ಕಾಶ್ಮೀರದ ಬಜೆಟ್ ನಿಮ್ಮ ಐಎಂಎಫ್ ಸಾಲಕ್ಕಿಂತ ಎರಡು ಪಟ್ಟು ದೊಡ್ಡದು: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಭಾರತ ತರಾಟೆ

India rebuts Pakistan and OIC's allegations on Jammu Kashmir at UNHRC session: 61ನೇ ಯುಎನ್​ಎಚ್​ಆರ್​ಸಿ ಸಭೆಯಲ್ಲಿ ಕಾಶ್ಮೀರ ವಿಚಾರ ಕೆದಗಿದ ಪಾಕಿಸ್ತಾನಕ್ಕೆ ಭಾರತ ಶಾಸ್ತಿ ಮಾಡಿದೆ. ಜನರಿಂದ ಆಯ್ಕೆಯಾದ ಸರ್ಕಾರ ಒಮ್ಮೆಯೂ ಪೂರ್ಣಾವಧಿ ಅಧಿಕಾರ ಮಾಡಲು ಬಿಡದ ದೇಶವು ಭಾರತದ ಬಗ್ಗೆ ಪ್ರಜಾತಂತ್ರದ ಪಾಠ ಮಾಡುತ್ತಿದೆ ಎಂದು ಪಾಕಿಸ್ತಾನದ ವಿರುದ್ಧ ಭಾರತ ಹರಿಹಾಯ್ದಿದೆ. ಈ ಸಭೆಯಲ್ಲಿ ಅನುಪಮಾ ಸಿಂಗ್ ಅವರು ಭಾರತದ ಪ್ರತಿನಿಧಿಯಾಗಿದ್ದಾರೆ.

ಕಾಶ್ಮೀರದ ಬಜೆಟ್ ನಿಮ್ಮ ಐಎಂಎಫ್ ಸಾಲಕ್ಕಿಂತ ಎರಡು ಪಟ್ಟು ದೊಡ್ಡದು: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಭಾರತ ತರಾಟೆ
ಅನುಪಮಾ ಸಿಂಗ್
Image Credit source: PTI

Updated on: Feb 26, 2026 | 12:43 PM

ನವದೆಹಲಿ, ಫೆಬ್ರುವರಿ 26: ಸ್ವಿಟ್ಜರ್​ಲ್ಯಾಂಡ್​ನ ಜಿನಿವಾದಲ್ಲಿ ನಡೆಯುತ್ತಿರುವ 61ನೇ ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಯ ಸಭೆಯಲ್ಲಿ (UNHRC) ಮಾನವ ಹಕ್ಕು ವಿಚಾರ ಕೆದಗಿದ ಪಾಕಿಸ್ತಾನಕ್ಕೆ ಭಾರತ ಝಾಡಿಸಿದೆ. ಜಮ್ಮು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಜನರ ಮೇಲೆ ಭಾರತ ಸರ್ಕಾರ ದೌರ್ಜನ್ಯ ಎಸಗುತ್ತಿದೆ. ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ ಎನ್ನುವ ಪಾಕಿಸ್ತಾನದ ಆರೋಪಗಳಿಗೆ ಭಾರತ ತಿರುಗೇಟು ಕೊಟ್ಟಿದೆ. ಆರ್ಥಿಕ ಕುಸಿತ ಹೊಂದಿರುವ ಪಾಕಿಸ್ತಾನವು, ಅಭಿವೃದ್ಧಿ ಹೊಂದುತ್ತಿರುವ ಜಮ್ಮು ಕಾಶ್ಮೀರದ ಬಗ್ಗೆ ಮಾತನಾಡುವ ದಾರ್ಷ್ಟ್ಯತನ ತೋರಿದೆ ಎಂದು ಭಾರತ ಕಿಡಿಕಾರಿದೆ.

ಪಾಕಿಸ್ತಾನ ಐಎಂಎಫ್​ನಲ್ಲಿ ಕೇಳುತ್ತಿರುವ ಸಾಲದ ಹಣಕ್ಕಿಂತ ಎರಡು ಪಟ್ಟು ಹೆಚ್ಚಿದೆ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ಬಜೆಟ್ ಎಂದು ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿ ಸಭೆಯಲ್ಲಿ ಭಾರತ ಹೇಳಿದೆ. ಈ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿರುವ ಅನುಪಮಾ ಸಿಂಗ್ ಅವರು, ಪಾಕಿಸ್ತಾನದ ಸುಳ್ಳುಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: 1917ರಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಕೊಟ್ಟಿದ್ದ 35,000 ರೂ ಸಾಲ ವಾಪಸ್ ಕೇಳಲಿರುವ ಭಾರತೀಯ ಕುಟುಂಬ; ಈಗದರ ಮೌಲ್ಯ ಎಷ್ಟಿರಬಹುದು?

