ಇಂಧನ ಬಿಕ್ಕಟ್ಟು; ವರ್ಕ್ ಫ್ರಂ ಹೋಂ, ಪೆಟ್ರೋಲ್ ಖರೀದಿಮಿತಿ ಇತ್ಯಾದಿ ಕ್ರಮ ಜಾರಿಯಲ್ಲಿರುವ ದೇಶಗಳು
Iran-US Conflict Fuels Energy Crisis: ಇರಾನ್-ಅಮೆರಿಕ ಸಂಘರ್ಷದಿಂದ ಜಾಗತಿಕ ಇಂಧನ ಬಿಕ್ಕಟ್ಟು ತೀವ್ರಗೊಂಡಿದೆ. ತೈಲ ಬೆಲೆ ಏರಿಕೆ ಹಾಗೂ ಪೂರೈಕೆ ವ್ಯತ್ಯಯ ನಿಭಾಯಿಸಲು ಶ್ರೀಲಂಕಾ, ಬಾಂಗ್ಲಾದೇಶದಂತಹ ಹಲವು ದೇಶಗಳು 4-ದಿನ ಕೆಲಸ, ಇಂಧನ ರೇಷನಿಂಗ್, ಮನೆಯಿಂದ ಕೆಲಸ, ಶಾಲಾ-ಕಾಲೇಜು ರಜೆ ಹೆಚ್ಚಳದಂತಹ ಕಠಿಣ ಕ್ರಮಗಳನ್ನು ಕೈಗೊಂಡಿವೆ. ಭಾರತವೂ ಇಂಧನ ಬಳಕೆ ಕಡಿಮೆ ಮಾಡಲು ಪ್ರಧಾನಿ ಮೋದಿ ಕರೆ ನೀಡಿದ್ದು, ಜಾಗತಿಕ ಆರ್ಥಿಕ ಹೊಡೆತ ತಗ್ಗಿಸಲು ಯತ್ನಿಸುತ್ತಿದೆ.

ನವದೆಹಲಿ, ಮೇ 12: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕವಾಗಿ ಇಂಧನ ಬಿಕ್ಕಟ್ಟು ಎದುರಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಮತ್ತು ಆಮದು ವಸ್ತುಗಳ ಬಳಕೆ ಕಡಿಮೆ ಮಾಡಲು ವಿವಿಧ ಮಾರ್ಗೋಪಾಯಗಳನ್ನು ತಿಳಿಸಿ, ಅದನ್ನು ಪಾಲಿಸುವಂತೆ ಜನತೆ ಹಾಗೂ ಕಾರ್ಪೊರೇಟ್ ಸಂಸ್ಥೆಗಳಿಗೆ ಮನವಿ ಮಾಡಿದ್ದು ಹೌದು. ಈ ರೀತಿ, ತೈಲ ಬೆಲೆ ಏರಿಕೆ ಮತ್ತು ಪೂರೈಕೆಯಲ್ಲಿನ ವ್ಯತ್ಯಯವನ್ನು ನಿಭಾಯಿಸಲು ವಿಶ್ವದ ಅನೇಕ ದೇಶಗಳು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿವೆ.
4 ದಿನಗಳ ಕೆಲಸದ ಅವಧಿ (4-Day Work Week): ಇಂಧನ ಉಳಿತಾಯಕ್ಕಾಗಿ ಶ್ರೀಲಂಕಾ ಮತ್ತು ಫಿಲಿಪೈನ್ಸ್ನಂತಹ ದೇಶಗಳು ಸರ್ಕಾರಿ ಕಚೇರಿಗಳಲ್ಲಿ ವಾರಕ್ಕೆ ಕೇವಲ 4 ದಿನಗಳ ಕೆಲಸದ ಅವಧಿಯನ್ನು ಘೋಷಿಸಿವೆ. ಇದು ಸಾರಿಗೆಗಾಗಿ ಬಳಕೆಯಾಗುವ ಇಂಧನವನ್ನು ಗಣನೀಯವಾಗಿ ಕಡಿಮೆ ಮಾಡುವ ಉದ್ದೇಶ ಹೊಂದಿದೆ.
