ಕ್ರೀಮ್ ಬನ್ ಮೂಲಕ ಹಣಕಾಸು ಸಚಿವೆಗೆ ಜಿಎಸ್​ಟಿ ಟಾಂಟ್ ಕೊಟ್ಟ ಹೋಟೆಲ್ ಉದ್ಯಮಿ; ನಿರ್ಮಲಾ ಕೊಟ್ಟ ಉತ್ತರ ಇದು

Cream Bun and Nirmala Sitharaman: ಕೊಯಮತ್ತೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೋಟೆಲ್ ಉದ್ಯಮಿಯೊಬ್ಬರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಟಾಂಟ್ ಕೊಟ್ಟ ಘಟನೆ ನಡೆದಿದೆ. ಬನ್​ಗೆ ಜಿಎಸ್​ಟಿ ಇಲ್ಲ, ಆದರೆ ಬನ್​ಗೆ ಕ್ರೀಮ್ ಹಾಕಿದ್ರೆ ಶೇ. 12 ಜಿಎಸ್​ಟಿ ಇರುತ್ತೆ. ಹೋಟೆಲ್ ಗ್ರಾಹಕರು ಬನ್ ಬೇರೆ, ಕ್ರೀಮ್ ಬೇರೆ ಕೊಡಿ ಎನ್ನುತ್ತಿದ್ದಾರಲ್ಲ ಎಂದು ನಿರ್ಮಲಾ ಸೀತಾರಾಮನ್ ಅವರೆದುರು ಡಿ ಶ್ರೀನಿವಾಸನ್ ತಮಾಷೆಯ ಪ್ರಸಂಗ ವಿವರಿಸಿದರು.

ಕ್ರೀಮ್ ಬನ್ ಮೂಲಕ ಹಣಕಾಸು ಸಚಿವೆಗೆ ಜಿಎಸ್​ಟಿ ಟಾಂಟ್ ಕೊಟ್ಟ ಹೋಟೆಲ್ ಉದ್ಯಮಿ; ನಿರ್ಮಲಾ ಕೊಟ್ಟ ಉತ್ತರ ಇದು
ನಿರ್ಮಲಾ ಸೀತಾರಾಮನ್

Updated on: Sep 13, 2024 | 3:38 PM

ಕೊಯಮತ್ತೂರು, ಸೆಪ್ಟೆಂಬರ್ 13: ಬಜೆಟ್, ತೆರಿಗೆ ಮತ್ತು ನಿರ್ಮಲಾ ಸೀತಾರಾಮನ್ ಸದ್ಯ ಒಳ್ಳೆಯ ಟ್ರೋಲಿಂಗ್ ಸರಕಾಗಿವೆ. ಸಿಕ್ಕಿದ್ದಕ್ಕೆಲ್ಲಾ ಟ್ಯಾಕ್ಸ್ ಹಾಕಲಾಗುತ್ತಿದೆ ಎನ್ನುವ ಮೀಮ್ಸ್​​ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದೇ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉಪಸ್ಥಿತಿಯಲ್ಲೇ ಹೋಟೆಲ್ ಉದ್ಯಮಿಯೊಬ್ಬರು ಜಿಎಸ್​ಟಿಯನ್ನು ಟ್ರೋಲ್ ಮಾಡಿದ ಘಟನೆ ನಡೆದಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರದ ಹೋಟೆಲ್ ಉದ್ಯಮಿ ಮತ್ತು ಕೊಯಮತ್ತೂರು ಜಿಲ್ಲಾ ಹೋಟೆಲ್ ಉದ್ಯಮಿಗಳ ಸಂಘದ ಅಧ್ಯಕ್ಷರೂ ಆಗಿರುವ ಡಿ ಶ್ರೀನಿವಾಸನ್ ಅವರು ಜಿಎಸ್​ಟಿ ತೆರಿಗೆಯ ಸಂಕೀರ್ಣತೆ ತಿಳಿಸಲು ಕ್ರೀಮ್ ಬನ್ ಉದಾಹರಣೆ ನೀಡಿದರು.

‘ಮೇಡಮ್, ಬನ್​ಗೆ ಜಿಎಸ್​ಟಿ ಇಲ್ಲ. ಆದರೆ, ಅದೇ ಬನ್​ಗೆ ಕ್ರೀಮ್ ಹಾಕಿ ಕ್ರೀಮ್ ಬನ್ ಆಗಿ ಮಾಡಿದರೆ ಅದಕ್ಕೆ ಶೇ. 12ರಷ್ಟು ಜಿಎಸ್​ಟಿ ಆಗುತ್ತದೆ. ಗ್ರಾಹಕರು ನಮಗೆ ಬನ್ ಮತ್ತು ಕ್ರೀಮ್ ಸಪರೇಟ್ ಆಗಿ ಕೊಡಿ, ನಾವೇ ಕ್ರೀಮ್ ಬನ್ ಮಾಡಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ’ ಎಂದು ಶ್ರೀನಿವಾಸನ್ ಈ ವೇದಿಕೆಯಲ್ಲಿ ಹೇಳಿದ್ದರು. ಅವರ ಮಾತಿಗೆ ಸಭಾಂಗಣದಲ್ಲಿದ್ದವರೆಲ್ಲರೂ ಘೊಳ್ಳೆಂದು ನಕ್ಕರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಅಲ್ಲಿಯೇ ಇದ್ದರು.

