ಬಜೆಟ್ ಪೂರ್ವ ಹಲ್ವಾ ಸಮಾರಂಭ; ಸಿಹಿ ಹಂಚಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಬಜೆಟ್ ತಯಾರಿಕೆಯ ಲಾಕ್ ಇನ್ ಪ್ರಕ್ರಿಯೆಯು ಪ್ರಾರಂಭವಾಗುವ ಮೊದಲು ಸಾಂಪ್ರದಾಯಿಕ ಹಲ್ವಾ ಸಮಾರಂಭವನ್ನು ಪ್ರತಿ ವರ್ಷ ನಡೆಸಲಾಗುತ್ತದೆ. ಮುಂಬರುವ ಬಜೆಟ್‌ನ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಮತ್ತು ಅಂತಿಮವಾಗಿ ಸಂಸತ್ತಿನಲ್ಲಿ ಮಂಡಿಸುವ ಮೊದಲು ಯಾವುದೇ ಸೋರಿಕೆಯನ್ನು ತಡೆಯಲು ಲಾಕ್-ಇನ್ ಪ್ರಕ್ರಿಯೆಯನ್ನು ಆಚರಿಸಲಾಗುತ್ತದೆ.

ಬಜೆಟ್ ಪೂರ್ವ ಹಲ್ವಾ ಸಮಾರಂಭ; ಸಿಹಿ ಹಂಚಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಹಲ್ವಾ ಸಮಾರಂಭ
ರಶ್ಮಿ ಕಲ್ಲಕಟ್ಟ

Updated on: Jan 24, 2024 | 9:03 PM

ದೆಹಲಿ ಜನವರಿ 24: ಬುಧವಾರ ಸಂಜೆ ದೆಹಲಿಯ ನಾರ್ತ್ ಬ್ಲಾಕ್‌ನಲ್ಲಿರುವ ಕೇಂದ್ರ ಹಣಕಾಸು ಸಚಿವಾಲಯದ ಪ್ರಧಾನ ಕಚೇರಿಯಲ್ಲಿ ಮಧ್ಯಂತರ ಕೇಂದ್ರ ಬಜೆಟ್ 2024 ರ (interim Union Budget 2024)ತಯಾರಿ ಪ್ರಕ್ರಿಯೆಯ ಅಂತಿಮ ಹಂತವನ್ನು ಗುರುತಿಸುವ ಸಾಂಪ್ರದಾಯಿಕ ‘ಹಲ್ವಾ ಸಮಾರಂಭ’ (Halwa Ceremony) ನಡೆಯಿತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ದೊಡ್ಡಗಾತ್ರದ  ಕಬ್ಬಿಣದ ಬಾಣಲೆಯಲ್ಲಿದ್ದ ಹಲ್ವಾವನ್ನು ಸಚಿವಾಲಯದ ಅಧಿಕಾರಿಗಳಿಗೆ ಹಂಚಿದ್ದಾರೆ. ಸಚಿವೆ ಅಧಿಕಾರಿಗಳಿಗೆ ಹಲ್ವಾ ಬಡಿಸುವ ಮೊದಲು ಕೈಯಾಡಿಸಿದ್ದಾರೆ.  ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ.ಭಾಗವತ್ ಕರದ್ ಅವರು ಕೂಡಾ ಸಮಾರಂಭದಲ್ಲಿ ಭಾಗವಹಿಸಿದ್ದರು.

ಬಜೆಟ್ ತಯಾರಿಕೆಯ ಲಾಕ್ ಇನ್ ಪ್ರಕ್ರಿಯೆಯು ಪ್ರಾರಂಭವಾಗುವ ಮೊದಲು ಸಾಂಪ್ರದಾಯಿಕ ಹಲ್ವಾ ಸಮಾರಂಭವನ್ನು ಪ್ರತಿ ವರ್ಷ ನಡೆಸಲಾಗುತ್ತದೆ. ಮುಂಬರುವ ಬಜೆಟ್‌ನ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಮತ್ತು ಅಂತಿಮವಾಗಿ ಸಂಸತ್ತಿನಲ್ಲಿ ಮಂಡಿಸುವ ಮೊದಲು ಯಾವುದೇ ಸೋರಿಕೆಯನ್ನು ತಡೆಯಲು ಲಾಕ್-ಇನ್ ಪ್ರಕ್ರಿಯೆಯನ್ನು ಆಚರಿಸಲಾಗುತ್ತದೆ.


ಆಚರಣೆಯ ಪ್ರಕಾರ, ಬಜೆಟ್ ತಯಾರಿಕೆಯ ಪ್ರಕ್ರಿಯೆಯೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಎಲ್ಲರಿಗೂ ಭಾರತೀಯ ಸಿಹಿಭಕ್ಷ್ಯವನ್ನು ನೀಡಲಾಗುತ್ತದೆ. ಸಮಾರಂಭದ ನಂತರ, ಹಣಕಾಸು ಸಚಿವರು ಅಂತಿಮವಾಗಿ ಬಜೆಟ್ ಮಂಡಿಸುವವರೆಗೆ ಅಧಿಕಾರಿಗಳು ಹಣಕಾಸು ಸಚಿವಾಲಯದಲ್ಲಿ ಇರಬೇಕಾಗುತ್ತದೆ.