ಇಂಧನ ಖರೀದಿ ಮಿತಿ (Fuel Rationing): ಪೆಟ್ರೋಲ್ ಮತ್ತು ಡೀಸೆಲ್ ವ್ಯರ್ಥವಾಗುವುದನ್ನು ತಡೆಯಲು ಅನೇಕ ದೇಶಗಳಲ್ಲಿ ಫುಯೆಲ್ ರೇಷನಿಂಗ್ ಅಥವಾ ಖರೀದಿ ಮಿತಿಯನ್ನು ಜಾರಿಗೆ ತರಲಾಗಿದೆ. ವಾಹನ ಸವಾರರು ನಿಗದಿತ ಪ್ರಮಾಣದ ಇಂಧನವನ್ನು ಮಾತ್ರ ಖರೀದಿಸಲು ಅವಕಾಶ ನೀಡಲಾಗುತ್ತಿದೆ.
ಮನೆಯಿಂದಲೇ ಕೆಲಸ (Work From Home): ಹಲವು ದೇಶಗಳು ಇಂಧನ ಬಳಕೆಯನ್ನು ತಗ್ಗಿಸಲು ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಸಾಧ್ಯವಿರುವ ಕಡೆಗಳಲ್ಲಿ ‘ವರ್ಕ್ ಫ್ರಮ್ ಹೋಮ್’ ನೀಡುವಂತೆ ಸೂಚಿಸಿವೆ.
ಶಾಲಾ-ಕಾಲೇಜುಗಳ ಮೇಲೆ ಪರಿಣಾಮ: ಬಾಂಗ್ಲಾದೇಶ ಮತ್ತು ಲಾವೋಸ್ನಂತಹ ದೇಶಗಳಲ್ಲಿ ವಿದ್ಯುತ್ ಮತ್ತು ಇಂಧನ ಉಳಿಸಲು ಶಾಲಾ-ಕಾಲೇಜುಗಳ ರಜೆಯನ್ನು ಹೆಚ್ಚಿಸಲಾಗಿದೆ ಅಥವಾ ತರಗತಿಗಳ ಅವಧಿಯನ್ನು ಕಡಿತಗೊಳಿಸಲಾಗಿದೆ.
ವಿದ್ಯುತ್ ಉಳಿತಾಯ ಕ್ರಮಗಳು: ಸರ್ಕಾರಿ ಕಚೇರಿಗಳಲ್ಲಿ ಎಸಿ (AC) ಬಳಕೆಯನ್ನು ಸೀಮಿತಗೊಳಿಸುವುದು, ರಾತ್ರಿ ವೇಳೆ ಅನಗತ್ಯ ದೀಪಗಳನ್ನು ಆರಿಸುವುದು ಮತ್ತು ಸಾರ್ವಜನಿಕ ಸಾರಿಗೆಯನ್ನು ಬಳಸಲು ಜನರನ್ನು ಪ್ರೇರೇಪಿಸುವಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಇದನ್ನೂ ಓದಿ: ಎಐನಿಂದ ಉದ್ಯೋಗಗಳು ಹೋಗೋದು ಸುಳ್ಳಾ? ಕೆಲಸ ಸೇರುವ ಸಮಯ ಇದು ಎನ್ನುತ್ತಾರೆ ಜೆನ್ಸೆನ್ ಹುವಾಂಗ್
ವಿಶ್ವದ ಪ್ರಮುಖ ತೈಲ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ (Strait of Hormuz) ಮೇಲೆ ಇರಾನ್ ಯುದ್ಧದ ಪರಿಣಾಮ ಬೀರಿದೆ. ಇದರಿಂದಾಗಿ ಕಚ್ಚಾ ತೈಲ ಪೂರೈಕೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದ್ದು, ಬೆಲೆಗಳು ದಾಖಲೆ ಮಟ್ಟಕ್ಕೆ ಏರುತ್ತಿವೆ.
ಒಟ್ಟಾರೆಯಾಗಿ, ಯುದ್ಧದ ಕಾರಣದಿಂದ ಉಂಟಾಗಿರುವ ಆರ್ಥಿಕ ಹೊಡೆತವನ್ನು ತಗ್ಗಿಸಲು ವಿಶ್ವದ ಹಲವು ದೇಶಗಳು ತಮ್ಮದೇ ರೀತಿಯಲ್ಲಿ ಪ್ರಯತ್ನಗಳನ್ನು ಮಾಡುತ್ತಿವೆ. ಭಾರತ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಆಲೋಚನೆಗಳನ್ನು ಮಾಡಿ, ಪ್ರಯತ್ನ ಶುರುವಿಟ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