ಇದನ್ನೂ ಓದಿ: Maharatna PSU: ನವರತ್ನದಿಂದ ಮಹಾರತ್ನ ಸ್ಥಾನಮಾನ ಪಡೆಯಲಿರುವ ಬೆಂಗಳೂರಿನ ಎಚ್​ಎಎಲ್

ವಿವಿಧ ಜಿಎಸ್​ಟಿ ದರಗಳು ಹೋಟೆಲ್ ಉದ್ಯಮಿಗಳಿಗೆ ತಲೆನೋವಾಗಿದೆ ಎನ್ನುವ ಸಂಗತಿಯನ್ನು ವಿವರಿಸುವ ಪ್ರಯತ್ನ ಡಿ ಶ್ರೀನಿವಾಸನ್ ಅವರಿಂದಾಯಿತು. ಹೋಟೆಲ್​ಗೆ ಬರುವ ಕುಟುಂಬಗಳು ವಿವಿಧ ಆಹಾರವನ್ನು ಆರ್ಡರ್ ಮಾಡಿದಾಗ ಎಷ್ಟು ತೆರಿಗೆ ವಿಧಿಸಬೇಕು ಎಂದು ಲೆಕ್ಕ ಹಾಕಲು ಕಂಪ್ಯೂಟರ್ ಸಿಸ್ಟಂಗೂ ಕಷ್ಟವಾಗುತ್ತಿದೆ ಎಂದು ತಮಾಷೆ ಮಾಡಿದ ಶ್ರೀನಿವಾಸನ್, ಎಲ್ಲಾ ಆಹಾರವಸ್ತುಗಳಿಗೂ ಸಮಾನ ಜಿಎಸ್​ಟಿ ತೆರಿಗೆ ವಿಧಿಸಬೇಕೆಂದು ಮನವಿ ಮಾಡಿದರು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಮಾತಿಗೆ ಕೆಲ ಹೊತ್ತಿನ ಬಳಿಕ ಪ್ರತಿಕ್ರಿಯಿಸಿದರು. ‘ಬಿಸಿನೆಸ್​ನಲ್ಲಿ ಬಹಳ ಅನುಭವ ಇರುವ ಹಿರಿಯ ವ್ಯಕ್ತಿ ಅವರು. ಜಿಎಸ್​ಟಿ ಮಂಡಳಿ ಎಲ್ಲವನ್ನೂ ಗಮನಿಸುತ್ತಿರುತ್ತದೆ. ಇಂಥ ತಮಾಷೆಯ ಮಾತುಗಳು ಜಿಎಸ್​ಟಿಯನ್ನು ಪ್ರಬಲವಾಗಿ ವಿರೋಧಿಸುವವರನ್ನು ಪ್ರಚೋದನೆಗೊಳಿಸುತ್ತದೆ’ ಎಂದು ಗಂಭೀರವಾಗಿ ತಿರುಗೇಟು ನೀಡಿದರು.

ಇದನ್ನೂ ಓದಿ: ಟಾಟಾ ಕನ್ಸಲ್ಟೆನ್ಸಿಯ 30,000 ಉದ್ಯೋಗಿಗಳಿಗೆ ಐಟಿ ಇಲಾಖೆಯಿಂದ ನೋಟೀಸ್; ತಂತ್ರಾಂಶ ದೋಷ ಕಾರಣ?

‘ಅವರು ಉಪ್ಪಿನಕಾಯಿ ಆಂಟಿಯನ್ನು ಪ್ರಶ್ನಿಸುತ್ತಿದ್ದರೆ ಹೇಗೆ ಪ್ರತಿಯೊಬ್ಬರೂ ನಗುತ್ತಿದ್ದಾರೆ ನೋಡಿ. ಆಕೆಗೆ ಏನಾದರೂ ಗೊತ್ತಾ. ನನಗೇನೂ ಬೇಸರವಾಗುವುದಿಲ್ಲ. ಜಿಎಸ್​ಟಿ ಬಹಳ ಸುಗಮವಾಗಿ ನಡೆಯಲು ಮತ್ತು ಜನರಿಗೆ ಹೊರೆಯಾಗದಂತಾಗಲು ಎಲ್ಲಾ ಅಗತ್ಯ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಜಿಎಸ್​ಟಿ ಮಂಡಳಿಯ ಎಲ್ಲಾ ಸಚಿವರೂ ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ’ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us