ಜಮ್ಮು ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ಆರೋಪಗಳಿಗೆ ಬೆಂಬಲ ನೀಡಿದ ಇಸ್ಲಾಮಿಕ್ ಸಹಕಾರ ಸಂಘಟನೆಯನ್ನೂ (ಒಐಸಿ) ಅನುಪಮಾ ಸಿಂಗ್ ತರಾಟೆಗೆ ತೆಗೆದುಕೊಂಡಿದ್ದಾರೆ. ಒಂದು ಸದಸ್ಯ ದೇಶಕ್ಕಾಗಿ ಈ ಸಂಘಟನೆಯು ಇಕೋ ಚೇಂಬರ್​ನಂತೆ ಕೆಲಸ ಮಾಡುತ್ತಿದೆ ಎಂದು ಒಐಸಿಯನ್ನು ಟೀಕಿಸಿದ್ದಾರೆ.

ಅಕ್ರಮವಾಗಿ ವಶಪಡಿಸಿಕೊಂಡಿರುವುದು ಪಾಕಿಸ್ತಾನವೇ

‘ಜಮ್ಮು ಮತ್ತು ಕಾಶ್ಮೀರವು ಹಿಂದೆಯೂ, ಮುಂದೆಯೂ ಭಾರತದ ಅವಿಭಾಜ್ಯ ಅಂಗವಾಗಿಯೇ ಇರುತ್ತದೆ. 1947ರಲ್ಲಿ ಭಾರತದೊಂದಿಗಿನ ಅದರ ಸೇರ್ಪಡೆ ಸಂಪೂರ್ಣ ಕಾನೂನು ಬದ್ಧವಾಗಿಯೇ ಇತ್ತು. ಒಂದೇ ಸಮಸ್ಯೆ ಎಂದರೆ ಭಾರತದ ಭೂಭಾಗಗಳನ್ನು ಪಾಕಿಸ್ತಾನ ಆಕ್ರಮಿಸಿಕೊಂಡಿರುವುದು’ ಎಂದು ಹೇಳಿರುವ ಅನುಪಮಾ ಸಿಂಗ್ ಅವರು, ಈ ಭೂಭಾಗಗಳನ್ನು ಬಿಟ್ಟುಕೊಡುವಂತೆ ಆಗ್ರಹಿಸಿದ್ದಾರೆ. ಅನುಪಮಾ ಸಿಂಗ್ ಅವರು ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಿಗ್ಗಿಟ್ ಬಾಲ್ಟಿಸ್ತಾನ್ ಪ್ರದೇಶಗಳನ್ನು ಉಲ್ಲೇಖಿಸಿದ್ದರು.

ಇದನ್ನೂ ಓದಿ: ಕ್ಯಾಷ್ ಪೆಮೆಂಟ್​ನಿಂದ ಹಿಡಿದು ವಿತ್​ಡ್ರಾಯಲ್​ವರೆಗೆ, ಆದಾಯ ತೆರಿಗೆ ಇಲಾಖೆಯ ಕಣ್ಣಿಂದ ತಪ್ಪಿಸಿಕೊಳ್ಳಲಾಗದ 16 ಹಣಕಾಸು ವಹಿವಾಟುಗಳಿವು…

ಕನಸಿನ ಲೋಕದಲ್ಲಿದೆ ಪಾಕಿಸ್ತಾನ

ಕಣಿವೆ ರಾಜ್ಯವು ಅಭಿವೃದ್ಧಿವಂಚಿತವಾಗಿದೆ ಎನ್ನುವ ಪಾಕಿಸ್ತಾನದ ಆರೋಪಕ್ಕೆ ಯುಎನ್​ಎಚ್​ಆರ್​ಸಿ ಸಭೆಯಲ್ಲಿ ಭಾರತ ಕಟುವಾಗಿ ಪ್ರತ್ಯುತ್ತರ ಕೊಟ್ಟಿದೆ. ಕಾಶ್ಮೀರದಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಎನಿಸಿದ ಚೆನಾಬ್ ರೈಲ್ ಬ್ರಿಡ್ಜ್​ನ ಉದ್ಘಾಟನೆಯನ್ನು ಅನುಪಮಾ ಸಿಂಗ್ ಉಲ್ಲೇಖಿಸಿದ್ದಾರೆ. ‘ಚೆನಾಬ್ ರೈಲ್ ಬ್ರಿಡ್ಜ್ ಸುಳ್ಳು ಎನ್ನುವುದಾದರೆ ಪಾಕಿಸ್ತಾನ ಯಾವುದೋ ಭ್ರಮೆಯಲ್ಲಿರಬಹುದು, ಅಥವಾ ಲಾ ಲಾ ಲ್ಯಾಂಡ್ನಲ್ಲಿ (ಕನಸಿನ ಲೋಕ) ವಾಸಿಸುತ್ತಿರಬಹುದು’ ಎಂದು ಸಿಂಗ್ ತಿವಿದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us