ಈ ಆಚರಣೆಯು ದಶಕಗಳಿಂದನಡೆದು ಬರುತ್ತಿದ್ದು ವಿಶೇಷವಾದದ್ದನ್ನು ಪ್ರಾರಂಭಿಸುವ ಮೊದಲು ಸಿಹಿ ತಿನ್ನುವ ಭಾರತೀಯ ಸಂಪ್ರದಾಯದಿಂದ ಪ್ರೇರಿತವಾಗಿದೆ. ಆಯವ್ಯಯವನ್ನು ಸಿದ್ಧಪಡಿಸುವಲ್ಲಿ ತೊಡಗಿಸಿಕೊಂಡಿರುವವರೆಲ್ಲರ ಶ್ರಮವನ್ನು ಅಂಗೀಕರಿಸುವ ಸೂಚಕವೂ ಆಗಿದೆ.

ಫೆಬ್ರವರಿ 1 ರಂದು ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಮಧ್ಯಂತರ ಬಜೆಟ್ ಸಾಮಾನ್ಯವಾಗಿ ಲೋಕಸಭೆ ಚುನಾವಣೆಯ ನಂತರ ಸರ್ಕಾರ ರಚನೆಯಾಗುವವರೆಗೆ ಮಧ್ಯಂತರ ಅವಧಿಯ ಹಣಕಾಸಿನ ಅಗತ್ಯಗಳನ್ನು ನೋಡಿಕೊಳ್ಳುತ್ತದೆ.

ಇದನ್ನೂ ಓದಿ:  Halwa Ceremony: ಬಜೆಟ್ ಮಂಡನೆಗೆ ಮುನ್ನ ಹಲ್ವಾ ತಿನಿಸುವ ಕಾರ್ಯಕ್ರಮ ಯಾಕೆ ನಡೆಯುತ್ತದೆ? ಏನಿದರ ವಿಶೇಷತೆ?

ಬಜೆಟ್ ತಯಾರಿಸುವ ಶ್ರಮ ಅಷ್ಟಿಷ್ಟಲ್ಲ…

ಬಜೆಟ್ ಅನ್ನು ತಯಾರಿಸುವ ಕಾರ್ಯ ಬಹಳ ವಿಶೇಷವಾದುದು. ಬಜೆಟ್ ಮಂಡನೆ ಆಗುವವರೆಗೂ ಇದನ್ನು ಬಹಳ ರಹಸ್ಯದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಇದರಲ್ಲಿ ತೊಡಗಿರುವ ಎಲ್ಲಾ ಸಿಬ್ಬಂದಿಯನ್ನೂ ಪ್ರತ್ಯೇಕವಾಗಿ ಇಡಲಾಗುತ್ತದೆ. ಬಜೆಟ್ ಮಂಡನೆ ಆಗುವವರೆಗೂ ಇವರಿಗೆ ಹೊರಜಗತ್ತಿನ ಸಂಪರ್ಕವೇ ಇರುವುದಿಲ್ಲ.

ಗುಪ್ತಚರರ ಕಣ್ಗಾವಲು ಸದಾ ಇರುತ್ತದೆ. ತುರ್ತು ಕರೆಗೆ ಮಾತ್ರವೇ ಆಸ್ಪದ ಇರುತ್ತದೆ. ಫೋನ್ ಮಾಡಿದರೂ ಅದರ ಮೇಲೂ ಕಿವಿ ಇರುತ್ತದೆ. ಪ್ರಬಲ ಸೈಬರ್ ಸೆಕ್ಯೂರಿಟಿ ವ್ಯವಸ್ಥೆ ಇರುತ್ತದೆ. ಹಣಕಾಸು ಸಚಿವರು ಮಾತ್ರವೇ ಇವರಿರುವ ಸ್ಥಳಕ್ಕೆ ಹೋಗಿ ಬರಬಹುದು. ಅವರು ಹೋದರೂ ಅಲ್ಲಿಂದ ಮೊಬೈಲ್ ಫೋನ್ ಬಳಸಲು ನಿರ್ಬಂಧ ಇರುತ್ತದೆ.ಈಗ ಬಜೆಟ್ ಪುಸ್ತಕಗಳನ್ನು ಮುದ್ರಿಸುವ ಕಾರ್ಯ ಕೈಬಿಡಲಾಗಿದೆ. ಎಲ್ಲವೂ ಡಿಜಿಟಲ್ ಆಗಿದೆ. ಆದರೂ ಬಜೆಟ್ ತಯಾರಿಕೆಯ ಶ್ರಮ ಕಡಿಮೆ ಆಗಿಲ್ಲ. ಹೀಗಾಗಿ, ಹಲ್ವಾ ತಿನಿಸುವ ಕಾರ್ಯಕ್ರಮ ಇನ್ನೂ ಮುಂದುವರಿದುಕೊಂಡು ಬಂದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಶ್ಮಿ ಕಲ್ಲಕಟ್ಟ

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us