ತೈಲ ಶೋಧಕರಿಗೆ ರಾಯಲ್ಟಿ ರಿಯಾಯಿತಿ; ಇಂಧನ ಕೊರತೆ ಕಡಿಮೆ ಮಾಡಲು ಸರ್ಕಾರ ಕಸರತ್ತು

Govt Slashes Oil/Gas Exploration Royalties: ಕಚ್ಚಾ ತೈಲ ಮತ್ತು ಅನಿಲ ಆಮದು ಅವಲಂಬನೆ ಕಡಿಮೆ ಮಾಡಲು ಕೇಂದ್ರ ಸರ್ಕಾರವು ಪರಿಶೋಧನೆ ಹಾಗೂ ಉತ್ಪಾದನೆಯ ರಾಯಲ್ಟಿ ದರಗಳನ್ನು ಕಡಿತಗೊಳಿಸಿದೆ. ವಿಶೇಷವಾಗಿ ಕಠಿಣ ಭೌಗೋಳಿಕ ಪ್ರದೇಶಗಳಲ್ಲಿನ ಉತ್ಪಾದನೆಗೆ ಈ ರಿಯಾಯಿತಿ ಅನ್ವಯ. ಇದು ದೇಶೀಯ ಉತ್ಪಾದನೆ ಹೆಚ್ಚಿಸಿ, ವಿದೇಶಿ ವಿನಿಮಯ ಉಳಿಸಲು ಮತ್ತು ಇಂಧನ ಭದ್ರತೆ ಬಲಪಡಿಸಲು ಸಹಕಾರಿ. ಆತ್ಮನಿರ್ಭರ ಭಾರತದಡಿ ಇಂಧನ ಸ್ವಾವಲಂಬನೆ ಸಾಧಿಸಲು ಹೂಡಿಕೆಗೆ ಪ್ರೇರಣೆ ನೀಡುವ ಮಹತ್ವದ ಹೆಜ್ಜೆ ಇದು.

ತೈಲ ಶೋಧಕರಿಗೆ ರಾಯಲ್ಟಿ ರಿಯಾಯಿತಿ; ಇಂಧನ ಕೊರತೆ ಕಡಿಮೆ ಮಾಡಲು ಸರ್ಕಾರ ಕಸರತ್ತು
ತೈಲ ಉತ್ಪಾದನೆ

Updated on: May 12, 2026 | 5:01 PM

ನವದೆಹಲಿ, ಮೇ 12: ಭಾರತದ ಇಂಧನ ಅಗತ್ಯಗಳಿಗಾಗಿ ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ದೇಶೀಯವಾಗಿ ಕಚ್ಚಾ ತೈಲ ಹಾಗೂ ಅನಿಲ ಉತ್ಪಾದನೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ತೈಲ ಮತ್ತು ಅನಿಲದ ಪರಿಶೋಧನೆ ಹಾಗೂ ಉತ್ಪಾದನೆಯ ಮೇಲೆ ಕಂಪನಿಗಳು ಪಾವತಿಸಬೇಕಾದ ರಾಯಲ್ಟಿ ದರಗಳನ್ನು (ರಾಯಧನ) ಕಡಿಮೆ ಮಾಡಿದೆ. ವಿಶೇಷವಾಗಿ ಕಠಿಣ ಭೌಗೋಳಿಕ ಪ್ರದೇಶಗಳಲ್ಲಿ (Deepwater and Ultra-deepwater blocks) ನಡೆಯುವ ಉತ್ಪಾದನೆಗೆ ಈ ರಿಯಾಯಿತಿ ಅನ್ವಯಿಸಲಿದೆ.

ಪ್ರಸ್ತುತ ಭಾರತವು ತನ್ನ ಕಚ್ಚಾ ತೈಲದ ಅಗತ್ಯತೆಯ ಶೇ. 85ಕ್ಕಿಂತ ಹೆಚ್ಚು ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ದೇಶದ ಒಳಗೇ ಉತ್ಪಾದನೆ ಹೆಚ್ಚಿಸುವ ಮೂಲಕ ಈ ಆಮದು ಪ್ರಮಾಣವನ್ನು ತಗ್ಗಿಸುವುದು ಮತ್ತು ವಿದೇಶಿ ವಿನಿಮಯವನ್ನು ಉಳಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ.

