ ಹೊಂದಿದವರಲ್ಲಿ ಶೇ. 40 ರಷ್ಟು ಜನ 18 ರಿಂದ 35 ವಯಸ್ಸಿನವರು ಎಂದು ವರದಿ ಉಲ್ಲೇಖಿಸಲಾಗಿದೆ.

ಹಾಗೆಯೇ ಪ್ರತಿ ಗಂಟೆಗೆ ದೇಶಾದ್ಯಂತ ಬರೋಬ್ಬರಿ 19 ಮಂದಿ ಅಪಘಾತದಲ್ಲಿ ಪ್ರಾಣಕಳೆದುಕೊಳ್ಳುತ್ತಿದ್ದು, ತಮಿಳುನಾಡಿನಲ್ಲಿ ಅತಿ ಹೆಚ್ಚು ಅಪಘಾತಗಳ ಸಂಖ್ಯೆ ದಾಖಲಾಗಿದ್ದರೆ ಉತ್ತರಪ್ರದೇಶದಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಜನ ಪ್ರಾಣಕಳೆದುಕೊಂಡಿದ್ದಾರೆ.

ಅಪಘಾತಗಳಿಗೆ ಕಾರಣವಾಗುವ ಅಂಶಗಳನ್ನು ಪರಿಹರಿಸಲು ಸಮಗ್ರ ವಿಧಾನದ ಅಗತ್ಯವನ್ನು ವರದಿಯಲ್ಲಿ ಒತ್ತಿಹೇಳಲಾಗಿದ್ದು, ಇದಕ್ಕಾಗಿ ಚಾಲಕ ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಹೆಚ್ಚಿಸುವುದು, ರಸ್ತೆ ಮತ್ತು ವಾಹನದ ಪರಿಸ್ಥಿತಿಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಗಮನಹರಿಸಲು ಒತ್ತಿಹೇಳಲಾಗಿದೆ.

ಇದನ್ನೂ ಓದಿ: ಫೀಚರ್ಸ್ ವಿಚಾರದಲ್ಲಿ ಮಹೀಂದ್ರಾ ಎಕ್ಸ್ ಯುವಿ700 ಹಿಂದಿಕ್ಕಿದ ಟಾಟಾ ಸಫಾರಿ

ಇದಕ್ಕಾಗಿಯೇ ರಸ್ತೆ ಅಪಘಾತಗಳನ್ನು ತಡೆಯಲು ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತಿದ್ದು, ಇದು ರಸ್ತೆ ಬಳಕೆದಾರರ ನಡವಳಿಕೆ ಸುಧಾರಿಸುವುದರ ಜೊತೆಗೆ ರಸ್ತೆ ಮೂಲಸೌಕರ್ಯ ಅಭಿವೃದ್ದಿ, ವಾಹನ ಸುರಕ್ಷಾ ಗುಣಮಟ್ಟ ಸುಧಾರಿಸುವಿಕೆ, ಕಟ್ಟುನಿಟ್ಟಿನ ಸಂಚಾರ ನಿಯಮಗಳ ಜಾರಿ ಮತ್ತು ಅಪಘಾತಗಳ ತಡೆಗೆ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ವಿವಿಧ ಅಂಶಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ.

Published On - 8:09 pm, Tue, 7 November 23

Praveen Sannamani

Praveen Sannamani is a enthusiast and passionate Journalist in Kannada Language. Automobile and Current affairs are the interested areas

Follow Us