ಇದನ್ನೂ ಓದಿ: ಇಂಧನ ಬಿಕ್ಕಟ್ಟು; ವರ್ಕ್ ಫ್ರಂ ಹೋಂ, ಪೆಟ್ರೋಲ್ ಖರೀದಿಮಿತಿ ಇತ್ಯಾದಿ ಕ್ರಮ ಜಾರಿಯಲ್ಲಿರುವ ದೇಶಗಳು

ರಾಯಲ್ಟಿ ಕಡಿತದಿಂದಾಗಿ ಒಎನ್‌ಜಿಸಿ (ONGC) ಮತ್ತು ರಿಲಾಯನ್ಸ್‌ನಂತಹ ದೊಡ್ಡ ಕಂಪನಿಗಳಿಗೆ ಹೆಚ್ಚಿನ ಲಾಭ ಸಿಗಲಿದೆ. ಇದು ಹೊಸ ತೈಲ ಬಾವಿಗಳ ಪತ್ತೆಗಾಗಿ ಹೆಚ್ಚಿನ ಹೂಡಿಕೆ ಮಾಡಲು ಕಂಪನಿಗಳಿಗೆ ಪ್ರೇರಣೆ ನೀಡುತ್ತದೆ.

ಉತ್ಪಾದನಾ ವೆಚ್ಚ ಕಡಿಮೆಯಾಗುವುದರಿಂದ ದೀರ್ಘಾವಧಿಯಲ್ಲಿ ದೇಶದ ಇಂಧನ ಭದ್ರತೆ ಬಲಗೊಳ್ಳಲಿದೆ. ಅಲ್ಲದೆ, ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾದಾಗ ದೇಶದ ಆರ್ಥಿಕತೆಯ ಮೇಲೆ ಬೀರುವ ಪರಿಣಾಮವನ್ನು ಇದು ತಗ್ಗಿಸಲಿದೆ.

ತೈಲ ಪರಿಶೋಧನೆ ಅಥವಾ ಆಯಿಲ್ ಎಕ್ಸ್​ಪ್ಲೋರೇಶನ್ ಅತಿ ಹೆಚ್ಚು ಅಪಾಯ ಮತ್ತು ಹೆಚ್ಚಿನ ಬಂಡವಾಳ ಬೇಡುವ ಕ್ಷೇತ್ರವಾಗಿದೆ. ಸರ್ಕಾರದ ಈ ತೆರಿಗೆ ವಿನಾಯಿತಿ ಕ್ರಮವು ಖಾಸಗಿ ಮತ್ತು ವಿದೇಶಿ ಹೂಡಿಕೆದಾರರನ್ನು ಭಾರತದತ್ತ ಸೆಳೆಯಲು ಸಹಕಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಭಾರತದ ಆರ್ಥಿಕ ಬೆಳವಣಿಗೆಯ ದರ ಶೇ. 6ಕ್ಕೆ ಇಳಿಕೆ? ಎಚ್‌ಎಸ್‌ಬಿಸಿ (HSBC) ಭವಿಷ್ಯವಾಣಿ ಮತ್ತು ಆರ್‌ಬಿಐ ಬಡ್ಡಿ ದರ ಏರಿಕೆ ಸಾಧ್ಯತೆ

ಕಳೆದ ವರ್ಷ ಸರ್ಕಾರವು ಓಆರ್​ಡಿ (ತೈಲಬಾವಿ ನಿಯಂತ್ರಕ ಮತ್ತು ಅಭಿವೃದ್ಧಿ) ಕಾಯ್ದೆ ಮತ್ತು ಪಿಎನ್​ಜಿ ನಿಯಮಗಳಿಗೆ ತಿದ್ದುಪಡಿ ತಂದಿತ್ತು. ತೈಲ ಕ್ಷೇತ್ರದಲ್ಲಿ ಹೂಡಿಕೆದಾರರಿಗೆ ಅನುಕೂಲವಾಗುವ ಸುಧಾರಣೆಗಳು ಈ ಕಾಯ್ದೆಯಲ್ಲಿವೆ. ಒಟ್ಟಾರೆಯಾಗಿ, ‘ಆತ್ಮನಿರ್ಭರ ಭಾರತ’ ಯೋಜನೆಯಡಿಯಲ್ಲಿ ಇಂಧನ ಕ್ಷೇತ್ರದಲ್ಲಿ ಸ್ವಯಂ ಅವಲಂಬನೆ ಸಾಧಿಸಲು ಈ ಕ್ರಮವು ದಿಕ್ಸೂಚಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us